ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಶುರುವಾಗಿ ಹನ್ನೊಂದೇ ದಿನಕ್ಕೆ ಕ್ಲೋಸ್‌ ಆಗಿದೆ.. ಬಿಗ್‌ಬಾಸ್‌ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋಗೆ ರಾಮನಗರ ಜಿಲ್ಲಾಡಳಿತ ಬೀಗ ಜಡಿದು ಬಿಟ್ಟಿದೆ. ಸದ್ಯ ಸ್ಪರ್ಧಿಗಳನ್ನೆಲ್ಲಾ ರೆಸಾರ್ಟ್‌ವೊಂದರಲ್ಲಿ ಇರಿಸಿದ್ದು, ಯಾರ ಸಂಪರ್ಕಕ್ಕೂ ಸಿಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದೆಲ್ಲದರ ಮಧ್ಯೆ ಇದೀಗ ನಟ್ಟು ಬೋಲ್ಟ್‌ನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬಿಗ್‌ಬಾಸ್‌ ಶೋ ಸ್ಥಗಿತದ ಹಿಂದೆ ರಾಜ್ಯದ ಪವರ್‌ಫುಲ್‌ ಮಿನಿಸ್ಟರ್‌ ಒಬ್ಬರ ಸೇಡು ಇದೆಯಾ ಅನ್ನೋ ಪ್ರಶ್ನೆ ಎದ್ದಿದೆ.

ಬಿಗ್‌ಬಾಸ್‌ ಕನ್ನಡ ಶೋ ಸ್ಥಗಿತದ ವಿಚಾರ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.. ನಟ ಕಿಚ್ಚ ಸುದೀಪ್‌ ನಿರೂಪಣೆ ಮಾಡ್ತಿದ್ದ ಬಿಗ್‌ಬಾಸ್‌ ಶೋಗೆ ನಟ್‌ ಬೋಲ್ಟ್‌ ಜಡಿಯಲಾಗಿದೆ.. ಇದ್ರ ಹಿಂದೆ ರಾಜ್ಯದ ಪವರ್‌ಫುಲ್‌ ಮಿನಿಸ್ಟರ್‌ ಒಬ್ಬರ ಕೈವಾಡ ಇದೆ ಅಂತಾ ಜೆಡಿಎಸ್‌ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದೆ. ಅದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತಾಡಿರುವ ವಿಡಿಯೋ ಹಾಕಿದ್ದು, ಬಿಗ್‌ಬಾಸ್‌ ಶೋ ಬಂದ್‌ ಮಾಡಿ ಸೇಡು ತೀರಿಸಿಕೊಂಡ ನಟ್‌ ಬೋಲ್ಟ್‌ ಮಿನಿಸ್ಟರ್‌ ಅಂತಾ ಆರೋಪಿಸಿದೆ. ಜೊತೆಗೆ ಡಿಕೆಶಿ ಫೇಸ್‌ಬುಕ್‌ ಖಾತೆಗೂ ಟ್ಯಾಗ್‌ ಮಾಡಿದೆ. ಸದ್ಯ ಈ ವಿಚಾರ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಟ್‌ ಬೋಲ್ಟ್‌ ಮಿನಿಸ್ಟರ್‌ ಅಂತಾ ಜೆಡಿಎಸ್‌ ಎಕ್ಸ್‌ನಲ್ಲಿ ಪೋಸ್ಟ್‌ ಹಾಕೋಕು ಒಂದು ಕಾರಣವಿದೆ. ಈ ಹಿಂದೆ ನಡೆದ ಫಿಲಂ ಫೆಸ್ಟಿವಲ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಚಿತ್ರರಂಗದ ಕಲಾವಿದರ ವಿರುದ್ಧ ಗರಂ ಆಗಿದ್ದರು. ತಮ್ಮದೇ ಫೆಸ್ಟಿವಲ್‌ಗೆ ಸೆಲೆಬ್ರಿಟಿಗಳು ಯಾರೂ ಬಂದಿಲ್ವಲ್ಲಾ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ, ಯಾರ್ಯಾರ ನಟ್‌ ಬೋಲ್ಟ್‌ ಹೇಗೆ‌ ಮತ್ತು ಎಲ್ಲಿ ಟೈಟ್ ಮಾಡಬೇಕು ಅಂತಾ ಗೊತ್ತು ಅಂತಾ ಬಹಿರಂಗವಾಗಿಯೇ ಎಚ್ಚರಿಕೆ ಕೊಟ್ಟಿದ್ದರು. ಆ ಸಂದರ್ಭದಲ್ಲಿ ಅವರ ಹೇಳಿಕೆ ವಿಚಾರವಾಗಿ ಪರ ವಿರೋಧ ಚರ್ಚೆಗಳೂ ನಡೆದಿದ್ದವು. ನಟ ಕಿಚ್ಚ ಸುದೀಪ್‌ ಕೂಡ ಡಿಕೆಶಿ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದರು. ಇದೀಗ ಶೋ ಶುರುವಾದ ಹನ್ನೊಂದು ದಿನಕ್ಕೆ ಬಾಗಿಲು ಮುಚ್ಚಿದೆ. ಪರಿಸರ ಮಾಲಿನ್ಯ ಆರೋಪದ ಕಾರಣ ನೀಡಿ ಜಿಲ್ಲಾಡಳಿತ ಜಾಲಿವುಡ್‌ ಸ್ಟುಡಿಯೋವನ್ನ ಸೀಜ್‌ ಮಾಡಿದೆ. ಇದೆಲ್ಲವೂ ಈಗ ನಟ್‌ ಬೋಲ್ಟ್‌ ವಿಚಾರದ ಸುತ್ತ ಗಿರಕಿ ಹೊಡೆಯುತ್ತಿವೆ. ಇದೇ ವಿಚಾರವಾಗಿ ಸ್ಪಷ್ಟನೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಎಚ್‌ಡಿಕೆಗೆ ನನ್ನ ಬಗ್ಗೆ ಮಾತಾಡದಿದ್ರೆ ನಿದ್ದೆನೆ ಬರಲ್ಲ ಅಂತಾ ಕುಟುಕಿದ್ದಾರೆ.

Read Also : ಥೈರಾಯ್ಡ್‌ ಸಮಸ್ಯೆ ಇರುವವರು ಯಾವ ರೀತಿ ಪಥ್ಯ ಮಾಡಬೇಕು ಗೊತ್ತಾ?

Share.
Leave A Reply