ಗುಜರಾತ್‌ನಲ್ಲಿ ಅತಿದೊಡ್ಡ ದುರಂತವೇ ನಡೆದು ಹೋಯ್ತು.. ಅಹ್ಮದಾಬಾದ್‌ ಏರ್‌ಪೋರ್ಟ್‌ನಿಂದ ಟೇಕಾಪ್‌ ಆಗಿದ್ದ ಏರ್‌ ಇಂಡಿಯಾ ವಿಮಾನ ಕೆಲವೇ ಕ್ಷಣಗಳಲ್ಲಿ ಧರೆಗಪ್ಪಳಿಸಿ ಬಿಡ್ತು.. ಅದೂ ವೈದ್ಯಕೀಯ ವಿದ್ಯಾರ್ಥಿಗಳು ಊಟ ಮಾಡ್ತಿದ್ದಾಗಲೇ ಹಾಸ್ಟೆಲ್‌ ಮೇಲೆ ಬಿದ್ದಿದ್ರಿಂದ ಘನಘೋರವೇ ಆಗೋಯ್ತು.. ಅದರ ಪರಿಣಾಮವಾಗಿ ವಿದ್ಯಾರ್ಥಿಗಳು ಸೇರಿ 242ಕ್ಕೂ ಹೆಚ್ಚು ಜೀವಗಳು ಬಲಿಯಾದ್ವು.. ಆದ್ರೆ, ಈ ಘೋರ ದುರಂತದಲ್ಲಿ ಬಲಿಯಾದ ಒಬ್ಬೊಬ್ಬರ ಹಿಂದೆಯೂ ಒಂದೊಂದು ಒಂದು ಕಣ್ಣೀರ ಕಥೆ ಅಡಗಿದೆ.. ಒಂದೊಂದು ಕುಟುಂಬದ ಹಿಂದೆಯೂ ಮನ ಮಿಡಿಯುವ ಕಥೆ ಇದೆ.

ಕಣ್ಣೀರ ಕಥೆ -1 : ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ!

ಇದೊಂದು ಮನ ಮಿಡಿಯುವ ಕಣ್ಣೀರ ಕಥೆ.. ಒಂದು ತಿಂಗಳ ಹಿಂದಷ್ಟೇ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದ ಜೋಡಿಯೊಂದು ಈ ದುರಂತದಲ್ಲಿ ಮಡಿದಿದೆ.. ಹೌದು.. ಲಂಡನ್‌ನಲ್ಲಿ ವಾಸಿಸುವ ಮತ್ತು ಮೂಲತಃ ಬೋಟಾಡ್ ಜಿಲ್ಲೆಯ ಗಧಾಡಾ ತಾಲ್ಲೂಕಿನ ಅಡ್ತಾಲಾ ಗ್ರಾಮದವರಾದ ಹಾರ್ದಿಕ್ ದೇವರಾಜ್‌ಭಾಯ್ ಅವಯ್ಯಾ ಮತ್ತು ವಿಭೂತಿಬೆನ್ ಪಟೇಲ್‌ ಸೂರತ್‌ನವರಾಗಿದ್ದು, ತಿಂಗಳ ಹಿಂದಷ್ಟೇ ರಿಂಗ್‌ ಬದಲಿಸಿಕೊಂಡಿದ್ದಾರೆ… ಜೂನ್‌ 5 ರಂದು ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಲಂಡನ್‌ನಿಂದ ಭಾರತಕ್ಕೆ ಬಂದಿದ್ದರು. ನಿನ್ನೆ ಅಹಮದಾಬಾದ್‌ನಿಂದ ಲಂಡನ್‌ಗೆ ವಾಪಾಸಾಗಲು ಹೊರಟಿದ್ದರು. ಆದ್ರೆ, ವಿಧಿಯಾಟವೇ ಬೇರೆಯಾಗಿತ್ತು.. ಇಬ್ಬರೂ ರಿಂಗ್‌ ಬದಲಿಸಿದ ತಿಂಗಳಲ್ಲೇ ವಿಮಾನ ದುರಂತದಲ್ಲಿ ಪ್ರಾಣ ಬಿಟ್ಟಿದ್ದು, ಎರಡೂ ಕುಟುಂಬಸ್ಥರು ಕಣ್ಣೀರಲ್ಲಿ ಮುಳುಗಿದ್ದಾರೆ.

ಕಣ್ಣೀರ ಕಥೆ -2 : ಮೊದಲ ಬಾರಿಗೆ ಗಂಡನ ಭೇಟಿಗೆ ಹೊರಟಿದ್ದ ಪತ್ನಿ!
ಇನ್ನು, ಸಪ್ತಸಾಗರದಾಚೆಯಿದ್ದ ಗಂಡನ ಭೇಟಿಯಾಗಲು ವಿಮಾನ ಹತ್ತಿದ್ದ ನವವಧು ವಿಮಾನ ದುರಂತದಲ್ಲಿ ಕಣ್ಮುಚ್ಚಿದ್ದಾಳೆ. ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್​ಪುರೋಹಿತ್ ಎಂಬಾಕೆ ಇದೇ ವರ್ಷದ ಜನವರಿಯಲ್ಲಿ, ಮನ್ಫೂಲ್ ಸಿಂಗ್ ಅನ್ನೋರ ಜತೆ ಮದುವೆ ಆಗಿದ್ದರು. ಮದುವೆಯ ನಂತರ ಆಕೆಯ ಪತಿ ಲಂಡನ್​ನಲ್ಲಿ ವ್ಯಾಸಾಂಗ ಮಾಡುತ್ತಿದ್ದರಂತೆ. ಹೀಗಾಗಿ ಪತಿಯನ್ನ ಮೊದಲ ಬಾರಿ ಭೇಟಿಯಾಗಲು ಖುಷ್ಬು ಲಂಡನ್​ ಫ್ಲೈಟ್​ ಹತ್ತಿದ್ದರು.. ಆದ್ರೆ, ಗಂಡನ ನೋಡಲು ಹೊರಟಿದ್ದ ಖುಷ್ಬೂರನ್ನು ವಿಧಿ ಯಮನ ಪಾದ ಸೇರುವಂತೆ ಮಾಡಿದೆ.

ಕಣ್ಣೀರ ಕಥೆ -3 : ದುರಂತದಲ್ಲಿ ಇಡೀ ಕುಟುಂಬವೇ ಸರ್ವನಾಶ!
ಇನ್ನು, ವಿಮಾನದ ದುರಂತದಲ್ಲಿ ಮತ್ತೊಂದು ಮನ ಮಿಡಿಯುವ ಕಥೆ ಇದೆ. ಮೂವರು ಮಕ್ಕಳ ಜೊತೆ ಒಂದಿಡೀ ಕುಟುಂಬವೇ ಸಜೀವದಹನಗೊಂಡಿದೆ. ಲಂಡನ್‌ನಲ್ಲಿ ಆರು ವರ್ಷದಿಂದ ಸಾಫ್ಟ್ ವೇರ್ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಪ್ರತೀಕ್‌ ಜೋಶಿ, ತನ್ನ ಕುಟುಂಬದವ ಜೊತೆ ಲಂಡನ್‌ನಲ್ಲಿ ವಾಸಿಸಲು ತಯಾರಿ ನಡೆಸಿದ್ದರು. ಡಾ ಕೋಮಿ ವ್ಯಾಸ್ ಲಂಡನ್‌ಗೆ ಹೋಗುವ ಕಾರಣ ತಮ್ಮ ಕೆಲಸವನ್ನ 2 ದಿನದ ಹಿಂದೆಯಷ್ಟೇ ಬಿಟ್ಟು ಲಂಡನ್‌ಗೆ ಹೋಗುವ ತಯಾರಿ ನಡೆಸಿದ್ದರು. ಪ್ರತೀಕ್‌ ಜೋಶಿ ಹಾಗೂ ಡಾ ಕೋಮಿ ವ್ಯಾಸ್ ದಂಪತಿಗೆ ಮೂವರು ಮಕ್ಕಳಿದ್ದು, ಒಂದು ಹೆಣ್ಣು ಹಾಗೂ ಇಬ್ಬರು ಅವಳಿ ಗಂಡುಮಕ್ಕಳು. ಆದರೆ ಏರ್‌ ಇಂಡಿಯಾ ದುರಂತ ಈ ಕುಟುಂಬವನ್ನೇ ನುಂಗಿ ಹಾಕಿದೆ. ವಿಮಾನದಲ್ಲಿ ತೆಗೆದ ಫೋಟೋ ವೈರಲ್‌ ಆಗುತ್ತಿದ್ದು, ಈ ಕುಟುಂಬದ ಸಾವು ಎಲ್ಲರನ್ನು ದುಖಃದ ಮಡುವಿನಲ್ಲಿ ಮಲಗಿಸಿದೆ..

ಕಣ್ಣೀರ ಕಥೆ -4 : ಕನಸಿನ ಮನೆಗೆ ಕಾಲಿಡುವ ಕನಸಲ್ಲಿದ್ದ ಮಹಿಳೆ!
ಲಂಡನ್‌ನಲ್ಲಿ ನರ್ಸ್‌ ಆಗಿದ್ದ ಮಹಿಳೆಯೊಬ್ಬರು ತಮ್ಮ ಕನಸಿನ ಮನೆಗೆ ಕಾಲಿಡುವ ತವಕದಲ್ಲಿದ್ರು.. ಕೇರಳದ ಪತನಂತಿಟ್ಟ ಜಿಲ್ಲೆಯ ಪುಲ್ಲತ್​ ಮೂಲದ ರಂಜಿತಾ ಗೋಪಕುಮಾರನ್​ ನಾಯರ್, ಕಳೆದ 4 ವರ್ಷಗಳಿಂದ ಲಂಡನ್​ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರಜೆಯ ನಿಮಿತ್ತ 4 ದಿನಗಳ‌ ಹಿಂದೆ ಊರಿಗೆ ಬಂದಿದ್ದ ರಂಜಿತಾ, ಇಬ್ಬರು ಮಕ್ಕಳು ಮತ್ತು ತಾಯಿ ಪುಲ್ಲತ್​ನಲ್ಲಿ ವಾಸವಾಗಿದ್ದಾರೆ. ನಿನ್ನೆ ಇಬ್ಬರು ಮಕ್ಕಳನ್ನ ಸ್ಕೂಲ್​ಗೆ ಕಳುಹಿಸಿ ಲಂಡನ್​ಗೆ ಹೊರಟ್ಟಿದ್ದರು. ರಂಜಿತಾ ಅವರು ಹೊಸ ಮನೆಗೆ ಕಾಲಿಡುವ ತವಕದಲ್ಲಿದ್ದರು. ಈಗಾಗಲೇ ಹೊಸ ಮನೆಯ ಬಹುತೇಕ ಕೆಲಸ ಕಂಪ್ಲೀಟ್ ಆಗಿತ್ತು. ಮುಂದಿನ ತಿಂಗಳು ಅಂದ್ರೆ ಜುಲೈನಲ್ಲಿ ಹೊಸ ಮನೆಯಲ್ಲಿ ಬದುಕು ಕಟ್ಟಲು ಕನಸು ಕಂಡಿದ್ದರು. ಆದ್ರೆ, ವಿಮಾನ ಪತನದ ಘೋರ ದುರಂತದಲ್ಲಿ ರಂಜಿತಾ ಅವರು ಮೃತಪಟ್ಟಿದ್ದಾರೆ. ಮನೆಗೆ ಆಸರೆಯಾಗಿದ್ದ ರಂಜಿತಾ ಅವರನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕ್ತಿದ್ದಾರೆ.

ಕಣ್ಣೀರ ಕಥೆ – 5 : ಲಕ್ಕಿ ನಂಬರ್‌ನಲ್ಲೇ ಜೀವ ಬಿಟ್ಟ ಗುಜರಾತ್‌ ಮಾಜಿ ಸಿಎಂ!
ವಿಮಾನದ ದುರಂತದಲ್ಲಿ ಗುಜರಾತ್‌ನ ಮುಖ್ಯಮಂತ್ರಿ ವಿಜಯ್‌ ರೂಪಾನಿ ಕೂಡ ವಿಧಿವಶರಾಗಿದ್ದಾರೆ. ಆದ್ರೆ, ವಿಜಯ್​ ರೂಪಾನಿಯವರ ಅಂತಿಮ ಯಾತ್ರೆಯಲ್ಲೂ ಲಕ್ಕಿ ನಂಬರ್ ನಿಗೂಢತೆ ಇದೀಗ ನೋವಿನ ಜೊತೆಗೆ ಅಚ್ಚರಿಗೂ ಕಾರಣವಾಗಿದೆ. ವಿಜಯ್ ರೂಪಾನಿಯ ಅತ್ಯಂತ ಲಕ್ಕಿ ನಂಬರ್ ಎಂದೇ ಪರಿಗಣಿಸಲ್ಪಟ್ಟಿದ್ದ 1206, ಕೊನೆಯ ಯಾತ್ರೆಯಲ್ಲೂ ಜೊತೆಯಾಗಿದೆ. 1206 ವಿಜಯ್​ ರೂಪಾನಿಯವರ ಲಕ್ಕಿ ನಂಬರ್​.. ಅವರ ಎಲ್ಲ ಕಾರುಗಳ ರಿಜಿಸ್ಟರ್​ ನಂಬರ್​ 1206.. ರಾಜಕೀಯ ಆರಂಭಿಕ ದಿನಗಳಲ್ಲಿ ಅವರು ಬಳಸಿದ್ದ ಸ್ಕೂಟರ್​ನ ರಿಜಿಸ್ಟರ್​ ನಂಬರ್​ ಕೂಡ 1206..

ಈ ಸಂಖ್ಯೆ ವಿಜಯ್​ ರೂಪಾನಿಗೆ ರಾಜಕೀಯವಾಗಿಯೂ ಯಶಸ್ಸು ತಂದು ಕೊಟ್ಟಿದೆ. ನಿನ್ನೆ ಅವರು ಲಂಡನ್​ಗೆ ತೆರಳಲು ಏರ್​ಪೋರ್ಟ್​ನಲ್ಲಿ ಬೋರ್ಡಿಂಗ್​ ಆದ ಸಮಯ.. 12 ಗಂಟೆ 10 ನಿಮಿಷ.. ಅವರ ಸೀಟ್​ ನಂಬರ್​ ಕೂಡ 12 ಆಗಿತ್ತು. ಇದೀಗ ಕೊನೆಯ ಪ್ರಯಾಣದ ದಿನಾಂಕ ಜೂನ್ 12, ಅಂದರೆ 12-06.. ಹೀಗೆ ಲಕ್ಕಿ ನಂಬರ್ ದಿನವೇ ವಿಜಯ್ ರೂಪಾನಿ ಬದುಕು ಅಂತ್ಯವಾಗಿದ್ದು, ನಿಜಕ್ಕೂ ಅಚ್ಚರಿ..

ಒಟ್ನಲ್ಲಿ, ವಿಮಾನ ದುರಂತದಲ್ಲಿ 265ಕ್ಕೂ ಹೆಚ್ಚು ಬಲಿಯಾಗಿದ್ದು, ಸಾವಿರಾರು ಕನಸುಗಳು ಧಗಧಗನೇ ಹೊತ್ತಿ ಉರಿದು ಬೂದಿಯಾಗಿವೆ… ಆದ್ರೆ, ಅವರು ಬಿಟ್ಟು ಕನಸು, ಬದುಕು, ಹೋರಾಟ, ಸುಖ ಸಂತೋಷ ಎಲ್ಲವೂ ಕಣ್ಣೀರು ತರಿಸುವಂತಿದೆ. ಕುಟುಂಬಸ್ಥರಿಗಂತೂ ಅರಗಿಸಿಕೊಳ್ಳಲಾಗದ ನೋವುಂಟು ಮಾಡಿರೋದಂತೂ ಸುಳ್ಳಲ್ಲ..

Share.
Leave A Reply