ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿರುವುದರಿಂದಲೇ ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟೀಸ್ ಕೊಟ್ಟು ಅಲ್ಲಿಯೂ ಹಣ ವಸೂಲಿಗೆ ಮುಂದಾಗಿದ್ದಾರೆ. ತಕ್ಷಣವೇ ಇದನ್ನು ಈ ಕೂಡಲೇ ಹಿಂಪಡೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ವ್ಯಾಪಾರಿಗಳಿಗೆ ನೊಟೀಸ್ ಕೊಟ್ಟಿದೆ. ಇದು ಬಹಳ ಚರ್ಚೆಗೆ ಅವಕಾಶ ನೀಡಿದೆ, ವ್ಯಾಪಾರಿಗಳು ಆತಂಕದಲ್ಲಿದ್ದಾರೆ. ಸಚಿವರು ಕೇಂದ್ರ ಸರ್ಕಾರ ದೂರುವ ಕುತಂತ್ರ ಮಾಡುತ್ತಿದ್ದಾರೆ ಎಂದು ದೂರಿದರು. ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೆ ಬರಬೇಕು ಎಂದು ಸಿಎಂ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಜೊತೆಗೆ ಅಧಿಕಾರಿಗಳಿಗೂ ಟಾರ್ಗೆಟ್ ನೀಡಿದ್ದರು.
ಇದರಿಂದ ಈಗ ಸತ್ಯ ಬಯಲಾಗಿದೆ, ನೋಟೀಸ್ ಕೊಟ್ಟು ಅಧಿಕಾರಿಗಳ ಮೂಲಕ ಸರ್ಕಾರ ವಸೂಲಿಗೆ ಇಳಿದಿದೆ. ನೋಟೀಸ್ ಕೊಟ್ಟಿರುವುದು ಅಕ್ರಮ, ನೋಟೀಸ್ ಕೊಡುವುದುನ್ನು ತಕ್ಷಣ ನಿಲ್ಲಿಸಿ ಎಂದು ಆಗ್ರಹಿಸಿದರು. ಈಗಾಗಲೇ ಕೊಟ್ಟಿರುವ ನೊಟೀಸ್ ಹಿಂಪಡೆಯಬೇಕು. ಬಿಜೆಪಿಯೂ ವ್ಯಾಪಾರಿಗಳ ಪ್ರತಿಭಟನೆಗೆ ಬಿಜೆಪಿಯಿಂದ ಬೆಂಬಲ ಘೋಷಿಸಿದೆ. ಖಜಾನೆ ಖಾಲಿ ಆಗಿದೆ ಎಂದು ರಾತೋರಾತ್ರಿ ನೊಟೀಸ್ ಕೊಟ್ಟಿದ್ದಾರೆ. ಈ ಸರ್ಕಾರದಿಂದಲೇ ನೊಟೀಸ್ ಅಕ್ರಮ ನಡೆದಿದೆ. ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪುಡಾರಿಗಳು ಅನೇಕ ಬಾರಿ ಬಿಜೆಪಿ ಕಚೇರಿ ಎದುರು ಬಂದು ಪ್ರತಿಭಟನೆ ಮಾಡುತ್ತಿದ್ದರು. ಅವರಿಗೆ ಹೋರಾಟ ಮಾಡುವ ಚಟ ಇದ್ದರೆ, ಫ್ರೀಡಂ ಪಾರ್ಕ್ಗೆ ಹೋಗಿ ಮಾಡಲಿ. ಆದರೆ, ಬಿಜೆಪಿ ಕಚೇರಿ ಎದುರು ಪದೇಪದೇ ಗೂಂಡಾ ವರ್ತನೆ ಮಾಡುವುದು ಸರಿಯಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇದನ್ನು ಗಮನಿಸಲಿ, ಬಿಜೆಪಿ ಕಚೇರಿ ಎದುರು ಅವರ ಕಾರ್ಯಕರ್ತರ ಪ್ರತಿಭಟನೆ ತಪ್ಪಿಸಲಿ ಎಂದು ಒತ್ತಾಯಿಸಿದರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್ ಕ್ಲೀನ್ಚಿಟ್ ನೀಡಿಲ್ಲ. ಇದರಲ್ಲಿ ಸಿಎಂ ನಿರಪರಾಧಿ ಎಂದೂ ಹೇಳಿಲ್ಲ. ಪ್ರಕರಣದಲ್ಲಿ ಸಿಎಂ, ಅವರ ಕುಟುಂಬದವರ ಪಾತ್ರ ಇದೆ, ಎಫ್ಐಆರ್ ಸಹ ದಾಖಲಾಗಿದೆ. ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
