ಬೆಂಗಳೂರು, ಡಿ.15 : ವೋಟ್‌ ಚೋರಿ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಸುಳ್ಳಿನ ಸಂಕಥನ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳು ಭವಿಷ್ಯದಲ್ಲಿ ಘೋರ ಪರಿಣಾಮ ಅನುಭವಿಸುತ್ತವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಎಚ್ಚರಿಕೆ ನೀಡಿದರು.

ರಾಜ್ಯಸಭೆಯಲ್ಲಿ ಸೋಮವಾರ ಈ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಪ್ರಧಾನಿಗಳು, ಪ್ರತಿಪಕ್ಷಗಳು ನಿರಂತರವಾಗಿ ಸುಳ್ಳಿನ ಕಥೆಗಳನ್ನು ಪ್ರಚಾರ ಮಾಡುತ್ತಾ ಮತದಾರರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟು ಹಾಕಿದರೆ ಅದರಿಂದ ಪ್ರತಿಪಕ್ಷಗಳಿಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿದರು.

ಪ್ರತಿಪಕ್ಷಗಳು ಪ್ರಧಾನಿಯವರ ಬಗ್ಗೆ ಹಾದಿಬೀದಿಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಕೆಟ್ಟದಾಗಿ ಟೀಕೆ ಮಾಡುತ್ತಿರುವ ಬಗ್ಗೆ ಮಾಜಿ ಪ್ರಧಾನಿಗಳು ಹರಿಹಾಯ್ದರು. ನಮ್ಮದು ಬಹಳ ದೊಡ್ಡ ರಾಷ್ಟ್ರ. ಕಾಂಗ್ರೆಸ್ ಪಕ್ಷವು ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರಬಹುದು, ನನ್ನ ಪ್ರತಿಪಕ್ಷ ಸ್ನೇಹಿತರೇ ದಯವಿಟ್ಟು ನೆನಪಿಡಿ ʼವೋಟ್ ಚೋರಿʼ ಎಂಬ ಪದಗಳನ್ನು ಬಳಸುವುದರಿಂದ ನೀವು ಮುಂಬರುವ ದಿನಗಳಲ್ಲಿ ತೊಂದರೆ ಅನುಭವಿಸುತ್ತೀರಿ. ನೀವು ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ದೇವೇಗೌಡರು ಕಟುವಾದ ಶಬ್ದಗಳಲ್ಲಿ ಹೇಳಿದರು.

ʼವೋಟ್ ಚೋರಿʼ ಎಂಬ ಅಪಪ್ರಚಾರದ ಮೂಲಕ ನರೇಂದ್ರ ಮೋದಿ ಅವರ ನಾಯಕತ್ವವನ್ನು ದೂಷಿಸುವ ಮೂಲಕ ಮತ್ತು ಮತದಾರರ ಮನಸ್ಸಿನಲ್ಲಿ ಅನುಮಾನವನ್ನು ಸೃಷ್ಟಿಸುವ ಮೂಲಕ ಪ್ರತಿಪಕ್ಷಗಳು ಏನು ಗಳಿಸಲಿವೆ ಎಂದು ಪ್ರಶ್ನಿಸಿದ ಮಾಜಿ ಪ್ರಧಾನಿ ದೇವೆಗೌಡರು, ನಿಮ್ಮ ಮನಸ್ಸಿಗೆ ಏನಾಗಿದೆ? ಏನಾದರೂ ಸಮಸ್ಯೆ ಇದ್ದರೆ ಸರಿಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ನಾನು ಏಳು ದಶಕಗಳಿಗೂ ಹೆಚ್ಚಿನ ಸಾರ್ವಜನಿಕ ಜೀವನದಲ್ಲಿ ಚುನಾವಣೆಯಲ್ಲಿ ಸೋಲು ಗೆಲುವನ್ನು ಎದುರಿಸಿದ್ದೇನೆ. ನಾನು ಎಂದಿಗೂ ಮತಗಳ್ಳತನದಂತಹ ವಿಷಯಗಳನ್ನು ಹೇಳಲಿಲ್ಲ ಎಂದು ಒತ್ತಿ ಹೇಳಿದರು. ಕೇರಳದಲ್ಲಿ 18,000 ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಬರೆದ ಪತ್ರವನ್ನು ಅವರು ಉಲ್ಲೇಖಿಸಿದರು. ನಾನು ಇದನ್ನು ಏಕೆ ಹೇಳುತ್ತಿದ್ದೇನೆಂದರೆ ನೆಹರು ಅವಧಿಯಲ್ಲಿಯೂ ಸಹ ಚುನಾವಣಾ ವ್ಯವಸ್ಥೆಯಲ್ಲಿ ಕೆಲವು ಲೋಪಗಳು ಇದ್ದವು ಎಂದರು.

ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪ್ರಸ್ತಾಪಿಸಿಯೂ ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಬಿಹಾರ ಚುನಾವಣೆಯಲ್ಲಿ ಸೋಲು ಎದುರಿಸಿತು. ಮತದಾರರ ಪಟ್ಟಿಯ ಕೂಲಂಕುಶ ಪರಿಶೀಲನೆಯ ನಂತರವೂ ಆ ರಾಜ್ಯದಲ್ಲಿ ಏನಾಯಿತು ಎಂಬುದನ್ನು ಸ್ವತಃ ಪ್ರತಿಪಕ್ಷ ನಾಯಕರು ಆಲೋಚಿಸಬೇಕು. ಆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಆರು ಶಾಸಕರು ಸಿಕ್ಕಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಬಗ್ಗೆ ಪ್ರಧಾನಿಗಳ ವಿರುದ್ಧ ಪ್ರತಿಪಕ್ಷಗಳು ಆರೋಪಗಳನ್ನು ಮಾಡಲು ಏಕೆ ಬಯಸುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದ ದೇವೇಗೌಡರು, ದೇಶದಲ್ಲಿ ಚುನಾವಣಾ ಆಯೋಗವಿದೆ, ಸುಪ್ರೀಂ ಕೋರ್ಟ್ ಇದೆ. ಈ ಎಲ್ಲ ವಿಷಯಗಳನ್ನು ಸರಿಪಡಿಸಲು ಚುನಾವಣಾ ಆಯೋಗವು ಎಲ್ಲಾ ರಾಜ್ಯ ಘಟಕಗಳಿಗೆ ನಿರ್ದೇಶನ ನೀಡಿದೆ ಎಂದು ಒತ್ತಿ ಹೇಳಿ, ರಾಷ್ಟ್ರದ ಜನರು ನರೇಂದ್ರ ಮೋದಿ ಅವರ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ ಮತ್ತು ಮುಂದಿನ ಲೋಕಸಭೆ ಚುನಾವಣೆಯ ನಂತರವೂ ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ದೇವೇಗೌಡರು ಭವಿಷ್ಯ ನುಡಿದರು.

Share.
Leave A Reply