ಬೆಂಗಳೂರು: ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಶಾಸಕ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಂಡಿದ್ದು, ಜೈಲೇ ಗತಿ ಎನ್ನುವಂತಾಗಿದೆ.

ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ವಿನಯ್ ಕುಲಕರ್ಣಿ ಅವರ ಅರ್ಜಿ ವಜಾ ಮಾಡಲಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾ.ಸಂತೋಷ್ ಗಜಾನನ ಭಟ್ ಈ ಆದೇಶ ನೀಡಿದ್ದಾರೆ.

ಈ ಮೂಲಕ ವಿನಯ್ ಕುಲಕರ್ಣಿ ಅವರ ಮತ್ತೊಂದು ಪ್ರಯತ್ನ ವಿಫಲವಾಗಿದೆ. 2016ರಲ್ಲಿ ಜಿಪಂ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ 15ನೇ ಆರೋಪಿಯಾಗಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಜೈಲಿನಲ್ಲಿದ್ದಾರೆ. ಜೈಲಿನಿಂದ ಹೊರ ಬರಲು ಯತ್ನಿಸುತ್ತಿರುವ ಅವರ ಪ್ರಯತ್ನ ಈಗ ಮತ್ತೆ ವಿಫಲವಾಗಿದೆ. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 16ನೇ ಆರೋಪಿ ಚಂದ್ರಶೇಖರ ಇಂಡಿ ಅಲಿಯಾಸ್ ಚಂದು ಮಾಮಗೆ ಜಾಮೀನು ಸಿಕ್ಕಿದೆ. ಸಾಕ್ಷಿಗಳ ಮೇಲೆ‌ ಒತ್ತಡ ಹಾಕಿದ್ದ ಆರೋಪದ ಮೇಲೆ‌ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದ ಹಿನ್ನಲೆಯಲ್ಲಿ ಜಾಮೀನು ಕೋರಿ ವಿನಯ್ ಕುಲಕರ್ಣಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿ ವಾದ- ಪ್ರತಿವಾದ ನಡೆದಿತ್ತು. ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದರು. ಇಂದು ಸಂಜೆ ಆದೇಶ ಹೊರ ಬಿದ್ದಿದ್ದು, ವಿನಯ್ ಕುಲಕರ್ಣಿಗೆ ಜೈಲೇ ಎನ್ನುವಂತಾಗಿದೆ.
ಯೋಗೇಶ್ ಗೌಡ ಕೊಲೆ ಪ್ರಕರಣದ ತನಿಖೆ ನಡೆಸಿದ ಸಿಬಿಐ ಸಾಕ್ಷಿ ನಾಶದ ಆರೋಪ ಹೊರಿಸಿತ್ತು. ವಿನಯ್ ಕುಲಕರ್ಣಿ ತಮ್ಮ ಪ್ರಭಾವ ಬಳಸಿ ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದಾರೆ ಎಂದಿತ್ತು. ಆದರೆ ಹೈಕೋರ್ಟ್ ವಿನಯ್ ಕುಲಕರ್ಣಿ ಮೇಲಿದ್ದ ಸಾಕ್ಷಿ ನಾಶ ಪ್ರಕರಣ ವಜಾ ಮಾಡಿತ್ತು. ಇದರ ವಿರುದ್ದ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಕ್ಟೋಬರ್ 28 ರಂದು ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಆದೇಶ ನೀಡಿದ್ದರಿಂದಾಗಿ ವಿನಯ್ ಮತ್ತೆ ಜೈಲುಪಾಲಾಗಿದ್ದರು. ಈಗ ಅವರ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ ವಿನಯ್ ಕುಲಕರ್ಣಿ ಹಾಗೂ ಅವರ ಬೆಂಬಲಿಗರಿಗೆ ನಿರಾಸೆಯಾಗಿದೆ.

Share.
Leave A Reply