ಬೆಂಗಳೂರು: ಇತ್ತೀಚೆಗಷ್ಟೇ ಸಾರಿಗೆ ಇಲಾಖೆ ಮಹಿಳಾ ಉದ್ಯೋಗಿಗಳಿಗೆ ಋುತುಚಕ್ರದ ಒಂದು ದಿನ ರಜೆ ಘೋಷಿಸಿ ಆದೇಶ ಹೊರಡಿಸಿತ್ತು.ಇದರ ಬೆನ್ನಲ್ಲೇ ಈಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಶಿಕ್ಷಣ ಇಲಾಖೆ) ಮಹತ್ವದ ಆದೇಶ ಹೊರಡಿಸಿದೆ. ಹೀಗಾಗಿ ಇನ್ನು ಮುಂದೆ ಶಾಲಾ ಶಿಕ್ಷಕರಿಗೆ ಒಂದು ದಿನ ವೇತನ ಸಹಿತ ರಜೆ ಸಿಗಲಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಇನ್ನು ಮುಂದೆ ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಋತುಚಕ್ರ ರಜೆ ಮಂಜೂರು ಮಾಡಲಾಗಿದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಕಿಯರಿಗೆ ವೇತನ ಸಹಿತ ಋುತುಚಕ್ರ ರಜೆ ನೀಡುವಂತೆ ಸರಕಾರಕ್ಕೆ ಮನವಿ ಮಾಡಿತ್ತು. ಶಾಲಾ ಶಿಕ್ಷಕರ ಸಂಘದ ಮನವಿ ಉಲ್ಲೇಖಿಸಿರುವ ಇಲಾಖೆ, ಸೂಚನೆಯಂತೆ ವೇತನ ಸಹಿತ ರಜೆ ಮಂಜೂರು ಮಾಡಲಾಗಿದೆ.
ಸಾಂದರ್ಭಿಕ ರಜೆ ನೀಡಲು ಸಕ್ಷಮದ ಪ್ರಾಧಿಕಾರಿಯೂ ಋುತುಚಕ್ರ ರಜೆ ಮಂಜೂರು ಮಾಡಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ರಜೆ ಪಡೆಯಲು ಯಾವುದೇ ವೈದೈಕೀಯ ಪ್ರಮಾಣಪತ್ರದ ಅಗತ್ಯವಿಲ್ಲ. ರಜೆಯನ್ನು ಪ್ರತ್ಯೇಕವಾಗಿ ಹಾಜರಾತಿ ಪುಸ್ತಕದಲ್ಲಿ ನಮೂದಿಸಬೇಕು. ಋುತುಚಕ್ರದ ರಜೆಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳಬೇಕು. ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶವಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
