ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.. ಆರ್‌ಸಿಬಿ ಲೆಜೆಂಡ್‌ ವಿರಾಟ್‌ ಕೊಹ್ಲಿಗಾಗಿ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಅನ್ನೋ ಶಾಕಿಂಗ್‌ ಮಾಹಿತಿಯನ್ನು ಸಿಐಡಿ ಟೀಂ ಕಲೆ ಹಾಕಿದೆ.. ಜೂನ್‌ 4ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ಆಯೋಜಿಸಿತ್ತು.

ಈ ವೇಳೆ ಆರ್‌ಸಿಬಿ ಅಭಿಮಾನಿಗಳು ನಿರೀಕ್ಷೆಗೂ ಮೀರಿ ಸೇರಿದ್ದರಿಂದ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿತ್ತು. ಈ ವೇಳೆ, 11 ಅಭಿಮಾನಿಗಳು ದುರಂತ ಅಂತ್ಯ ಕಂಡಿದ್ದರು.. ಇದರ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಪೊಲೀಸರು, ಹಲವು ವಿಚಾರಗಳನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ತನಿಖೆಯಲ್ಲಿ ಕಂಡುಬಂದ ಎಲ್ಲಾ ಅಂಶಗಳನ್ನು ಸಿಐಡಿ ವರದಿಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗಾಗಿ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇ ಘಟನೆಗೆ ಮುಖ್ಯ ಕಾರಣ ಎಂದು ಸಿಐಡಿ ತನಿಖೆಯಲ್ಲಿ ತಿಳಿದು ಬಂದಿದೆ.

ಜೂನ್‌ 3ರಂದು ಆರ್‌ಸಿಬಿ-ಪಂಜಾಬ್‌ ಐಪಿಎಲ್‌ ಫೈನಲ್ ಮ್ಯಾಚ್‌ ನಡೆದಿತ್ತು.. ಆ ಹೈವೋಲ್ಟೇಜ್‌ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿತ್ತು. 18 ವರ್ಷಗಳ ಬಳಿಕ ಐಪಿಎಲ್‌ ಕಪ್‌ ಗೆದ್ದಿದ್ದ ಆರ್‌ಸಿಬಿ ತಂಡದ ವಿಜಯೋತ್ಸವ ಆಚರಿಸಲು ನಿರ್ಧಾರ ಮಾಡಲಾಗಿತ್ತು.. ಆರ್​ಸಿಬಿ ಗೆಲುವಿನ ಮರುದಿನವೇ ಕಾರ್ಯಕ್ರಮ ಆಯೋಜಿಸಲು ಆರ್​ಸಿಬಿ ಸಿಇಓ ರಾಜೇಶ್ ಮೆನನ್, ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಮಿತಿ ಮೇಲೆ ಒತ್ತಡ ಹೇರಿದ್ದರು.

ಈ ಇಬ್ಬರು ವ್ಯಕ್ತಿಗಳಿಂದಾಗಿಯೇ‌ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಅನ್ನೋ ಮಾಹಿತಿಯನ್ನು ಸಿಐಡಿ ಕಲೆಹಾಕಿದೆ.. ಕಾರ್ಯಕ್ರಮ ತಡಮಾಡಿದರೆ ವಿರಾಟ್ ಕೊಹ್ಲಿ ಬರಲ್ಲ. ಹಾಗಾಗಿ ಜೂನ್ 4ರಂದೇ ಕಾರ್ಯಕ್ರಮ ಆಯೋಜಿಸಬೇಕು ಅಂತಾ ಕೊಹ್ಲಿ ಆಪ್ತರೂ ಆಗಿರುವ ಸೋಸಲೆ ಕೆಎಸ್​​ಸಿಎಗೆ ಒತ್ತಡ ಹಾಕಿದ್ದರು ಅನ್ನೋ ಮಾಹಿತಿ ಸಿಐಡಿಗೆ ಸಿಕ್ಕಿದೆ..

ಆದ್ರೆ, ಆರ್​​ಸಿಬಿ ವಿಜಯೋತ್ಸವ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡುವಂತೆ ಕರ್ನಾಟಕ ಪೊಲೀಸ್ ಇಲಾಖೆ ಹಾಗೂ ಕೆಎಸ್​​ಸಿಎ ಸಲಹೆ ನೀಡಿದ್ದವು. ಆದರೆ, ಕಾರ್ಯಕ್ರಮ ಮುಂದೂಡಿದರೆ ಕೊಹ್ಲಿ ಬರಲ್ಲ. ಅವರು ಬ್ರಿಟನ್​​ಗೆ ಹೋಗಬೇಕು ಎಂದು ಸೋಸಲೆ ಒತ್ತಡ ಹೇರಿದ್ದರು ಅಂತಾ ಸಿಐಡಿ ಮಾಹಿತಿ ಕಲೆ ಹಾಕಿದ್ದು, ಇದೀಗ ವಿರಾಟ್‌ ಕೊಹ್ಲಿ ಬುಡಕ್ಕೇ ಕಾಲ್ತುಳಿತ ಕೆಂಡ ಬಂದು ನಿಂತಿದೆ..

Share.
Leave A Reply