ಕಾಂಗ್ರೆಸ್ ನಲ್ಲಿ ಕೆಲವು ಗುಂಪು ನೇರ, ಇನ್ನು ಕೆಲವು ಗುಂಪುಗಳು ಸೈಲೆಂಟಾಗಿ ಕೆಲಸ ಮಾಡುತ್ತಿವೆ. ಬೇರೆಯವರ ರೀತಿ ಸರ್ಕಾರ ಪತನ ಆಗುತ್ತೆ ಅಂತ ನಾನು ಹೇಳೋದಿಲ್ಲ. ಆದರೆ ಕಾಂಗ್ರೆಸ್‌ ಪಕ್ಷದಲ್ಲಿ ಹಲವು ಗುಂಪುಗಳಿರುವುದು ಸತ್ಯ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಬೀದರ್‌ನ ಏರ್ ಪೋರ್ಟ್ನಲ್ಲಿ ಮಾತನಾಡಿದ ಅವರು, 5 ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಕೌಂಟರ್ ನೀಡಿದರು. ಸಿಎಂ ಖುರ್ಚಿಗಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಹಲವಾರು ಪ್ರಕ್ರಿಯೆಗಳು ನಡೆಯುತ್ತಿವೆ. ಅದೇನೋ ಕ್ರಾಂತಿ ಆಗುತ್ತೆ ಅಂತ ಹೇಳ್ತಿದಾರೆ ನೋಡೋಣ. ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜ್ಯಗಳು ದಿವಾಳಿಯಾಗ್ತಿವೆ. ಜನರ ಈ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ

ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡದೆ ಎರಡೂವರೆ ವರ್ಷ ಕಾಲಹರಣ ಮಾಡಿದ್ದಾರೆ. ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂದು ಖುದ್ದು ಅವರದ್ದೇ ಪಕ್ಷದ ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ನೀಡುತ್ತಿದ್ದೇವೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಯಾರಿಗೆ ಗ್ಯಾರಂಟಿ ಬಂದಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಅಧಿಕಾರದ ರಾಜ್ಯಗಳು ಆರ್ಥಿಕ ದಿವಾಳಿ

ರಾಜ್ಯಕ್ಕೆ ದೊಡ್ಡ ಗಾತ್ರದ ಬಜೆಟ್ ಕೊಟ್ಟಿದ್ದೀನಿ ಎಂದು ಸಿಎಂ ಬೆನ್ನು ತಟ್ಟುಕೊಳ್ತಾರೆ. ಅದರಲ್ಲಿ ಸಾಲ ಎಷ್ಟಾಗಿದೆ ಅನ್ನೋದು ಜನರಿಗೆ ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. 55 ಸಾವಿರ ಕೋಟಿ ವರ್ಷಕ್ಕೆ ನೀವು ಗ್ಯಾರಂಟಿ ಯೋಜನೆಗಳಿಗಾಗಿ ಹೊಂದಿಸಬೇಕು. ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜ್ಯಗಳು ಆರ್ಥಿಕ ದಿವಾಳಿಯಾಗ್ತಿವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.

2028ರ ವಿಧಾನಸಭಾ ಚುನಾವಣೆಯಲ್ಲಿ BJP- JDS ಸೀಟು ಹಂಚಿಕೆ ವಿಚಾರಕ್ಕೆ ಮಾತನಾಡಿದ ಅವರು, ಯಾವುದೇ ಗೊಂದಲಕ್ಕೆ ಎಡೆಮಾಡಿ ಕೊಡುವ ಪ್ರಶ್ನೆ ಇಲ್ಲ, ಸಂಸತ್ ಚುನಾವಣೆಯಲ್ಲಿ ಕೈ ಜೋಡಿಸಿದ್ದೇವೆ. ಅದನ್ನ ರಾಜ್ಯದ ಜನ ನೋಡಿದ್ದಾರೆ, ಅದರಲ್ಲಿ ಮುಚ್ಚು ಮರೆ ಇಲ್ಲ ಎಂದು ತಿಕ್ಷಣವಾಗಿ ಉತ್ತರಿಸಿದರು. ಪ್ರಧಾನಿ ಮೋದಿ ಜೀ ಅವರ ನಾಯಕತ್ವದಲ್ಲಿ ನಮ್ಮ ದೇಶ ಆರ್ಥಿಕವಾಗಿ ಮೂರನೇ ದೊಡ್ಡ ದೇಶವಾಗಿದೆ. ರಾಜ್ಯದ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ತಿಳಿಸಿದರು.

ಐತಿಹಾಸಿಕ ಪವಿತ್ರ ಸ್ಥಳ ಗುರುದ್ವಾರಕ್ಕೆ ನಿಖಿಲ್ ಭೇಟಿ

ಬೀದರ್ ಜಿಲ್ಲೆಯ ಐತಿಹಾಸಿಕ ಪವಿತ್ರ ಗುರುನಾನಕ್ ಜೀರಾ ಸಾಹಿಬ್ ಗುರುದ್ವಾರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಹಾಗೆಯೇ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಸದ್ಗುರು ಶ್ರೀ ಡಾ.ಶಿವಕುಮಾರ್ ಮಹಾಸ್ವಾಮಿಗಳ ಆಶೀರ್ವಾದ ಪಡೆದು ಸದಸ್ಯತ್ವದ ನಿರೀಕ್ಷಿತ ಗುರಿ ಸಾಧಿಸಲು ಪ್ರಾರ್ಥಿಸಿದರು.

Share.
Leave A Reply