Advertisement

ನಿನ್ನೆ ನಿಧನರಾದ ಹಿರಿಯ ನಟಿ ಬಿ.ಸರೋಜಾದೇವಿ ಅವರ ಅಂತಿಮ ದರ್ಶನವನ್ನು ಸಿಎಂ ಸಿದ್ದರಾಮಯ್ಯ ಪಡೆದಿದ್ದಾರೆ. ಮಲ್ಲೇಶ್ವರಂ ನಿವಾಸಕ್ಕೆ ಸಿದ್ದರಾಮಯ್ಯ ಆಗಮಿಸಿ ಸರೋಜಾದೇವಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ್ರು.

ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಸಿದ್ದರಾಮಯ್ಯ.. ಸರೋಜಾದೇವಿ ಅಗಲಿಕೆ ಚಿತ್ರರಂಗಕ್ಕೆ ನಷ್ಟವಾಗಿದೆ. ಚಿಕ್ಕವಯಸ್ಸಿನಲ್ಲೇ ಅಭಿನಯ ಸರಸ್ವತಿ ಬಿರುದು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಏಳು ದಶಕಗಳ ಕಾಲ ಸಿನಿಮಾ ರಂಗದಲ್ಲಿದ್ರು.

ಅವರೊಬ್ಬರು ಮೇರು ನಟಿ. ಕನ್ನಡದಲ್ಲಷ್ಟೇ ಅಲ್ಲದೆ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲೂ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ರು.
ಎಲ್ಲಾ ಭಾಷೆಯ ಹೆಸರಾಂತ ನಟರ ಜೊತೆ ನಟಿಸಿದ್ರು. ಎಂಜಿಆರ್, ಎಂಟಿಆರ್, ರಾಜ್​ಕುಮಾರ್, ಶಿವಾಜಿ ಗಣೇಶನ್ ಜೊತೆ ನಟಿಸಿದ್ದರು. ಅವರು ಮಾಡೋ ಪ್ರತಿ ಪಾತ್ರಕ್ಕೂ, ಜೀವ ತುಂಬುತ್ತಿದ್ರು. ಕನ್ನಡ ಚಿತ್ರರಂಗ ಬೆಳೆಯೋಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅವ್ರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದರು. ಇದೇ ವೇಳೆ ಜಿಲ್ಲಾಡಳಿತದಿಂದ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ ಅಂತಾ ತಿಳಿಸಿದರು.

ಇನ್ನು, ಸರೋಜಾ ದೇವಿಯವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಿನಲ್ಲಿ ನಡೆಯಲಿದೆ. ರಾಮನಗರ ಜಿಲ್ಲೆಯ ದಶವಾರ ಗ್ರಾಮದಲ್ಲಿ ಸರೋಜಾ ದೇವಿಯವರ ಅಂತ್ಯಕ್ರಿಯೆ ನಡೆಯಲಿದೆ. ತಾಯಿ ರುದ್ರಮ್ಮ ಸಮಾಧಿ ಪಕ್ಕದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಮಧ್ಯಾಹ್ನ 1.30ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ. ಈಗಾಗಲೇ ಜಿಲ್ಲಾಡಳಿತದಿಂದ ಅಂತಿಮನಮನಕ್ಕೆ ಬ್ಯಾರಿಕೇಡ್, ಶಾಮಿಯಾನ ಹಾಕಿ ಸಿದ್ಧತೆ ಮಾಡಿಕೊಂಡಿದೆ.

Share.
Leave A Reply