ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಹೊಸ ವರ್ಷಾಚರಣೆ (New Year 2026) ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಹೀಗಾಗಿ ಎಲ್ಲೆಡೆ ಭದ್ರತೆ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತಿದೆ.
ಕರ್ನಾಟಕದ (Karnataka) ಹಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ (Bengaluru) ಫ್ಲೈಓವರ್ಗಳನ್ನು ಬಂದ್ ಮಾಡಲಾಗುತ್ತಿದೆ.
ಹೊಸ ವರ್ಷಾಚರಣೆ ವೇಳೆ ಏನಿರಲ್ಲ?
ಚಿಕ್ಕಬಳ್ಳಾಪುರದ ಸ್ಕಂದಗಿರಿ, ಆವಲಬೆಟ್ಟ, ಕೈವಾರದ ಬೆಟ್ಟ ಚಾರಣಕ್ಕೆ ಡಿ. 31 ರ ಸಂಜೆ 6ರಿಂದ ಜ. 1ರ ಬೆಳಗ್ಗೆ 7 ಗಂಟೆಯವರೆಗೂ ನಿರ್ಬಂಧ ಹೇರಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಶ್ರೀರಾಮದೇವರ ಬೆಟ್ಟ, ಸಂಗಮ, ಮೇಕೆದಾಟು ಮತ್ತು ಚುಂಚಿ ಫಾಲ್ಸ್ಗಳಿಗೆ ಡಿ. 31ರ ಸಂಜೆ 6ರಿಂದ ಜ. 1ರ ಬೆಳಗ್ಗೆ 6ರವರೆಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಪ್ರವಾಸಿತಾಣ ನಂದಿಗಿರಿಧಾಮಕ್ಕೆ ಡಿ. 31ರ ಮಧ್ಯಾಹ್ನ 2 ಗಂಟೆಯಿಂದ ಜನವರಿ 1ರ ಬೆಳಗ್ಗೆ 10ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೆ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6ರ ವರೆಗೆ ನಿರ್ಬಂಧ ಹೇರಲಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಧ್ಯರಾತ್ರಿ 12.30ರ ವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶವಿದ್ದು, ಪಟಾಕಿ ಸಿಡಿಸುವಂತಿಲ್ಲ. ಕೊಡಗಿನಲ್ಲಿ ರಾತ್ರಿ 10ರ ನಂತರ ಒಳಾಂಗಣದಲ್ಲಿ ಪಾರ್ಟಿ ಮಾಡಲು ಅವಕಾಶ. ಬೆಂಗಳೂರಿನ ಚರ್ಚ್ ಸ್ಟ್ರೀಟ್, ಎಂಜಿ ರಸ್ತೆಯಲ್ಲಿ ಒಮ್ಮೆ ಹೋಗಿ ಹೊರಹೋದವರಿಗೆ ಮರಳಿ ಎಂಟ್ರಿ ಇಲ್ಲ. ಸಂಜೆ 6ರ ನಂತರ ಸಿಲಿಕಾನ್ ಸಿಟಿಯಲ್ಲಿನ ಪಾರ್ಕ್ ಗಳನ್ನು ಬಂದ್ ಮಾಡಲಾಗುತ್ತಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ಗಳಲ್ಲಿ ಸಂಜೆಯ ನಂತರ ವಾಹನ ಸಂಚಾರ ಬಂದ್ ಇರಲಿದೆ.
ಸಂಭ್ರಮದಲ್ಲಿದ್ದವರಿಗೆ ಇರೋದು ಏನು?
ಬೆಂಗಳೂರಿನಲ್ಲಿ ತಡರಾತ್ರಿ 2ರ ವರೆಗೆ ಬಿಎಂಟಿಸಿ ಬಸ್ ಸಂಚಾರ ಇರಲಿದೆ. ಬೆಳಗ್ಗೆ 3ರ ವರೆಗೆ ನಮ್ಮ ಮೆಟ್ರೋ ಸೇವೆ ಇರಲಿದೆ. ರಾಜ್ಯದಾದ್ಯಂತ ಪಬ್, ಬಾರ್, ರೆಸ್ಟೋರೆಂಟ್ಗಳು ತಡರಾತ್ರಿ ವರೆಗೂ ತೆರೆದಿರುತ್ತವೆ. ಅಂಗಡಿಗಳು, ವಾಣಿಜ್ಯ ಮಳಿಗೆಗಳಿಗೆ ರಾತ್ರಿ 1ರ ವರೆಗೆ ಕಾರ್ಯ ನಿರ್ವಹಿಸಲು ಅವಕಾಶ ಇದೆ.
