ರಾಜ್ಯ ಕಾಂಗ್ರೆಸ್ನಲ್ಲಿ ಕ್ರಾಂತಿಗೂ ಮೊದಲೇ ದೊಡ್ಡದೊಂದು ಸಂಚಲನ ಸೃಷ್ಟಿಯಾಗಿದೆ. ಕಾಂಗ್ರೆಸ್ ನಾಯಕರು ಹೋದಲ್ಲಿ ಬಂದಲ್ಲಿ ಕ್ರಾಂತಿ, ಪವರ್ ಶೇರಿಂಗ್ ಅನ್ಕೊಂಡು ಹೇಳಿಕೆಗಳನ್ನ ಕೊಡ್ತಿರೋದರ ಮಧ್ಯೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ಎಲ್ಲಾ ಟೀಕೆಗಳಿಗೂ ತಿರುಗೇಟು ಕೊಟ್ಟಿದ್ದಾರೆ.. ಅಷ್ಟೇ ಅಲ್ಲ.. ಸಿಎಂ ಗಾದಿ ಮೇಲೆ ಕಣ್ಣಿಟ್ಟು ಕಾತರದಿಂದ ಕಾಯುತ್ತಿದ್ದ ಡಿಕೆಶಿಗೆ ಸಿದ್ದರಾಮಯ್ಯ ಡಿಚ್ಚಿ ಕೊಟ್ಟಿದ್ದಾರೆ. ಸಿದ್ದು ಕೊಟ್ಟ ಗುದ್ದಿಗೆ ಡಿಸಿಎಂ ಡಿಕೆಶಿ, ಡಿಕೆಶಿ ಬೆಂಬಲಿಗರು, ವಿಪಕ್ಷ ನಾಯಕರು ಎಲ್ಲರೂ ಥಂಡಾ ಹೊಡೆದಿದ್ದಾರೆ.
ದಿಲ್ಲಿಯಲ್ಲೇ ಡಿಕೆಶಿಗೆ ಸಿದ್ದು ಡಿಚ್ಚಿ!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ್ಲೇ ಪವರ್ ಶೇರಿಂಗ್ ಬಗ್ಗೆ ಚರ್ಚೆ ನಡೆದಿದೆ ಅಂತ ಹೇಳಲಾಗಿತ್ತು.. ಸರ್ಕಾರ ರಚನೆಯಾಗಿ 2.5 ವರ್ಷ ಆದ್ಮೇಲೆ ಸಿದ್ದರಾಮಯ್ಯ ತಮ್ಮ ಸಿಎಂ ಖುರ್ಚಿಯನ್ನು ಡಿಕೆಶಿಗೆ ಬಿಟ್ಟುಕೊಡ್ತಾರೆ ಅನ್ನೋ ಸುದ್ದಿ ಭಾರೀ ಸೆನ್ಶೇಷನ್ ಕ್ರಿಯೇಟ್ ಮಾಡಿತ್ತು.. ಈಗಲೂ ಸಿದ್ದರಾಮಯ್ಯ ಅವಧಿ ಮುಗಿಯುತ್ತಾ ಬಂದಿದೆ. ಇನ್ನೇನು ಸಿಎಂ ಕುರ್ಚಿಯಿಂದ ಇಳಿಯುವ ಕಾಲ ಹತ್ತಿರ ಬಂದಿದೆ ಅಂತಾ ಚರ್ಚೆಗಳು ನಡೆದಿದ್ವು.
ಇದರ ಬೆನ್ನಲ್ಲೇ ಸಿದ್ರಾಮಯ್ಯ, ಡಿಕೆಶಿ ದೆಹಲಿಗೆ ದೌಡಾಯಿಸಿದ್ರು.. ಅತ್ತ ಅವರು ಇತ್ತ ರಾಜ್ಯದಲ್ಲಿ ಉಸ್ತುವಾರಿ ಸುರ್ಜೇವಾಲ ಎಲ್ಲವನ್ನೂ ನೋಡಿದ ರಾಜಕೀಯ ವಿಶ್ಲೇಷಕರು ಕ್ರಾಂತಿ ನಡೆದೇ ಬಿಡುತ್ತೆ ಅಂತ ವ್ಯಾಖ್ಯಾನಿಸ್ತಿದ್ರು.. ಆದ್ರೆ ದೆಹಲಿಯಲ್ಲಿದ್ದುಕೊಂಡೇ ಸಿದ್ದು, ಎಲ್ಲಾ ಚರ್ಚೆಗಳಿಗೆ ಬ್ರೇಕ್ ಹಾಕಿದ್ದಾರೆ. ನಾನೇ 5 ವರ್ಷವೂ ಸಿಎಂ ಆಗಿ ಮುಂದುವರಿಯುತ್ತೇನೆ ಅಂತ ಝೇಂಕರಿಸಿದ್ದಾರೆ.. ಅವರ ಧ್ವನಿ ಇಡೀ ಕರ್ನಾಟಕದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದ್ರೆ, ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಬಂಡೆ ಚೂರುಚೂರಾಗಿದೆ.
ನಾನು ಪಾಲಿಸುವೆ.. ಡಿಕೆಶಿನೂ ಪಾಲಿಸಬೇಕು..!
ಕಾಂಗ್ರೆಸ್ನಲ್ಲಿ ಕ್ರಾಂತಿ ಸೃಷ್ಟಿಸಿದ್ದ ಸಾಕಷ್ಟು ಪ್ರಶ್ನೆಗಳಿಗೆ ಸಿದ್ದರಾಮಯ್ಯ ಅಂತ್ಯ ಹಾಡಿದ್ದಾರೆ.. ಡಿಸಿಎಂ ಡಿಕೆಶಿ ಸಿಎಂ ಆಕಾಂಕ್ಷಿಯಾಗಿದ್ದು ನಿಜ.. ಆದ್ರೆ ಅವರೇ ಸಿಎಂ ಖುರ್ಚಿ ಖಾಲಿಯಿಲ್ಲ ಅಂತ ಹೇಳಿರೋವಾಗ ಸಿಎಂ ಬದಲಾವಣೆ ಹೇಗೆ ಸಾಧ್ಯ..? 50:50 ಪವರ್ ಶೇರಿಂಗ್ ಮಾತೇ ಇಲ್ಲ ಅಂತ ಖಡಕ್ ಆಗಿ ನುಡಿದಿದ್ದಾರೆ.. ಹೈಕಮಾಂಡ್ ಕೂಡ ನನಗೆ ಪವರ್ ಶೇರಿಂಗ್ ಬಗ್ಗೆ ಏನು ಹೇಳಿಲ್ಲ.. ಅವರು ಏನು ಹೇಳುತ್ತಾರೋ ಅದನ್ನ ನಾನು ಪಾಲಿಸಬೇಕು.. ಡಿಕೆಶಿನೂ ಪಾಲಿಸಬೇಕು ಅಂತ ಹೇಳಿಕೆ ನೀಡಿದ್ದಾರೆ.. ಜೊತೆಗೆ ಡಿಕೆಶಿಯನ್ನ ಬೆಂಬಲಿಸುವ ಶಾಸಕರು ಇರಬಹುದು ಆದ್ರೆ ಅದು ಬಹಳಷ್ಟು ಸಂಖ್ಯೆಯಲ್ಲಿ ಇಲ್ಲ ಅಂತ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ..
ಸಿದ್ದರಾಮಯ್ಯ ಬೆನ್ನಿಗೆ ನಿಂತ ಬೆಂಬಲಿಗರು!
ಸಿಎಂ ಬದಲಾವಣೆ ಗೊಂದಲಗಳಿಗೆ ತೆರೆ ಎಳೆದಿರುವ ಸಿದ್ದರಾಮಯ್ಯ ಕರ್ನಾಟಕದ ಮುಂದಿನ ವಿಧಾನಸಭೆ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ ಅಂತ ಪವರ್ಫುಲ್ ಆಗಿ ಹೇಳಿದ್ದಾರೆ.. ಸಿದ್ದು ಇಷ್ಟೊಂದು ಕಾನ್ಫಿಡೆಂಟ್ ಆಗಿ ಸ್ಟೇಟ್ಮೆಂಟ್ಗಳನ್ನ ಕೊಡ್ತಿದ್ದಾರೆ ಅಂದ್ರೆ ಅವರಿಗೆ ಹೈಕಮಾಂಡ್ ಬೆಂಬಲವಿದೆ.. ಯಾವುದೇ ಕಾರಣಕ್ಕೂ ಆವರ ವಿರುದ್ಧವಾಗಿ ವರಿಷ್ಠರು ನಿರ್ಧರಿಸೋದಿಲ್ಲ ಅಂತ ಅವರಿಗೆ ಮನವರಿಕೆಯಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.. ಇನ್ನೂ ಸರ್ಕಾರ ರಚನೆಯಾದಾಗ್ಲೇ ಶಾಸಕರು ಸಿದ್ದರಾಮಯ್ಯಗೆ ಓಟ್ ಮಾಡಿದ್ರು.. ಅವರೇ ಮುಂದುವರೆಯುತ್ತಾರೆ ಅಂತ ಸಚಿವ ಸತೀಶ್ ಜಾರಕಿಹೊಳಿ ಧನಿಗೂಡಿಸಿದ್ರೆ ಸಿಎಂ ಬದಲಾವಣೆ ಚರ್ಚೆಗೆ ದಿ ಎಂಡ್ ಅಂತ ಸಚಿವ ಮಹದೇವಪ್ಪ ವ್ಯಾಖ್ಯಾನಿಸಿದ್ದಾರೆ..
