ಉತ್ತರಾಖಂಡದ ಉತ್ತರಾಕಾಶಿಯ ಧರಾಲಿಯಲ್ಲಿ ಸಂಭವಿಸಿದ ಭೀಕರ ಜಲಸ್ಪೋಟಕ್ಕೆ ಐವರು ಪ್ರಾಣ ಕಳೆದುಕೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ ಅಂತಾ ಶಂಕಿಸಲಾಗಿದೆ. ನಿನ್ನೆ ಸಂಭವಿಸಿದ ಭೀಕರ ಮೇಘಸ್ಫೋಟದಲ್ಲಿ ಜನ ಜೀವನ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ನಿರಂತರ ಮಳೆಯಿಂದ ನೀರಿನ ಮಟ್ಟ ಏರುತ್ತಿರುವುದರಿಂದ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾದ ಅಗತ್ಯ ಸಾಮಗ್ರಿಗಳು, ಔಷಧಿಗಳನ್ನು ಹೆಲಿಕಾಪ್ಟರ್ ಮೂಲಕ ತಲುಪಿಸಲು ಮತ್ತು ಸಿಲುಕಿಕೊಂಡಿರುವ ನಿವಾಸಿಗಳನ್ನು ಸ್ಥಳಾಂತರಿಸಲು ವಾಯುಪಡೆಯೊಂದಿಗೆ ಸಮನ್ವಯ ನಡೆಯುತ್ತಿದೆ.
ಇನ್ನು ಉತ್ತರಾಖಂಡದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಭಾರೀ ಮಳೆಯಿಂದಾಗಿ ಉತ್ತರಕಾಶಿಯನ್ನು ಧರಾಲಿ ಮತ್ತು ಗಂಗೋತ್ರಿಯಿಂದ ಸಂಪರ್ಕಿಸುವ ಪ್ರಮುಖ ಆಯಕಟ್ಟಿನ ರಸ್ತೆಯೇ ಕೊಚ್ಚಿಹೋಗಿದೆ.
ಘಟನಾ ಸ್ಥಳಕ್ಕೆ ಸಿಎಂ ಧಾಮಿ ದೌಡು
ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಮೇಘಸ್ಫೋಟದ ನಂತರದ ಪರಿಸ್ಥಿತಿಯನ್ನು ಅವಲೋಕಿಸಲು ಉತ್ತರಕಾಶಿಗೆ ಭೇಟಿ ನೀಡಿದ್ದಾರೆ. ಪೀಡಿತ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಮಳೆಯಿಂದ ತತ್ತರಿಸಿರುವ ರಾಜ್ಯಾದ್ಯಂತ ಪರಿಹಾರ ಮತ್ತು ಸ್ಥಳಾಂತರಿಸುವ ಕಾರ್ಯಾಚರಣೆ ಮುಂದುವರೆದಿದ್ದು, ಇದುವರೆಗೆ 130 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಭೂಕುಸಿತ, ನದಿ ಮಟ್ಟ ಏರಿಕೆ ಮತ್ತು ರಸ್ತೆಗಳು ಕೊಚ್ಚಿ ಹೋಗಿರುವುದರಿಂದ ಹಲವಾರು ಪ್ರದೇಶಗಳ ಸಂಪರ್ಕ ಕಡಿತಗೊಂಡಿವೆ ಎಂದು ತಿಳಿಸಿದ್ದಾರೆ.
