ಬೆಂಗಳೂರು… ಕೆಲವ್ರಿಗೆ ಸ್ವರ್ಗ ಆದ್ರೆ ಕೆಲವ್ರಿಗೆ ಇದೇ ನರಕ… ಇದು ಹಲವರ ಕನಸಾದ್ರೆ ಇನ್ನೂ ಹಲವರಿಗೆ ದುಃಸ್ವಪ್ನ.. ಇದಿಕ್ಕೆ ಅವರವರದ್ದೇ ಕಾರಣಗಳಿರುತ್ತೆ. ಇಲ್ಲಿದ್ದು ಬದುಕುವವರಿಗಿಂತ ಇಲ್ಲಿಗೆ ಬಂದು ಬದುಕು ಕಟ್ಟಿಕೊಳ್ಳುವವರೇ ಹೆಚ್ಚು.. ಇದೇ ರೀತಿ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ಯುವ ದಂಪತಿ ಹಲವು ವರ್ಷಗಳಿಂದ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು.
ಇವ್ರು ತಮ್ಮದೇ ಬ್ಯುಸಿನೆಸ್ಅನ್ನ ಕೂಡ ಹೊಂದಿದ್ದಾರೆ. ಇಷ್ಟು ದಿವಸ ಬೆಂಗಳೂರಿನಲ್ಲೇ ನೆಲೆಯೂರಿದ್ದ ಈ ದಂಪತಿ ಇದೀಗ ಬೆಂಗಳೂರು ತೊರೆಯುವ ನಿರ್ಧಾರ ಮಾಡಿದ್ದಾರೆ. ತಮ್ಮ ಈ ನಿರ್ಧಾರದ ಉದ್ದೇಶವನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.





ನಾವು ಫೆಬ್ರವರಿಯಲ್ಲಿ, ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವನ್ನು ಪರಿಶೀಲಿಸಿದಾಗ ಅದು 297 ಕ್ಕೆ ತಲುಪಿರುವುದನ್ನು ನೋಡಿ ಶಾಕ್ ಆದೆವು. ನಮ್ಮ ಬೆಂಗಳೂರು ಅದ್ಭುತ. ಬ್ಯುಸಿನೆಸ್ ಪ್ರಾರಂಭಿಸಲು ಅತ್ಯುತ್ತಮ ಸ್ಥಳವಾಗಿದೆ. ಆದರೆ ನಾವು ಸಾಧ್ಯವಾದಷ್ಟು ಬೇಗ ಬೇರೆ ಆಯ್ಕೆಯನ್ನು ಮಾಡಬೇಕಾಗಿತ್ತು.
ಈ ನಗರವು ನಮ್ಮನ್ನು ಮುಳುಗಿಸುವ ಮೊದಲು, ನಾವು ಬೆಂಗಳೂರು ತೊರೆದಿದ್ದೇವೆ ಅಂತಾ ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ. ಬೆಂಗಳೂರಿನ ಗಾಳಿಯ ಗುಣಮಟ್ಟ ಹದಗೆಡುತ್ತಿರುವುದೇ ತಾವು ಬೆಂಗಳೂರನ್ನು ತ್ಯಜಿಸಲು ಮುಖ್ಯ ಕಾರಣ ಎಂದಿದ್ದಾರೆ. ಬೆಂಗಳೂರಿನಲ್ಲಿ ತಾಜಾ ಗಾಳಿ ಮತ್ತು ಉತ್ತಮ ಹವಾಮಾನವಿದೆ ಎಂದು ಹೆಚ್ಚಿನವರು ಹೇಳುತ್ತಾರೆ.
ಆದರೆ, ನಾವು ಇಲ್ಲಿಗೆ ಬಂದ ಬಳಿಕ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದೆವು. ಬೆಂಗಳೂರಿನ ಗಾಳಿಯ ಗುಣಮಟ್ಟವು ತಮ್ಮ ಸಮಸ್ಯೆಗಳಿಗೆ ಮೂಲ ಕಾರಣ ಎಂದು ನಮಗೆ ಅರಿವಿಗೆ ಬಂದಿತು. ಹೀಗಾಗಿ ಈ ಬೆಂಗಳೂರನ್ನು ತ್ಯಜಿಸಲು ನಿರ್ಧರಿಸಿದೆವು ಎಂದಿದ್ದಾರೆ.
ಈ ವಿಡಿಯೋ ಸುಮಾರು ಹತ್ತು ಲಕ್ಷ ವ್ಯೂವ್ಸ್ ಪಡೆದಿದ್ದು ನೆಟ್ಟಿಗರು ಬಗೆ ಬಗೆಯಾಗಿ ಕಮೆಂಟ್ ಮಾಡ್ತಿದ್ದಾರೆ. ಕೆಲವ್ರು ಒಳ್ಳೆ ನಿರ್ಧಾರ ಅಂತಿದ್ರೆ ಇನ್ನೂ ಕೆಲವ್ರು ನಿಮ್ಮಂತವರು ಬಂದೇ ನಮ್ಮ ಬೆಂಗಳೂರಿನ ಪರಿಸ್ಥಿತಿ ಹೀಗಾಗಿದೆ ಅಂತಿದ್ದಾರೆ.