ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ (Bengaluru Stampede) ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಸಂಬಂಧ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಆರ್ ಅಶೋಕ್, ಕಪ್ಪು ನಮ್ಮದು ಆದರೆ ತಪ್ಪು ಯಾರ ದ್ದೆಂದು ಜನರು ಕೇಳ್ತಿದ್ದಾರೆ. ಕಾಲ್ತುಳಿತ ಸರ್ಕಾರದ ಪ್ರಾಯೋಜಿತ ಅಮಾಯಕರ ಹತ್ಯಾಕಾಂಡ. ಸರ್ಕಾರ ಮತ್ತೊಬ್ಬರ ಯಶಸ್ಸನ್ನು ದುರ್ಲಾಭ, ಕ್ರೆಡಿಟ್ ಪಡೆಯೋಕೆ ಮುಂದಾಗಿದೆ.
ಕೂಗಳತೆ ಅಂತರದಲ್ಲೇ ಎರಡೆರಡು ಪ್ರೋಗ್ರಾಂಗಳು ಬೇಕಿತ್ತಾ? ಈ ಕಾರ್ಯಕ್ರಮದ ಬಗ್ಗೆ ಗೊತ್ತೇ ಇಲ್ಲ ಎಂದಿದ್ದಾರೆ ಐಪಿಎಲ್ ಚೇರ್ ಮ್ಯಾನ್. ಕೆಎಸ್ಸಿಎ ಹೇಳಿದೆ ಸರ್ಕಾರ ಕೇಳಿದೆ ಗ್ರೌಂಡ್ ಕೊಟ್ಟಿದ್ದೇನೆ ಅಂತಾ, ಇದರಲ್ಲಿ ಕೆಎಸ್ಸಿಎ ಯವರದ್ದು ತಪ್ಪಿಲ್ಲ. ಆರ್ಸಿಬಿ ಯವರು ಕೇಳಿದ್ದು, ಎರಡು ಕಿಲೋ ಮೀಟರ್ ಮೆರವಣಿಗೆಗೆ ಆದರೆ ಅವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಬಂದವರು ಯಾರು.? ಎಂದು ಪ್ರಶ್ನಿಸಿದರು.
ಮ್ಯಾಚ್ ಮುಗಿದ ಮೇಲೆ ನಮ್ಮ ಪೊಲೀಸರು ಬೆಳಿಗ್ಗೆ 3 ಗಂಟೆ ವರೆಗೂ ಕೆಲಸ ಮಾಡಿದ್ದಾರೆ. ಪಾಪ ನಮ್ಮ ಪೊಲೀಸರಿಗೆ ರಾತ್ರಿ ಎಲ್ಲಾ ನಿದ್ದೇನೇ ಇರಲಿಲ್ಲ. ಆದರೆ ನಮ್ಮ ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ. ಅದೇ ಪೊಲೀಸರನ್ನು ನಿಯೋಜನೆ ಮಾಡಿದ್ರೆ ಅವರು ಹೇಗೆ ಕೆಲಸ ಮಾಡೋಕೆ ಆಗುತ್ತದೆ? ಪೊಲೀಸರು ಕಾರ್ಯಕ್ರಮಕ್ಕೆ ನಿರಾಕರಣೆ ಮಾಡಿದ್ದಾರೆ. ಆದರೆ ಬಲತ್ಕಾರದಿಂದ ಸರ್ಕಾರ ನಾನಾ ನೀನೇ ಎಂದು ಪ್ರಶ್ನೆ ಕೇಳಿದೆ ಎಂದು ಕಿಡಿಕಾರಿದರು.
ವಿಧಾನಸೌಧದ ಮುಂದೆ ಡ್ರೋನ್ ಎಲ್ಲಾ ಬಳಕೆ ಮಾಡಿದ್ದಾರೆ, ಹೈಕೋರ್ಟ್ ನಿರ್ಬಂಧಿತ ಸ್ಥಳ, ಎಂತಹ ಮುಟ್ಟಾಳ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ ಅಶೋಕ್, ಇವತ್ತು ಕೋರ್ಟ್ ಕೂಡ ಸುಮೊಟೋ ಕೇಸ್ ತಗೊಂಡಿದೆ. ಇಷ್ಟಾದರೂ ಕೂಡ ಮುಖ್ಯಮಂತ್ರಿಗಳು ಇಷ್ಟು ಜನ ಸೇರ್ತಾರೆ ಎಂದು ನಾವು ಅಂದಾಜಿಸಿಲ್ಲ ಅಂದಿದ್ದಾರೆ. ಎಲ್ಲೆಲ್ಲಿ ಎಷ್ಟೆಷ್ಟು ಜನರು ಸೇರ್ತಾರೆ ಅಂತಾ ಸರ್ಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲವೇ? ಸುದ್ದಿಗೋಷ್ಟಿ ಮಾಡಿದ್ದು ಸಂತಾಪಕ್ಕಲ್ಲ, ತಪ್ಪು ನಮ್ಮದಲ್ಲ ಅಂತಾ ಹೇಳೋಕೆ ಎಂದು ಕಿಡಿಕಾರಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು 12 ಗೇಟ್ಗಳಿದ್ದವು. ಆದರೆ ಓಪನ್ ಮಾಡಿದ್ದು ಎರಡು ಗೇಟ್ಗಳನ್ನು ಮಾತ್ರ ಎಂದ ಆರ್ ಅಶೋಕ್, ಜನರನ್ನು ಒಳಗೆ ಬಿಡಬೇಕಾ ಹೇಗೇ ಅಂತಾ ಪೊಲೀಸರಿಗೆ ಗೊತ್ತೇ ಇಲ್ಲ. ಡಿಕೆ ಶಿವಕುಮಾರ್ ಅವ್ರು ಸ್ವತಃ ಬಾವುಟ ಹಿಡಿದಿದ್ದಾರೆ.
ಮಿಸ್ಟರ್ ಡಿಕೆ ಶಿವಕುಮಾರ್, ಕಾರಿಂದ ಹೊರಗೆ ಮುಖ ಹಾಕೋಕೆ ನಿಮಗೆ ಅನುಮತಿ ಕೊಟ್ಟವರು ಯಾರ್ರೀ? ಎಂದು ಕಿಡಿಕಾರಿದರಲ್ಲದೇ, ನಿಮ್ಮ ಕೈ ಕೆಳಗೆ ಕೈ ಕಟ್ಟಿ ನಿಲ್ಲುವ ಒಬ್ಬ ಜಿಲ್ಲಾಧಿಕಾರಿಗೆ ತನಿಖೆಗೆ ಕೊಟ್ಟಿದ್ದೀರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟು ಇಷ್ಟು ಜನರ ಬರ್ತಾರೆ ಅಂದ್ರಲ್ಲ, ಅಲ್ಲಿ ಡಾಕ್ಟರ್ಗಳು, ಆಂಬುಲೆನ್ಸ್ಗಳನ್ನು ಎಷ್ಟು ನಿಲ್ಲಿಸಿದ್ರಿ? ಎಂದು ಪ್ರಶ್ನಿಸಿದ ಆರ್ ಅಶೋಕ್, ಹೃದಯಸ್ಥಬ್ದ ಆದಾಗ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಲು ಡಾಕ್ಟರ್ ಇರಬೇಕಿತ್ತು. 3.45ಕ್ಕೆ ಪೂರ್ಣಚಂದ್ರ ಎಂಬುವರು ಸತ್ತೋದ್ರು, ಆದರೆ ನೀವು ಕಾರ್ಯಕ್ರಮ ಮಾಡಿದ್ದು ಎಷ್ಡೊತ್ತಿಗೆ..? 5 ಗಂಟೆಗೆ. ನೀವು ಕಾರ್ಯಕ್ರಮ ಮಾಡೋದ್ರೊಳಗೆ ಐವರು ಸಾವನ್ನಪ್ಪಿದ್ದರು.
ಇಡೀ ನಿಮ್ಮ ಪಟಾಲಮ್ ಕೊಹ್ಲಿ ಜೊತೆ ಫೋಟೋ ಶೂಟ್ನಲ್ಲೇ ಬ್ಯುಸಿ ಇದ್ದರು. ಸಿಎಂ, ಸಿಎಂ ಮೊಮ್ಮಗ, ಮಂತ್ರಿ ಮಕ್ಕಳು, ಅಧಿಕಾರಿಗಳು, ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ತಿದ್ರು. ಕೊಹ್ಲಿಯ ಬಟ್ಟೆ ಹರಿದಿಲ್ಲ, ಬಟ್ಟೆ ಒಂದನ್ನು ಬಿಟ್ಟಿದ್ದಾರೆ ಅವನದ್ದು ಎಂದು ಹೇಳಿದರು.
ಈ ಘಟನೆಯ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದ ಆರ್ ಅಶೋಕ್, ಇದಕ್ಕೆ ಒಂದು ಎಸ್ಐಟಿ ರಚನೆ ಆಗಿ, ರಿಪೋರ್ಟ್ ನ್ನು ಹೈಕೋರ್ಟ್ ಜಡ್ಜ್ ಗೆ ಕೊಡಬೇಕು. ಅವರಿಂದಲೇ ತನಿಖೆ ನಡೆಸಬೇಕು, ಈ ಸಾವಿಗೆ ನ್ಯಾಯ ಕೊಡಬೇಕು. ನಾವು ಸಾವಿನ ಮೇಲೆ ರಾಜಕಾರಣ ಮಾಡೋದಿಲ್ಲ ಎಂದು ಹೇಳಿದರು.