ವಸತಿ ಇಲಾಖೆಯಲ್ಲಿ ಹಣ ಕೊಟ್ಟವರಿಗೆ ಮನೆ’ ಎಂದು ಶಾಸಕ ಬಿ.ಆರ್.ಪಾಟೀಲ್ ಮಾತನಾಡಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ಹಲವು ಇಲಾಖೆಯಲ್ಲಿ ಅನುದಾನ ಬಿಡುಗಡೆ ಆಗಲು ಶಾಸಕರು ಹಣ ಕೊಡಬೇಕು. ಕೆಲವರು ನಿಮ್ಮದೊಂದು ಲೆಟರ್ ಕೊಡಿ ಸರ್. ದುಡ್ಡು ತಗೊಂಡು ಬರುತ್ತೇವೆ ಎನ್ನುತ್ತಿದ್ದಾರೆ. ಹೆಸರಿಗೆ ಶಾಸಕರ ಲೆಟರ್, ಮಧ್ಯವರ್ತಿಗಳು ದುಡ್ಡು ಕೊಟ್ಟು ಹಣ ತರುತ್ತಾರೆ. ಬಹಳ ಮಂದಿ ನನ್ನ ಬಳಿಯೂ ಮನೆ ತರಲು ಅಷ್ಟು ಕೊಟ್ಟೆವು ಎಂದು ಚರ್ಚೆ ಮಾಡಿದ್ದಾರೆ. ಎಲ್ಲ ಇಲಾಖೆಯಲ್ಲೂ ಇದು ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಡಿಕೆಶಿ ವಿರುದ್ಧ ಹೆಚ್ಡಿಕೆ ವಾಗ್ದಾಳಿ
2028ಕ್ಕೆ ಮುಖ್ಯಮಂತ್ರಿ ಆಗುವ ಬಗ್ಗೆ ಡಿ.ಕೆ ಶಿವಕುಮಾರ್ ಕನಸು ಕಾಣಬೇಕಷ್ಟೆ. ಡಿಕೆಶಿಗೆ ಕಾಂಗ್ರೆಸ್ನಲ್ಲಿ ಯಾರು ಬಿಟ್ಟು ಕೊಡುತ್ತಾರೆ. ನಮ್ಮ ಕೈಯಲ್ಲಿ ಏನು ಇಲ್ಲ, ಎಲ್ಲ ಭಗವಂತನ ಕೈಯಲ್ಲಿ ಇರೋದು ಎನ್ನುವ ಮೂಲಕ, 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಡಿ.ಕೆ.ಶಿವಕುಮಾರ್ ಸಿಎಂ ಆಗುವ ವಿಚಾರವಾಗಿ ಮಾರ್ಮಿಕವಾಗಿ ನುಡಿದರು.
ಟನಲ್ ರೋಡ್ ನಿರ್ಮಾಣ ವಿಚಾರ
ಬೆಂಗಳೂರಿನಲ್ಲಿ ಟನಲ್ ರೋಡ್ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸಿ, ‘ಬೆಂಗಳೂರು ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ರೋಡ್ ಟನಲ್ ಮಾಡಲಿ. ನೋಡೋಣಾ ಯಾವ ಟನಲ್ ಮಾಡುತ್ತಾರೆ. ಅವರ ಮಾತುಗಳು ಯಾವುವು ಆಗಲ್ಲ. ಈಗ 2027ಕ್ಕೆ ಎತ್ತಿನ ಹೊಳೆ ನೀರನ್ನು ಕೋಲಾರಕ್ಕೆ ತರುತ್ತೇವೆ ಎಂದಿದ್ದಾರೆ.
ಇನ್ನೂ ಕಾಡುಮನೆ ಎಸ್ಟೇಟ್ನಿಂದ ಮುಂದಕ್ಕೆ ಎತ್ತಿನಹೊಳೆ ಬಂದಿಲ್ಲ ಎಂದು ಟೀಕಿಸಿದರು. ಈಗಾಗಲೇ 14-15 ಸಾವಿರ ಕೋಟಿ ರೂಪಾಯಿ ಲೂಟಿ ಆಗಿದೆ. 2013ರಲ್ಲಿ ಇದೇ ಸರಕಾರ ಗುದ್ದಲಿ ಪೂಜೆ ಮಾಡಿತ್ತು. ಎರಡೇ ವರ್ಷದಲ್ಲಿ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಕೊಡುತ್ತೇವೆ ಎಂದಿದ್ದರು. 2013 ರಿಂದ 2025ಕ್ಕೆ ಬಂದರೂ ಇನ್ನೂ ನೀರಿಲ್ಲ. ಎತ್ತಿನಹೊಳೆ ನೀರು ಕೊಡುತ್ತೇವೆ ಅಂತ ಬೆಂಗಳೂರು ಕೊಳಚೆ ನೀರು ಬಿಟ್ಟಿದ್ದಾರೆ. ಈಗ ಅವರು ಬೆಳೆಯೋ ತರಕಾರಿನೂ ಯಾರು ಕೊಳ್ಳಬಾರದು ಹಾಗೆ ಮಾಡಿದ್ದಾರೆ ಎಂದು ಕಿಡಿಕಾರಿದರು.