Gambhir: ಟೀಂ ಇಂಡಿಯಾ ಎತ್ತ ಸಾಗ್ತಿದೆ..? ಇದು ಕೋಟ್ಯಂತರ ಕ್ರೀಡಾಭಿಮಾನಿಗಳ ಪ್ರಶ್ನೆ. ಟಿ20ಗೊಂದು ಟೀಂ.. ಏಕದಿನಕ್ಕೆ ಇನ್ನೊಂದು ಟೀಂ. ಇದೀಗ ಟೆಸ್ಟ್ ಮಾದರಿಗೆ ಮತ್ತೊಂದು ಯಂಗ್ ಟೀಂ ರೆಡಿಯಾಗ್ತಿದೆ. ಈಗಾಗಲೇ ಕೊಹ್ಲಿ-ರೋಹಿತ್ ಟೆಸ್ಟ್ಗೆ ವಿದಾಯ ಹೇಳಿರುವ ಕಾರಣ ಭಾರತದ ಟೆಸ್ಟ್ ಟೀಂ ನಾವಿಕನಿಲ್ಲದ ಹಡಗಿನಂತಾಗಿದೆ.
ಆದ್ರೆ ಈ ಹಿಂದೆ ನಾವು ಹೇಳಿದಂತೆ ಯಂಗ್ ಟೆಸ್ಟ್ ಟೀಂ ಕಟ್ಟುವ ಕೋಚ್ ಗಂಭೀರ್ ಕಾರ್ಯತಂತ್ರಕ್ಕೆ ಮಹತ್ವದ ನಿರ್ಧಾರ ಸೇರ್ಪಡೆ ಯಾಗಿದೆ. ನಾಯಕ ಸ್ಥಾನಕ್ಕೆ ಅರ್ಹರಾಗಿದ್ದ ಜಸ್ಪ್ರೀತ್ ಬುಮ್ರಾ, ಕೆ.ಎಲ್. ರಾಹುಲ್ಗೆ ಗಂಭೀರ್ ದ್ರೋಹ ಬಗೆಯೋದು ಖಚಿತವಾಗಿದೆ. ಅನನುಭವಿ ಆಟಗಾರ ಶುಭ್ಮನ್ ಗಿಲ್ಗೆ ಕ್ಯಾಪ್ಟನ್ಸಿ ನೀಡೋದು ಬಹುತೇಕ ಫೈನಲ್ ಆಗಿದೆ.
ಸ್ಟಾರ್ಗಿರಿಯನ್ನ ಅಂತ್ಯಗೊಳಿಸುವ Gambhir ಪ್ರಯತ್ನದ ಬಗ್ಗೆ ನಿನ್ನೆಯಷ್ಟೇ ಹೇಳಿದ್ವಿ. ಇದೀಗ ಗಂಭೀರ್ ಅದನ್ನ ಮತ್ತೆ ಪ್ರೂವ್ ಮಾಡಿದಂತೆ ಕಾಣಿಸ್ತಿದೆ. ಟೀಂ ಇಂಡಿಯಾದ ನಾಯಕ ರೋಹಿತ್ ಟೆಸ್ಟ್ ಮಾದರಿಗೆ ರಿಟೈರ್ಡ್ ಆಗ್ತಿದ್ದಂತೆ ನಾಯಕ ಸ್ಥಾನ ಖಾಲಿಯಾಗಿದೆ.. ಹೀಗಾಗಿ ಯುವ ತಂಡವನ್ನು ಕಟ್ಟುವ ಮನಸ್ಥಿತಿಯಲ್ಲಿರುವ ಗಂಭೀರ್ ಅವಕಾಶವನ್ನು ಬಳಸಿಕೊಂಡು ಶುಭ್ಮನ್ ಗಿಲ್ರನ್ನ ನಾಯಕನನ್ನಾಗಿ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ..
ಇದೇ ವಿಚಾರವಾಗಿ ಶುಕ್ರವಾರ ಗಂಭೀರ್ ನಿವಾಸದ ಲಂಚ್ ಮೀಟಿಂಗ್ನಲ್ಲಿ ಗಿಲ್ ಭಾಗಿಯಾಗಿ ನಾಯಕತ್ವ ಹಾಗೂ ತಂಡದ ಆಯ್ಕೆ ಬಗ್ಗೆ ಮಹತ್ವದ ಮಾತಕತೆ ನಡೆಸಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆಎಳೆಯಲಾಗಿದ್ದು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಗಿಲ್ ಟೀಂ ಇಂಡಿಯಾವನ್ನು ಮುನ್ನಡೆಸುವುದು ಬಹುತೇಕ ಖಚಿತವಾಗಿದೆ.. ಈ ಬಗ್ಗೆ ಮೇ.23 ಅಥವಾ 24.ರಂದು ಅಧಿಕೃತ ಘೋಷಣೆ ಹೊರಬೀಳಲಿದೆ.
ಶುಭಮನ್ ಗಿಲ್ ಅದ್ಭುತ ಆಟಗಾರನಾಗಿದ್ರೂ ಹೊರ ದೇಶಗಳ ಪಿಚ್ನಲ್ಲಿ ಕಳಪೆ ಪ್ರದರ್ಶನ ತೋರಿಸುತ್ತಿದ್ದಾರೆ.. ಹೀಗಿರುವಾಗ ಗಂಭೀರ್ ಏಕಾಏಕಿ ಗಿಲ್ಗೆ ಯಾಕೆ ನಾಯಕತ್ವ ಕೊಟ್ರು ಅಂತ ಸಾಕಷ್ಟು ಪ್ರಶ್ನೆಗಳು ಉದ್ಭವವಾಗ್ತಿವೆ.. ಯಾಕಂದ್ರೆ ಟೀಂನಲ್ಲಿ ಬುಮ್ರಾ, ರಾಹುಲ್, ಪಂತ್ರಂತಹ ಅನುಭವಿ ಆಟಗಾರರಿದ್ದಾರೆ.. ಅದ್ರಲ್ಲೂ ಬುಮ್ರಾಗೆ ಕ್ಯಾಪ್ಟನ್ಸಿ ನಿಭಾಯಿಸಿದ ಅನುಭವವಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಉಪನಾಯಕನಾಗಿದ್ದ ಬುಮ್ರಾ, ಕ್ಯಾಪ್ಟನ್ ರೋಹಿತ್ ಅನುಪಸ್ಥಿತಿಯಲ್ಲಿ ನಾಯಕತ್ವ ನಿಭಾಯಿಸಿದ್ರು.
ಹಲವು ಕ್ರಿಕೆಟ್ ಎಕ್ಸ್ಪರ್ಟ್ಸ್ ಹಾಗೂ ಹಿರಿಯ ಆಟಗಾರರೂ ಕೂಡ ಬುಮ್ರಾ ನಾಯಕತ್ವಕ್ಕೆ ಸೂಕ್ತ ಅಂತ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ.. ಆದ್ರೂ ಸಹ ಗಂಭೀರ್ ಬೇಕಂತಲೇ ಬುಮ್ರಾರನ್ನ ಕಡೆಗಣಿಸಿದ್ದಾರೆ ಅಂತ ಹೇಳಲಾಗಿದೆ.. ಇನ್ನು ಕನ್ನಡಿಗ ಕೆಎಲ್ ರಾಹುಲ್ ಕೂಡ ಭರ್ಜರಿ ಫಾರ್ಮ್ನಲ್ಲಿದ್ದಾರೆ.. ಜೊತೆಗೆ ತಂಡವನ್ನು ನಿಭಾಯಿಸಿದ ಅನುಭವವೂ ಇದೆ ಅದ್ರೂ ಸಹ ಕ್ಯಾಪ್ಟನ್ಸಿಗೆ ರಾಹುಲ್ರನ್ನ ಪರಿಗಣಿಸದಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.. ಇತ್ತ ಪಂತ್, ಜಡೇಜಾರಂತಹ ಉತ್ತಮ ಅನುಭವಿ ಆಟಗಾರರು ಆಯ್ಕೆದಾರರಿಗೆ ಕಾಣಿಸಿಲ್ಲವೆಂದ್ರೆ ಇದ್ರ ಹಿಂದೆ ಗಂಭೀರ್ ಕೈವಾಡವಿದೆ ಅಂತ ಫ್ಯಾನ್ಸ್ ಆರೋಪಿಸ್ತಿದ್ದಾರೆ..
Also Read: ಕೈ ತಪ್ಪಿದ್ದ ಹರೇ ಕೃಷ್ಣ ದೇವಸ್ಥಾನ Bengaluru ಇಸ್ಕಾನ್ಗೆ ಸೇರಿದ್ದು : ʼಸುಪ್ರೀಂʼ ತೀರ್ಪು
ಇನ್ನೂ ಮಹತ್ವದ ಮೀಟಿಂಗ್ನಲ್ಲಿ ಗಿಲ್ ಜೊತೆ ಗಂಭೀರ್ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.. ಖಾಲಿ ಇರುವ ಕೊಹ್ಲಿಯ ನಂಬರ್ 4 ಸ್ಪಾಟ್, ಓಪನಿಂಗ್ ಪ್ಲೇಯರ್ಸ್, ರಾಹುಲ್ನ ಬ್ಯಾಟಿಂಗ್ ಆರ್ಡರ್, ವಿಕೆಟ್ ಕೀಪರ್, ಫಾರ್ಮ್ ಕಳೆದುಕೊಂಡಿರುವ ಶಮಿ ಸ್ಥಾನದ ಬಗ್ಗೆ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಗಿಲ್ ಜೊತೆ ಗಂಭೀರ್ ಮಾತುಕತೆ ನಡೆಸಿದ್ದಾರೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ..
ಆಯ್ಕೆ ಮಂಡಳಿ ಅಧ್ಯಕ್ಷ ಅಜಿತ್ ಅಗರ್ಕರ್ ಕೂಡ ಗಿಲ್ ನಾಯಕತ್ವಕ್ಕೆ ಬೆಂಬಲವಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ಜೂನ್ 20ರಿಂದ ಆರಂಭವಾಗಲಿದ್ದು, ಯಾವಾಗಲೂ ಭಾರತೀಯರಿಗೆ ಸವಾಲಾಗುವ ಆಂಗ್ಲರ ನಾಡಿನಲ್ಲಿ ಅನನುಭವಿ ಗಂಭೀರ್-ಗಿಲ್ ಜುಗಲ್ಬಂದಿ ಹೇಗಿರಲಿದೆ? ತಂಡದ ಪರ್ಫಾರ್ಮೆನ್ಸ್ ಮೇಲೆ ಹೇಗೆ ಪರಿಣಾಮ ಬೀರುತ್ತೇ ಅನ್ನೋದು ಸದ್ಯದ ಕುತೂಹಲ.
