ಎಚ್‌ಡಿ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ ಪ್ರತ್ಯುತ್ತರ ನೀಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ವಸತಿ ಯೋಜನೆಗಾಗಿ ಶೇ.15 ರಷ್ಟು ಮೀಸಲು ಸೌಲಭ್ಯ ಕಲ್ಪಿಸಿರುವುದು ತುಷ್ಠೀಕರಣ ರಾಜಕಾರಣವಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರದ ಟಿಪ್ಪಣಿಯನ್ನು ನಾನೇ ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿದ್ದೇನೆ. ಬಿಜೆಪಿ ಮತ್ತು ಜೆಡಿಎಸ್‌‍ನವರು ದುರುದ್ದೇಶಪೂರಕವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಾಚಾರ್‌ ವರದಿ ಪ್ರಕಾರ, ಮುಸ್ಲಿಂ ಸಮುದಾಯಕ್ಕೆ ವಸತಿ ಯೋಜನೆಗಳಲ್ಲಿ ಮೀಸಲು ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದಲ್ಲಿನ ಮುಸ್ಲಿಂರಿಗೆ ಶೇ.10 ರಷ್ಟು ಅವಕಾಶವಿದೆ. ಅಲ್ಲಿ ಮುಸ್ಲಿಂರ ಜನಸಂಖ್ಯೆ ಕಡಿಮೆ ಇದೆ. ಹೀಗಾಗಿ ಯೋಜನೆಯ ಸೌಲಭ್ಯ ಬಳಕೆಯಾಗದೆ ವ್ಯರ್ಥವಾಗುತ್ತದೆ.

ಈ ರೀತಿ ವ್ಯರ್ಥವಾಗುವುದನ್ನು ವಸತಿ ಸಚಿವರು ಸದ್ಬಳಕೆ ಮಾಡಿಕೊಳ್ಳಲು ನಗರ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಅದರ ಹೊರತಾಗಿ ನಾವು ಬೇರೆ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿರುವಂತೆ ಯಾವುದೇ ಸೌಲಭ್ಯಗಳನ್ನು ಕಿತ್ತು ಮುಸ್ಲಿಂರಿಗೆ ಕೊಡುತ್ತಿಲ್ಲ ಎಂದು ಪುನರುಚ್ಚರಿಸಿದರು.

ಎಸ್‌‍ಸಿ, ಎಸ್‌‍ಟಿ ಸಮುದಾಯಕ್ಕಾಗಿ ಮಂಜೂರು ಮಾಡಲಾಗಿದ್ದ ವಸತಿ ಸೌಲಭ್ಯಗಳು ಬಹುತೇಕ ಪೂರ್ಣಗೊಂಡಿದೆ. ಇನ್ನು ಮುಂದೆ ಅವರು ಹೊಸದಾಗಿ ತಳಪಾಯ ಹಾಕಿದರೆ ಮಂಜೂರು ಮಾಡಲು ಸಾಧ್ಯ. ಇಲ್ಲವಾದರೆ ಆಗುವುದಿಲ್ಲ ಎಂದರು.

ಹಾಸ್ಟೆಲ್‌ಗಳಲ್ಲಿ ಎಸ್‌‍ಸಿ, ಎಸ್‌‍ಟಿ ಸಮುದಾಯಕ್ಕೆ ಮೀಸಲಾತಿ ನೀಡಲಾಗಿತ್ತು. ಎಸ್‌‍ಸಿ, ಎಸ್‌‍ಟಿಯಿಂದ ಅರ್ಜಿ ಹಾಕಿದವರಿಗೆ ಪ್ರವೇಶ ನೀಡಿ ಇನ್ನು ಬಾಕಿ ಉಳಿದ ಹಾಸ್ಟೆಲ್‌ ಸೀಟ್‌ಗಳನ್ನು ಓಬಿಸಿ ಮತ್ತು ಸಾಮಾನ್ಯ ವರ್ಗಕ್ಕೆ ಹಂಚಿಕೆ ಮಾಡಲಾಗಿದೆ. ಯೋಜನೆ ವ್ಯರ್ಥಗೊಳ್ಳಬಾರದು ಎಂದು ನಮ ಸರ್ಕಾರ ಈ ರೀತಿಯ ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ವಸತಿ ಯೋಜನೆಯ ಲಂಚ ವಿಚಾರ

ಇನ್ನು ವಸತಿ ಯೋಜನೆಗೆ ಲಂಚ ಆಳಂದ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ಬಿ.ಆರ್‌.ಪಾಟೀಲ್‌ ವಸತಿ ಯೋಜನೆಗೆ ಲಂಚ ಪಡೆಯಲಾಗುತ್ತಿದೆ ಎಂಬ ಆಡಿಯೋ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದರು.

ಹೆಚ್‌ಡಿಕೆ ವರ್ಸಸ್‌ ಡಿಕೆಶಿ

ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಮತ್ತೆ ಸರ್ಕಾರ ಬರುವುದಿಲ್ಲ, ಮತ್ತೆ ಅವರ ಪಕ್ಷ ಗೆಲ್ಲುವುದೂ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಲೇವಡಿ ಮಾಡಿದರು.

ಡಿ.ಕೆ.ಶಿವಕುಮಾರ್‌ರ ಹಣದಿಂದ ಬಟ್ಟೆ ಒಲಿಸಿಕೊಳ್ಳುವ ದಾರಿದ್ರ್ಯ ನಮಗೆ ಬಂದಿಲ್ಲ ಎಂದು ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಹೇಳಿದ್ದಕ್ಕೆ ನಾನು ಉತ್ತರಿಸಿದ್ದೇನೆ.

Read Also : ನಂದಿನಿ ಬದಲು ಅಮುಲ್‌ಗೆ ಮಣೆ! ರೊಚ್ಚಿಗೆದ್ದ ಕನ್ನಡಿಗರು!

ಸರ್ಕಾರ ರಚಿಸಲು ತಯಾರಿ ಮಾಡಿಕೊಳ್ಳುತ್ತೇವೆ ಎಂದು ಅವರೇ ಹೇಳಿದ್ದರು. ಅದಕ್ಕಾಗಿ ಒಂದು ಉಡುಗೊರೆ ನೀಡಲು ಬಯಸಿದ್ದೆ. HDKಗೆ ಗಿಫ್ಟ್‌ ಕೊಡ್ತೀನಿ, ನೋಡ್ತಾ ಇರಿ. ಆದರೆ ಅವರ ಸರ್ಕಾರ ಬರುವುದಿಲ್ಲ ಟಾಂಗ್‌ ನೀಡಿದ್ರು.

Share.
Leave A Reply