ಚಿಕ್ಕಬಳ್ಳಾಪುರ: ಸಾರಿಗೆ ಬಸ್ ಒಳಗೆ ನುಗ್ಗಿದ ಖದೀಮರು, ಬರೋಬ್ಬರಿ 55 ಲಕ್ಷ ರೂ. ಕದ್ದು ಪರಾರಿಯಾಗಿರುವ ಘಟನೆಯೊಂದು ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಹತ್ತಿರ ಈ ಘಟನೆ ನಡೆದಿದೆ. ಉದ್ಯಮಿಯೊಬ್ಬರಿಗೆ ಸೇರಿದ್ದ 55 ಲಕ್ಷ ರೂ. ಹಣವನ್ನು ಸಾರಿಗೆ ಬಸ್ ನಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಬಸ್ ನಲ್ಲಿ ಹಣ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ಹಣ ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ.
ಗುರುವಾರ ರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಪ್ರಯಾಣಿಕರ ಊಟಕ್ಕೆಂದು ಕೆಎ 57 ಎಫ್-3911 ಸಂಖ್ಯೆಯ ಬಸ್ ನಿಲ್ಲಿಸಲಾಗಿತ್ತು. ಊಟಕ್ಕೆಂದು ಕೆಳಗೆ ಇಳಿದು ಬರುವಷ್ಟರಲ್ಲಿ ಹಣದ ಬ್ಯಾಗ್ ನಾಪತ್ತೆಯಾಗಿದೆ. ಕಳುವಾದ ಹಣ ಹೈದರಾಬಾದ್ ಮೂಲದ ಉದ್ಯಮಿ ಕೆ.ವೆಂಕಟೇಶ್ವರ ರಾವ್ಗೆ ಸೇರಿದ್ದು, ಬೆಂಗಳೂರಿನಲ್ಲಿದ್ದ ಮನೆ ಮಾರಾಟದಿಂದ ಬಂದಿದ್ದ ನಗದನ್ನು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಟಾಟಾ ಇಂಡಿಕಾ ಕಾರಿನಲ್ಲಿ ಬಂದಿದ್ದ ವ್ಯಕ್ತಿ ಹಣ ದೋಚಿದ್ದಾನೆ ಎಂದು ಬಸ್ನಲ್ಲಿದ್ದ ಇನ್ನಿತರ ಪ್ರಯಾಣಿಕರು ಹೇಳಿದ್ದಾರೆ. ಕಾರಿನಿಂದ ಇಳಿದು ನೇರವಾಗಿ ಬಸ್ನೊಳಗೆ ನುಗ್ಗಿದ್ದ ವ್ಯಕ್ತಿ ಸೀಟ್ ನಂ.4ರಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
