ಕೆಲ ಸಮಯ ತಣ್ಣಗಿದ್ದ ರಾಜ್ಯದಲ್ಲಿ ಮತ್ತೆ ರಾಜಕೀಯದ ಬಿಸಿ ಧಗಧಗಿಸುವ ಕ್ಷಣ ಸನಿಹವಾಗಿದೆ.. ಕಾಂಗ್ರೆಸ್, ಬಿಜೆಪಿಯ ಪಕ್ಷಗಳ ಮೇನ್ ಪವರ್ ರಾಜ್ಯಕ್ಕೆ ಎಂಟ್ರಿ ಕೊಡ್ತಿವೆ.. ಒಂದ್ಕಡೆ ಚುನಾವಣಾ ಅಕ್ರಮಗಳ ಬಗ್ಗೆ ಆರೋಪಿಸಿ ರಾಹುಲ್, ಮತ್ತೊಂದ್ಕಡೆ ಮೆಟ್ರೋ ಉದ್ಘಾಟನೆ ನೆಪ ಇಟ್ಕೊಂಡು ಮೋದಿ.. ಅಖಾಡಕ್ಕೆ ಎಂಟ್ರಿ ಕೊಡ್ತಿದ್ದಾರೆ.. ಕರ್ನಾಟಕದಲ್ಲಿ ನಾನಾ-ನೀನಾ.. ಅಂತ ಇವರಿಬ್ಬರ ನಡುವೆ ಪ್ರತಿಷ್ಠೆಯ ಸಮರ ಶುರುವಾಗೋದಕ್ಕೆ ಡೌಟೇ ಇಲ್ಲ.. ಇದ್ರ ಜೊತೆಗೆ ಎರಡು ಪಕ್ಷಗಳ ಬಣ ಸಂಘರ್ಷ, ನಾಯಕರ ಬದಲಾವಣೆ ಚರ್ಚೆಗೆ ಫುಲ್ ಸ್ಟಾಪ್ ಇಡಲು ಸಜ್ಜಾಗಿದ್ದಾರೆ..
ರಾಹುಲ್ ವಾಗ್ಬಾಣಕ್ಕೆ ಮೋದಿ ಸಿಡಿಸ್ತಾರಾ ಬಾಂಬ್..?
ಈಗಾಗಲೇ ನಾಲ್ಕೈದು ದಿನಗಳಿಂದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸ್ತಾನೆ ಇದ್ದಾರೆ.. ಮೋದಿ ಸಂಪೂರ್ಣವಾಗಿ ಅಧಿಕಾರಕ್ಕೆ ಬಂದಿಲ್ಲ.. ಅವರ ಸ್ಥಾನ ಭದ್ರವಿಲ್ಲ ಅಂತ ಲೇವಡಿ ಮಾಡ್ತಿದ್ದಾರೆ.. ಇದ್ರ ಜೊತೆಗೆ ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅಂತ ಆರೋಪಿಸಿ ಚುನಾವಣೆ ಆಯೋಗದ ವಿರುದ್ಧವೂ ಸಿಡಿದೆದ್ದಿದ್ದಾರೆ.. ಇದೇ ವಿಚಾರವಾಗಿ ಪುರಾವೆಗಳ ಗಂಟು ಹಿಡಿದುಕೊಂಡು ರಾಜ್ಯಕ್ಕೆ ಬಂದು ಆಗಸ್ಟ್ 8ರಂದು ಪ್ರತಿಭಟನೆ ಮಾಡ್ತಾರಂತೆ.. ಆದ್ರೆ ಇತ್ತ ಮೋದಿ ಕೂಡ ರಾಹುಲ್ ಬಂದು ಹೋದು ಎರಡು ದಿನಗಳ ಬಳಿಕ ಅಂದ್ರೆ ಆಗಸ್ಟ್ 10ರಂದು ರಾಜ್ಯಕ್ಕೆ ಎಂಟ್ರಿ ಕೊಡ್ತಿದ್ದಾರೆ.. ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆ, ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸುವ ಸಲುವಾಗಿ ಬರ್ತಿರೋದಾದ್ರೂ ಮೋದಿಯ ಕಾರ್ಯತಂತ್ರ ಬೇರೆಯದ್ದೇ ಆಗಿದ್ಯಂತೆ..
ಈಗಾಗಲೇ ರಾಜ್ಯದಲ್ಲಿ ಹಳದಿ ಮಾರ್ಗದ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದ್ದು, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಮೆಟ್ರೋ ಸಂಚರಿಸಲು ಮೆಟ್ರೋ ಸಜ್ಜಾಗಿ ನಿಂತಿದೆ.. ಜೊತೆಗೆ ಕೇಂದ್ರದಿಂದ ಮೂರು ಹೊಸ ವಂದೇ ಭಾರತ್ ರೈಲುಗಳು ಕೂಡ ಬಂದಿಳಿದಿವೆ.. ಹೀಗಾಗಿ ಇವುಗಳಿಗೆ ಗ್ರೀನ್ ಸಿಗ್ನಲ್ ನೀಡಲು ಮೋದಿ ಬರ್ತಿದ್ದಾರೆ.. ಆದ್ರೆ ಇಷ್ಟು ದಿನ ರಾಹುಲ್ ನಡೆಸಿದ ವಾಗ್ದಾಳಿಗೆ, ಪ್ರತಿಭಟನೆಯಲ್ಲಿ ರಾಹುಲ್ ಮಾಡುವ ಆರೋಪಗಳಿಗೆ ತಕ್ಕ ಉತ್ತರ ಕೊಡಲು ಸಜ್ಜಾಗಿದ್ದಾರೆ.. ರಾಹುಲ್ ತಂತ್ರವನ್ನು ಗಮನಿಸಿ ಅದಕ್ಕೆ ಪ್ರತಿತಂತ್ರ ಹೆಣೆಯಲು ಮೋದಿ ಯೋಚಿಸಿದ್ದಾರಂತೆ.. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲದಿದ್ದರೂ ನಾನೇ ಬಾಸ್ ಅನ್ನೋ ಸಂದೇಶ ರವಾನಿಸಲಿದ್ದಾರಂತೆ..
ನಮೋ-ರಾಗಾ ಜಟಾಪಟಿ
ರಾಹುಲ್ ಜೊತೆಗೆ ರಾಜ್ಯ ಬಿಜೆಪಿಯಲ್ಲಿ ಉಂಟಾಗಿದ್ದ ಬಣ ಸಂಘರ್ಷಕ್ಕೆ ಬ್ರೇಕ್ ಹಾಕಲು ತಾವೇ ಸ್ವತಃ ಮಧ್ಯಸ್ಥಿಕೆ ವಹಿಸಲಿದ್ದಾರೆ ಅಂತಲೂ ಹೇಳಲಾಗ್ತಿದೆ.. ಅಧ್ಯಕ್ಷ ವಿಜಯೇಂದ್ರ ಬಣ, ರೆಬೆಲ್ಸ್ ಹಾಗೂ ತಟಸ್ಥ ಬಣಗಳನ್ನು ಭೇಟಿ ಮಾಡಿ ಅಸಮಾಧಾನದ ಹೊಗೆ ಹೋಗಲಾಡಿಸಲು ಹೊಸದೊಂದು ಯೋಜನೆ ರೂಪಿಸಿದ್ದಾರೆ.. ಮುಂದಿನ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿಯನ್ನು ಹೇಗೆ ಮತ್ತೆ ಅಧಿಕಾರಕ್ಕೆ ತರುವುದು ಅನ್ನೋದ್ರ ಬಗ್ಗೆ ಮೋದಿ ಮಾತುಕತೆ ನಡೆಸಲಿದ್ದಾರಂತೆ.. ಈಗಾಗಲೇ ಹಲವು ಕೇಂದ್ರ ನಾಯಕರು ಎಷ್ಟೇ ಪ್ರಯತ್ನ ಪಟ್ರೂ ರಾಜ್ಯ ಬಿಜೆಪಿಯಲ್ಲಿ ಸಮಸ್ಯೆ ಬಗೆಹರಿಯದ ಕಾರಣ ಸ್ವತಃ ಮೋದಿಯೇ ಅಖಾಡಕ್ಕೆ ಇಳಿಯಲಿದ್ದಾರೆ ಅಂತ ಹೇಳಲಾಗ್ತಿದೆ..
ಅದೇನೇ ಆಗ್ಲಿ ಎರಡೂ ಪಕ್ಷದ ಪರಮೋಚ್ಚ ನಾಯಕರೇ ರಾಜ್ಯಕ್ಕೆ ಎಂಟ್ರಿ ಕೊಡ್ತಿರೋದು ಭಾರೀ ಸಂಚಲನ ಸೃಷ್ಟಿಸಿದೆ.. ಬರೀ ರಾಜ್ಯ ನಾಯಕರ ಕಿತ್ತಾಟಗಳನ್ನು ನೋಡಿ ಬೇಸತ್ತಿದ್ದ ಜನತೆ ಮೋದಿ, ರಾಹುಲ್ ಗಾಂಧಿ ಆಗನಮನಕ್ಕೆ ಕಾತುರದಿಂದ ಕಾಯ್ತಿದ್ದಾರೆ.. ಇವರಿಬ್ಬರ ಎಂಟ್ರಿ ಬಳಿಕ ಏನೇನು ಬದಲಾವಣೆಗಳು ಆಗುತ್ತೋ ಕಾದು ನೋಡಬೇಕಿದೆ..
