ಕಡುಬಡತನದಲ್ಲಿ ಹುಟ್ಟಿ ಬೆಳೆದು ಉನ್ನತ ಹುದ್ದೆ ಅಲಂಕರಿಸಿದ್ದ ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಆದ್ರೆ, ಅವರ ನಿಧನ ಇಡೀ ಕರುನಾಡಿನ ಮನ ಮಿಡಿಯುವಂತೆ ಮಾಡಿದೆ. ಅವರ ಕಾರ್ಯವೈಖರಿಯಿಂದಲೇ ಸದ್ದು ಮಾಡಿದ್ದ ಮಹಾಂತೇಶ್ ಬೀಳಗಿ ಅವರ ಸಾಧನೆ, ಅವರು ಆಡಿದ್ದ ಮಾತುಗಳು ಈಗ ಹೆಚ್ಚು ಸದ್ದು ಮಾಡುತ್ತಿವೆ.
ಈ ಹಿಂದೆ ಬೆಸ್ಕಾಂನ ಎಂಡಿ ಆಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಸೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಸೇರಿ ಐವರ ಜೊತೆ ಮಹಾಂತೇಶ್ ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ರು. ಈ ವೇಳೆ, ಏಕಾಏಕಿ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ಪಲ್ಟಿಯಾಗಿ ಮಹಾಂತೇಶ್ ಜೀವ ಬಿಟ್ಟಿದ್ದಾರೆ.

ಇನ್ನು, ಮಹಾಂತೇಶ್ ಬೀಳಗಿಯವರ ಊರು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣ. ಕಡುಬಡತನದಲ್ಲಿ ಹುಟ್ಟಿದ್ದ ಮಹಾಂತೇಶ್ ಐಎಎಸ್ ಅಧಿಕಾರಿಯಾಗಿದ್ದೇ ರೋಚಕ. ಡಿಗ್ರಿವರೆಗೂ ರಾಮದುರ್ಗದಲ್ಲಿ ಓದಿದ್ದ ಮಹಾಂತೇಶ್, ಕರ್ನಾಟಕ ಯುನಿವರ್ಸಿಟಿ ಧಾರವಾಡದಲ್ಲಿ ಮಾಸ್ಟರ್ಸ್ ಮುಗಿಸಿದ್ದರು. ತಂದೆ ಮೃತಪಟ್ಟ ಬಳಿಕ 4 ಜನ ಮಕ್ಕಳನ್ನ ತಾಯಿ ಸಾಕಿದ್ದರು. ಬೀಳಗಿ ಅವರ ತಾಯಿ ರೊಟ್ಟಿ ವ್ಯಾಪಾರ ಮಾಡಿ ಕುಟುಂಬ ಸಲಹುತ್ತಿದ್ರು. ಕಷ್ಟದ ಜೀವನದಲ್ಲಿ ಛಲ ಬಿಡದೇ ಓದಿ ಐಎಎಸ್, ಕೆಎಎಸ್ ಪಾಸ್ ಮಾಡಿದ್ದ ಮಹಾಂತೇಶ ಬೀಳಗಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಷ್ಟ ಪಟ್ಟು ಓದಿ ಕೆಎಎಸ್ ನಲ್ಲಿ 4ನೇ ರ್ಯಾಂಕ್ ಪಡೆದಿದ್ರು. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೇ ಕೊಡಬೇಕು ಅಂತಾ ಹೇಳಿಕೆ ನೀಡಿ ಮಹಾಂತೇಶ್ ಅವರು ಖ್ಯಾತಿ ಗಳಿಸಿದ್ರು.
ಮಹಾಂತೇಶ್ ಬೀಳಗಿ ಅವರು 2012ರ ಕರ್ನಾಟಕ ಕೇಡರ್ನ IAS ಅಧಿಕಾರಿಯಾಗಿದ್ರು. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಇನ್ನು ಮಹಾಂತೇಶ್ ಬೀಳಗಿ ಅವರು ಬೆಸ್ಕಾಂ ಎಂಡಿ ಸಹ ಆಗಿದ್ದರು. ಅಲ್ಲದೇ ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು. ಆದ್ರೀಗ ಮಹಾಂತೇಶ್ ಬೀಳಗಿ ಅವರು ವಿಧಿವಶರಾಗಿದ್ದಾರೆ.
ಇನ್ನು, ಮಹಾಂತೇಶ್ ಬೀಳಗಿ ಅವರು ತಮ್ಮ ಕಾರ್ಯವೈಖರಿಯಿಂದಲೇ ಕರುನಾಡಿನ ಮನೆ ಮಾತಾಗಿದ್ರು. ಪ್ರೀತಿಯ ಮಾತು, ಪ್ರಮಾಣಿಕ ಕೆಲಸಗಳಿಂದ ಕರ್ನಾಟಕ ತುಂಬ ಗುರುತಿಸಿಕೊಂಡವರು. ವಿದ್ಯಾರ್ಥಿಗಳು ಸಿಕ್ಕರೆ ಉತ್ಸಾಹ ತುಂಬಿಬರುವ ಮಾತುಗಳನ್ನು ಆಡದೆ ಮುಂದಕ್ಕೆ ಹೋಗ್ತಿರಲಿಲ್ಲ. ಸ್ವತಃ ಬಡತನದ ಬೇಗೆಯಲ್ಲಿ ಬೆಂದು, ಅಪಾರ ಅನುಭವಗಳನ್ನು ಬೆಳೆಸಿಕೊಂಡು ಉನ್ನತ ಸ್ಥಾನಕ್ಕೆ ಏರಿದ ಅಪರೂಪದ ವ್ಯಕ್ತಿ ಮಹಾಂತೇಶ್. ಆದ್ರೀಗ ವಿಧಿಯಾಟ ಅವರ ಬಾಳಲ್ಲಿ ಅಟ್ಟಹಾಸ ಮೆರೆದಿದ್ದು, ಗಣ್ಯರು ಕಂಬನಿ ಮಿಡಿದಿದ್ದಾರೆ.
