ಬೆಂಗಳೂರು, ಮಾ.11: ಇಸ್ರೇಲ್‌ ಮತ್ತು ಇರಾನ್‌ ಯುದ್ಧ ಇದೀಗ ಜಾಗತಿಕ ತಲ್ಲಣ, ತಳಮಳಕ್ಕೆ ಕಾರಣವಾಗುತ್ತಿದೆ. ಮಧ್ಯಪ್ರಾಚ್ಯದ ದೇಶಗಳ ಯುದ್ಧದಾಹಕ್ಕೆ ಏಷ್ಯಾದ ಜನರ ಊಟೋಪಚಾರಕ್ಕೆ ಅಡ್ಡಿ, ಆತಂಕಗಳು ಸೃಷ್ಟಿಯಾಗುತ್ತಿದೆ. ಅದ್ರಲ್ಲೂ ಹೋಟೆಲ್‌ನ್ನೇ ಅವಲಂಬಿಸಿದ್ದ ಬಹುತೇಕ ಬ್ಯಾಚುಲರ್‌ಗಳಿಗೆ ಆಘಾತ ಉಂಟಾಗಿದ್ದು, ಹೋಟೆಲ್‌ಗಳಲ್ಲಿ ಊಟ ಸಿಗದೇ ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು.. ಇರಾನ್‌ ಹಾಗೂ ಇಸ್ರೇಲ್‌ ಮಧ್ಯೆ ಯುದ್ಧ ತಾರಕಕ್ಕೇರಿದ ಬೆನ್ನಲ್ಲೇ ಏಷ್ಯಾದ ದೇಶಗಳಿಗೆ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುತ್ತಿದೆ. ಎಲ್‌ಪಿಜಿ, ಸಿಎನ್‌ಜಿ ಗ್ಯಾಸ್‌ ಪೂರೈಕೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಅದರಲ್ಲೂ ಹೋಟೆಲ್‌ಗಳಿಗೆ ವಾಣಿಜ್ಯ ಸಿಲಿಂಡರ್‌ ಪೂರೈಕೆ ಮೊದಲಿನ ಸ್ಥಿತಿಯಲ್ಲಿ ಸಪ್ಲೈ ಆಗುತ್ತಿಲ್ಲ. ಇದು ಬೆಂಗಳೂರಿನ ಹೋಟೆಲ್‌ ಉದ್ಯಮಕ್ಕೆ ಭಾರಿ ಹೊಡೆತ ನೀಡಿದೆ. ಬೀದಿ ಬದಿ ಹೋಟೆಲ್‌ಗಳು, ಫುಡ್‌ ಸ್ಟ್ರೀಟ್‌ಗಳಲ್ಲಿನ ಅಂಗಡಿಗಳು, ಹೋಟೆಲ್‌ಗಳು ಓಪನ್‌ ಆಗದೇ ಬಿಕೋ ಅಂತಿವೆ. ಇದೇ ಪರಿಸ್ಥಿತಿ ಮುಂದುವರಿದಿದ್ದೇ ಆದಲ್ಲಿ ತಿಂಡಿ ಪ್ರಿಯರಿಗೆ ಬರಸಿಡಿಲೇ ಬಡಿದಂತಾಗಲಿದೆ.

ಮಿಡಲ್‌ ಈಸ್ಟ್‌ ದೇಶಗಳ ಯುದ್ಧ ದಾಹದಿಂದಾಗಿ ಹಾರ್ಮುಜ್‌ ಜಲಸಂಧಿಯನ್ನು ಕ್ಲೋಸ್‌ ಮಾಡಲಾಗಿದೆ. ಈ ಜಲಸಂಧಿಯಿಂದ ಗಲ್ಫ್‌ ದೇಶಗಳಿಂದ ಉಳಿದ ದೇಶಗಳಿಗೆ ಇಂಧನ ಸಪ್ಲೈ ಆಗುತ್ತದೆ. ಆದರೆ, ಯುದ್ಧದ ಕಾರಣದಿಂದಾಗಿ ಇರಾನ್‌ ದೇಶ ಈ ಜಲಸಂಧಿಯನ್ನು ಕ್ಲೋಸ್‌ ಮಾಡಿದೆ. ಇಂಧನ ತುಂಬಿದ್ದ ದೊಡ್ಡ ದೊಡ್ಡ ಹಡಗುಗಳನ್ನು ತಡೆದು ನಿಲ್ಲಿಸಿದೆ. ಇದ್ರಿಂದಾಗಿ ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಇನ್ನಿತರ ತೈಲ ಮತ್ತು ಗ್ಯಾಸ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಇದರ ಪರಿಣಾಮವಾಗಿ ಬೆಂಗಳೂರಿನ ವಿಜಯನಗರ ಫುಡ್‌ ಸ್ಟ್ರೀಟ್‌, ದೇವನಹಳ್ಳಿಯ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಹೋಟೆಲ್‌ಗಳು ಬಹುತೇಕ ಬಂದ್‌ ಆಗಿವೆ ಅಂತಾ ಹೇಳಲಾಗ್ತಿದೆ. ಮತ್ತೊಂದೆಡೆ, ಮೆಜೆಸ್ಟಿಕ್‌ನಲ್ಲಿರುವ ಹೋಟೆಲ್‌ಗಳಿಗೂ ಸಿಲಿಂಡರ್‌ಗಳ ಕೊರತೆ ಎದುರಾಗಿದೆ. ಇನ್ನು ಕೆಲವು ಹೋಟೆಲ್‌ಗಳಲ್ಲಿ ಸೌದೆ ಬಳಸಿ ತಿಂಡಿ, ಊಟ ತಯಾರಿಸಲಾಗುತ್ತಿದೆ. ಅವುಗಳು ಕೂಡ ಯಾವಾಗ ಬೇಕಾದರೂ ಬಂದ್‌ ಆಗಬಹುದು. ಹೀಗಾಗಿದ್ದೇ ಆದಲ್ಲಿ ಹೋಟೆಲ್‌ಗಳನ್ನೇ ನಂಬಿದ್ದ ರಾಜಧಾನಿಯ ಅನೇಕ ಜನರು ಬೀದಿಗೆ ಬೀಳುವ ಕಾಲ ದೂರವೇನಿಲ್ಲ..

ಇನ್ನು, ಕಮರ್ಷಿಯಲ್‌ ಸಿಲಿಂಡರ್‌ಗಳ ಸಂಗ್ರಹಣೆಯಲ್ಲಿ ಯಾವುದೇ ಕೊರತೆ ಇಲ್ಲ. ಕಾಂಗ್ರೆಸ್‌ ಬರೀ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಅಂತಾ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಆದಾಗ್ಯೂ ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಅಂತಾ ಆಗ್ರಹಿಸಿದ್ದಾರೆ. ಆದ್ರೆ, ಮುಂದೇನಾಗುತ್ತೋ ಕಾದು ನೋಡಬೇಕು..

Share.
Leave A Reply