ರಾಜ್ಯ ಸರ್ಕಾರ ಧರ್ಮಸ್ಥಳದ ಧರ್ಮಾಧಿಕಾರಿ ಅವರನ್ನು ಅರೋಪಿ ಎಂದು ತೀರ್ಮಾನ ಮಾಡಿ ಅದಕ್ಕೆ ಬೇಕಾದ ಸಾಕ್ಷಿ ಈಗ ಹುಡುಕುತ್ತಿದೆ ಎಂದು ಪ್ರತಾಪ್‌ ಸಿಂಹ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ದೇವಸ್ಥಾನಕ್ಕೆ ಮೀನು ತಿಂದು ಹೋಗಿ ಜನರ ಭಾವನೆಗೆ ಧಕ್ಕೆ ತಂದವರು ಈಗ ಅಲ್ಲಿನ ನಂಬಿಕೆ ಹಾಳು ಮಾಡಲು ತನಿಖೆ ಮಾಡಿಸುತ್ತಿದ್ದಾರೆ. ಸೌಜನ್ಯ ಪ್ರಕರಣಕ್ಕೂ ಈಗ ನಡೆಯುತ್ತಿರುವ ಅಸ್ಥಿ ಹುಡುಕಾಟಕ್ಕೂ ಸಂಬಂಧವೇ ಇಲ್ಲ. ಸರ್ಕಾರ ಧರ್ಮಸ್ಥಳವನ್ನು ಕಬಳಿಸಲು ಈ ಪ್ರಯತ್ನ ಆರಂಭಿಸಿದೆ ಎಂದು ಸ್ಫೋಟಕ ಆರೋಪ ಮಾಡಿದರು.

ನೂರಾರು ಕೊಲೆಯಾಗಲು ಸಾಧ್ಯವೆ?
ಧರ್ಮಸ್ಥಳದಲ್ಲಿ ಸಾವಿರಾರು ಕೊಲೆಯಾಗಿದೆ ಎನ್ನುತ್ತಾರೆ. ಇದು ವಾಸ್ತವದಲ್ಲಿ ಸಾಧ್ಯವೇ? ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ಏನು ದಾವುದ್ ಇಬ್ರಾಹಿಂ ನಾ? ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗಿದೆ. ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ ಎಂದು ಆರೋಪಿಸಿದರು. ಒಂದೇ ಒಂದು ಸಾಕ್ಷಿ ಇಲ್ಲದೇ ಯಾಕೆ ವೀರೇಂದ್ರ ಹೆಗ್ಗಡೆ ಅವರನ್ನು ಆರೋಪಿ ಸ್ಥಾನಕ್ಕೆ ತರಲಾಗಿದೆ. ಆರೋಪಿಯನ್ನು ಮೊದಲೇ ನಿರ್ಧರಿಸಿ ಅದಕ್ಕೆ ಬೇಕಾದ ಸಾಕ್ಷಿ ಹುಡುಕುತ್ತಿರುವ ಮೊದಲ ಪ್ರಕರಣ ಇದು ಕಿಡಿಕಾರಿದರು.

ಧರ್ಮಸ್ಥಳ ಟಾರ್ಗೆಟ್
ಹಿಂದೂ ಸಮಾಜ ಪ್ರಜ್ಞಾವಂತಿಕೆ ಕಳೆದುಕೊಂಡಿದ್ದು ಧರ್ಮಸ್ಥಳ ಟಾರ್ಗೆಟ್ ಮಾಡಿರುವುದು ಸಮಾಜಕ್ಕೆ ಅರ್ಥವಾಗುತ್ತಿಲ್ಲ. ಧರ್ಮಸ್ಥಳದ ಬಗ್ಗೆ ಅಪನಂಬಿಕೆ ಮೂಡಿಸುವ ಕೆಲಸವನ್ನು ಇಸ್ಲಾಂ ಧರ್ಮದ ಯಾವನೋ ಒಬ್ಬ ಮಾಡುತ್ತಾನೆ. ಅದನ್ನು ಹಿಂದೂಗಳು ನಂಬುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸೌಜನ್ಯ ಪ್ರಕರಣದ ಬಗ್ಗೆ ನೋವಿದೆ
ಟೆಸ್ಟ್ ಮ್ಯಾಚ್‌ಗಿಂತಲೂ ಹೆಚ್ಚಾಗಿ ಧರ್ಮಸ್ಥಳದ ವಿಚಾರ ದಿನ‌ ನಡೆಯುತ್ತಿದೆ. ನಮ್ಮ ಧರ್ಮಾಧಿಕಾರಿ ಹೆಗ್ಗಡೆ ಅವರು ಯಾಕೆ ನಿಮಗೆ ಟಾರ್ಗೆಟ್? ಮೊದಲು ಅನಾಮಿಕನ ಪೂರ್ವಪರ ಬಹಿರಂಗ ಆಗಬೇಕು ಎಂದು ಆಗ್ರಹಿಸಿದರು. ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ನೋವಿದೆ. ನಾವೆಲ್ಲಾ ಸೌಜನ್ಯ ಪರ. ಮೂರು ತನಿಖಾ ಸಂಸ್ಥೆಯಿಂದ ತನಿಖೆಯಾಗಿದೆ. ಬೇರೆ ಇನ್ನೂ ಯಾವುದಾದರೂ ಮೂಲಕ ತನಿಖೆ ಆಗಬೇಕಿದ್ದರೆ ಸೌಜನ್ಯ ತಾಯಿ ಹೇಳಲಿ. ನಾವೇ ಅವರ ಪರ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇವೆ ಎಂದು ತಿಳಿಸಿದರು.

Share.
Leave A Reply