ಚಿಕ್ಕಮಗಳೂರು: ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಭೀಕರವಾಗಿ ಹತ್ಯೆಯಾಗಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಕಡೂರು (Kaduru) ತಾಲೂಕಿನ ಸಖರಾಪಟ್ಟಣದ (Sakarayapattana)ಲ್ಲಿ ನಡೆದಿದೆ. ಗಣೇಶಗೌಡ(38) ಕೊಲೆಯಾಗಿರುವ ಮುಖಂಡ. ಗಣೇಶ್ ಗ್ರಾಪಂನ ಸದಸ್ಯರಾಗಿದ್ದರು. ಅಲ್ಲದೇ, ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದು, ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದರು ಎನ್ನಲಾಗಿದೆ. ಆದರೆ, ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಎರಡು ಗುಂಪುಗಳ ಮಧ್ಯೆ ಪಟ್ಟಣದ ಬಾರ್ ವೊಂದರ ಬಳಿ ಗಲಾಟೆ ನಡೆದಿದೆ. ಅಲ್ಲಿ ಶಮನವಾಗುತ್ತಿದ್ದಂತೆ ಮತ್ತೆ ಅದೇ ಎರಡು ಗುಂಪುಗಳ ಮಧ್ಯೆ ಪಟ್ಟಣದ ಮಠದ ಹತ್ತಿರ ಗಲಾಟೆ ನಡೆದಿದೆ. ಅದು ವಿಕೋಪಕ್ಕೆ ತೆರಳಿ, ಮತ್ತೊಂದು ದುಷ್ಕರ್ಮಿಗಳ ತಂಡ ಗಣೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದೆ ಎನ್ನಲಾಗಿದೆ. ಅಲ್ಲದೇ, ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
