ಬೆಂಗಳೂರು, ಜ.24: ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ವೆಂಕಟನಾಥ-ಸರಸ್ವತಿಯ ವಿವಾಹ ವೈಭವವು ಮಹಾಸಂಚಿಕೆಯ ರೂಪದಲ್ಲಿ ಪ್ರಸಾರಗೊಳ್ಳಲಿದೆ. ಶನಿವಾರ ಮತ್ತು ಭಾನುವಾರ (ಇಂದು ಮತ್ತು ನಾಳೆ) ಸಂಜೆ 5.30 ರಿಂದ 7 ಗಂಟೆಯ ವರೆಗೆ ಜೀ ಕನ್ನಡದಲ್ಲಿ ರಾಯರ ಪೂರ್ವಾಶ್ರಮದ ಬದುಕಿನ ಸಂಭ್ರಮವನ್ನು ಕಣ್ತುಂಬಿಕೊಳ್ಳಬಹುದು.

ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ ಎಂಬುದಾಗಿತ್ತು. ವಿಜಯೀಂದ್ರ ತೀರ್ಥರ ಅನುಗ್ರಹದಂತೆ ಅಧ್ಯಾಪನ ವೃತ್ತಿ ನಡೆಸುತ್ತಿದ್ದ ವೆಂಕಟನಾಥ ಸರಸ್ವತಿ ಎಂಬ ವಧುವನ್ನು ವಿವಾಹವಾದ. ರಾಯರ ಬದುಕಿನ ಪುಣ್ಯಕಥೆ ಶ್ರೀ ರಾಘವೇಂದ್ರ ಮಹಾತ್ಮೆಯು ಪ್ರಸ್ತುತ ವಿವಾಹದ ಘಟ್ಟದಲ್ಲಿದೆ. ವೆಂಕಟನಾಥ-ಸರಸ್ವತಿಯ ಮದುವೆಯನ್ನು ಮಾಧ್ವ ಸಂಪ್ರದಾಯದ ಅನುಸಾರ, ಹಳೆಯ ಕಾಲದ ರೀತಿ ರಿವಾಜುಗಳಂತೆ ಚಿತ್ರಿಸಲಾಗಿದೆ. ನಾಂದಿ ಶಾಸ್ತ್ರ, ತುಳಸಿ ಪೂಜೆ, ಚಪ್ಪರ ಶಾಸ್ತ್ರ ಮತ್ತಿತರ ಶಾಸ್ತ್ರಗಳಿಂದ ವೆಂಕಟನಾಥನ ಮದುವೆಯು ಅದ್ಧೂರಿಯಾಗಿ ನಡೆಯಲಿದೆ. ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ರಾಯರ ಮೇಲಿನ ಭಕ್ತಿ, ಪ್ರೀತಿ ಇವುಗಳ ಕಾರಣದಿಂದ ಧಾರಾವಾಹಿಯು ಜನಮನ್ನಣೆ ಪಡೆದಿದೆ.
