ಸಿಎಂ, ಗೃಹಸಚಿವರು ಎಲ್ಲರೂ ಶಾಕ್ನಲ್ಲಿದ್ದಾರೆ. ಈ ಘಟನೆಗೆ ನಾನು ಯಾರನ್ನೂ ದೂಷಿಸಲ್ಲ. 11 ಕುಟುಂಬ ಅವರ ಮಕ್ಕಳನ್ನು ಕಳೆದುಕೊಂಡಿದ್ದಾರೆ. ನನ್ನ ಕುಟುಂಬದವರನ್ನೇ ಕಳೆದುಕೊಂಡಷ್ಟು ನೋವಾಗ್ತಿದೆ. ಹೆಣದ ಮೇಲೆ ನಾನು ರಾಜಕೀಯ ಮಾಡಲ್ಲ ಅಂತ ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ(chinnaswamy stadium stampede) ಸಂಬಂಧಿಸಿದಂತೆ, ಡಿಸಿಎಂ ಡಿ.ಕೆ. ಶಿವಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಮೃತರ ಕುಟುಂಬದವರ ನೋವನ್ನು ನೆನೆದು ಡಿ.ಕೆ. ಶಿವಕುಮಾರ್ ತೀವ್ರ ದುಃಖಿತರಾಗಿದ್ದಾರೆ.

ಯಾರು ನಿರೀಕ್ಷೆ ಮಾಡಿರದ ದುರ್ಘಟನೆ ನಡೆದು ಹೋಗಿದೆ. ಇಲ್ಲಿ ಯಾರದ್ದು ತಪ್ಪು ಅಂತ ಹುಡುಕುವುದು ಇರಲಿ, 11 ಅಮಾಯಕರ ಪ್ರಾಣಕ್ಕೆ ಯಾರು ಹೊಣೆ ಅನ್ನೋದೇ ಈಗಿನ ಪ್ರಶ್ನೆ. IPL ಟ್ರೋಫಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗೆದ್ದು ಸಂಭ್ರಮಿಸುತ್ತಿದ್ದಂತೆಯೇ, ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಸನ್ಮಾನದ ಸಂಭ್ರಮದಲ್ಲಿ ಸಾವಿನ ಸೂತಕವಾಗಿ ಮಾರ್ಪಾಟ್ಟಿತ್ತು.
ಬುಧವಾರ ಸಂಜೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy Stadium) ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಅಮೂಲ್ಯ ಜೀವಗಳು ಬಲಿಯಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆರ್ಸಿಬಿ ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಆಚರಿಸಲು ನೆರೆದಿದ್ದ ಲಕ್ಷಾಂತರ ಅಭಿಮಾನಿಗಳ ಸಂತೋಷ ಕ್ಷಣಾರ್ಧದಲ್ಲಿ ದುರಂತ ವಾಗಿ ಮಾರ್ಪಟ್ಟಿತು.
‘ನನಗೆ ಹೊಟ್ಟೆ ಉರಿಯುತ್ತಿದೆ’
“ನನಗೆ ಹೊಟ್ಟೆ ಉರಿಯುತ್ತಿದೆ. ಆ ಮಕ್ಕಳ ತಾಯಿ ಮಾತನಾಡೋದನ್ನ ಸಹಿಸಿಕೊಳ್ಳೋಕೆ ಆಗ್ತಾ ಇಲ್ಲ. ಇದನ್ನು ಯಾವ ಕುಟುಂಬವೂ ತಡೆದುಕೊಳ್ಳಲ್ಲ,” ಎಂದು ಕಣ್ಣೀರು ಹಾಕಿದರು.
ಘಟನೆ ಕುರಿತು ಮಾತನಾಡಿದ ಡಿಕೆಶಿ, “ಪೊಲೀಸ್ ಇಲಾಖೆ ಕೂಡಲೇ ಜನರನ್ನು ತಡೆಯಿರಿ ಅಂತ ಹೇಳಿತ್ತು. ನಾನೂ ಕೂಡಲೇ ಮ್ಯಾನೇಜ್ಮೆಂಟ್ಗೆ ಹೇಳಿದೆ. ಆದರೂ, ಅಲ್ಲಿ ಹೋಗೋದಕ್ಕೂ ಕೂಡ ಜಾಗ ಇರಲಿಲ್ಲ. ಕೂಡಲೇ ಅವರನ್ನ ನಾನು ನನ್ನ ಕಾರ್ನಲ್ಲಿ ಕೂರಿಸಿಕೊಂಡು ಹೋದೆ,” ಎಂದು ತಿಳಿಸಿದರು.
‘ಡರ್ಟಿ ಪಾಲಿಟಿಕ್ಸ್ ನಾನು ಮಾತಾಡಲ್ಲ’
ಕುಮಾರಸ್ವಾಮಿ ಟೀಕೆಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಕುಮಾರಸ್ವಾಮಿ ಟೀಕೆ ಮಾಡುತ್ತಲೇ ಇರಲಿ. ಡರ್ಟಿ ಪಾಲಿಟಿಕ್ಸ್ ನಾನು ಮಾತಾಡಲ್ಲ. ಹೌದು, ಯಾರೇ ತಪ್ಪು ಮಾಡಿದ್ದರೂ ಕೂಡ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಇದು ನಮ್ಮ ಮನೆಯ ನೋವಾಗಿದೆ. ಇದು ಕರ್ನಾಟಕದ ಇಮೇಜ್, ಕುಟುಂಬದ ನೋವು,” ಎಂದು ಹೇಳಿದರು.