ಒಂದು ವಾರದ ಹಿಂದೆ ಲಂಡನ್‌ನಲ್ಲಿ ಮೃತಪಟ್ಟಿದ್ದ ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಪತಿ ಹಿಂತಿರುಗುವಾಗ ಅಹಮದಾಬಾದ್ ವಿಮಾನ ದುರಂತದಲ್ಲಿ (Ahmedabad Plane Crash) ಮೃತಪಟ್ಟಿದ್ದಾರೆ. ಒಂದೇ ವಾರದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ 8 ಮತ್ತು 4 ವರ್ಷದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ಭಾರತ ಮೂಲದ ಲಂಡನ್ ಪ್ರಜೆ ಅರ್ಜುನ್ ಮನುಭಾಯಿ ಪಟೋಲಿಯಾ (Arjun Manubhai Patolia) ಅಹಮದಾಬಾದ್ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಅರ್ಜುನ್ ಅವರ ಪತ್ನಿ ಭಾರತಿಬೆನ್ ಒಂದು ವಾರಗಳ ಹಿಂದೆ ಲಂಡನ್‌ನಲ್ಲಿ ಮೃತಪಟ್ಟಿದ್ದರು. ಭಾರತಿಬೆನ್ ಸಾವನ್ನಪ್ಪುವ ಮೊದಲು ತನ್ನ ಚಿತಾಭಸ್ಮವನ್ನು ತವರು ನೆಲೆದ ಅಮ್ರೇಲಿಯಲ್ಲಿನ ಪೌಲ್ ನದಿಯಲ್ಲಿ ಬಿಡಬೇಕು ಎಂದು ಕೊನೆ ಆಸೆಯನ್ನು ತಿಳಿಸಿದ್ದರು.

ಪತ್ನಿಯ ಕೊನೆ ಆಸೆಯಂತೆ ವಾಡಿಯಾದ ಸಂಬಂಧಿಕರೊಂದಿಗೆ ಸೇರಿ ಅರ್ಜುನ್, ಭಾರತಿಬೆನ್ ಅವರ ಚಿತಾಭಸ್ಮವನ್ನು ಅಮ್ರೇಲಿಯಲ್ಲಿನ ಪೌಲ್ ನದಿಯಲ್ಲಿ ಬಿಟ್ಟು, ವಿಧಿವಿಧಾನಗಳನ್ನು ಮುಗಿಸಿದ್ದರು. ಬಳಿಕ ಲಂಡನ್‌ನಲ್ಲಿರುವ ಇಬ್ಬರು ಮಕ್ಕಳ ಬಳಿಗೆ ತೆರಳುತ್ತಿದ್ದ ವೇಳೆ ವಿಮಾನ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಒಂದೇ ವಾರದಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡ ಇಬ್ಬರು ಹೆಣ್ಣುಮಕ್ಕಳು ದುಃಖಿಸಿದ್ದಾರೆ.

ಜೂನ್ 12ರಂದು ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ ಎಐ171 ವಿಮಾನ ಮೆಘಾನಿಯ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿದೆ. ಈ ಅಪಘಾತದ ಪರಿಣಾಮ ವಿಮಾನದಲ್ಲಿದ್ದ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದರು. 241 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ಅದೃಷ್ಟವಶಾತ್ ಓರ್ವ ಪ್ರಯಾಣಿಕ ಬದುಕುಳಿದಿದ್ದಾರೆ.

Share.
Leave A Reply