ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿರುವ ಧಮ್ಕಿ ರಾಜೀವ್ ಗೌಡ (Rajeev Gowda) ಬಂಧನ ಭೀತಿಯಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಅಲೆಯುತ್ತಿದ್ದಾರೆ.
ಕಚೇರಿಗೆ ಬೆಂಕಿ ಹಾಕಿಸ್ತೀನಿ, ಚಪ್ಪಯಲ್ಲಿ ಹೊಡೆಸ್ತೀನಿ, ತಾಲೂಕು ಬಿಟ್ಟು ಒಡಿಸ್ತೀನಿ ಅಂತ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡನೇ ಈಗ ಊರು ಬಿಟ್ಟು ತಲೆ ಮರೆಸಿಕೊಂಡಿದ್ದಾನೆ. 12 ದಿನ ಕಳೆದ್ರೂ ಪುಡಾರಿ ವೀರನನ್ನ ಬಂಧಿಸೋಕೆ ಚಿಕ್ಕಬಳ್ಳಾಪುರ ಪೊಲೀಸರು (Chikkaballapura Police) ಫೇಲ್ ಆಗಿದ್ದು, ರಾಜೀವ್ ಗೌಡ ಬಂಧನ ಯಾವಾಗ ಅಂತ ಪೊಲೀಸರ ಕಾರ್ಯವೈಖರಿಗೆ ಜನ ಛೀಮಾರಿ ಹಾಕುವಂತಾಗಿದೆ.
ಜಾಮೀನು ಪಡೆದು ಬಂದು ಅಬ್ಬರಿಸೋಣ ಅಂದುಕೊಂಡಿದ್ದ ರಾಜೀವ್ ಗೌಡನಿಗೆ ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿ, ತಕ್ಕ ಶಾಸ್ತಿ ಮಾಡಿದೆ. ಕೆಪಿಸಿಸಿ ಸಹ ಪಕ್ಷದಿಂದ ಅಮಾನತು ಮಾಡಿ ಶಾಕ್ ಕೊಟ್ಟಿದೆ. ಮತ್ತೊಂದೆಡೆ ಹೈಕೋರ್ಟ್ನಲ್ಲೂ ಎಫ್ಐಆರ್ ರದ್ದು ಕೋರಿ ಹಾಕಿದ್ದ ಅರ್ಜಿ ಸಹ ವಜಾಗೊಂಡಿದೆ. ಹೀಗಾಗಿ ರಾಜೀವ್ಗೌಡ ಈಗ ರಾಜ್ಯವನ್ನೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮೂರು ದಿನಗಳಿಂದಲೂ ಮಂಗಳೂರಿನಲ್ಲೇ ಇದ್ದ ಮಾಹಿತಿ ಮೇರೆಗೆ ಮಂಗಳೂರಿಗೆ ಪೊಲೀಸರು ಹೋಗುವಷ್ಟರಲ್ಲಿ ಮಂಗಳೂರಿನ ರೈಲ್ವೆ ಸ್ಟೇಷನ್ ನಲ್ಲಿ ರಾಜೀವ್ ಗೌಡ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಹೀಗಾಗಿ ಕಾರು ಓಡಾಟ ನಡೆಸಿರುವ ಕಡೆ ಹಾಗೂ ಆತ ಉಳಿದುಕೊಂಡಿರುವ ಸ್ಥಳಗಳಲ್ಲಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.
