ನಿನ್ನೆ ನಡೆದ ಗುಜರಾತ್ನ ಅಹಮದಾಬಾದ್ ವಿಮಾನ ದುರಂತ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. 242 ಜನರ ಹೊತ್ತು ಅಹಮದಾಬಾದ್ನಿಂದ ಲಂಡನ್ ಸಾಗ್ತಿದ್ದ ವಿಮಾನಯಾನ ಬರೀ 30 ಸೆಕೆಂಡಿನಲ್ಲೇ ಯಮನಯಾನವಾಗಿ ಸಾವಿನ ಮನೆ ಸೇರಿದೆ. ಇದ್ರಲ್ಲಿದ್ದ 242 ಜನರ ಪೈಕಿ 241 ಜನರು ಒಟ್ಟಿಗೆ ಉಸಿರು ಚೆಲ್ಲಿದ್ದಾರೆ.. ಇವರ ಜೊತೆಗೆ ಪ್ರಯಾಣ ಬೆಳೆಸಿದ್ದ ಏಕೈಕ ವ್ಯಕ್ತಿ ಮಾತ್ರ ಅದೃಷ್ಟವಶಾತ್ ಬಚಾವ್ ಆಗಿದ್ದಾನೆ.
ಸದ್ಯ ವಿಮಾನ ದುರಂತದಲ್ಲಿ ಒಟ್ಟು 265 ಜನರು ಮೃತಪಟ್ಟಿದ್ದು, ಒಬ್ಬೊಬ್ಬರದ್ದು ಒಂದೊಂದು ಕಣ್ಣೀರಿನ ಕರುಣಾಜನಕ ಕಥೆಗಳು.. ವಿಧಿಯಾಟಕ್ಕೆ ವಿಮಾನ ಪ್ರಯಾಣಿಕರು ಬಲಿಯಾಗಿದ್ದು ಒಂದ್ಕಡೆಯಾದ್ರೆ, ಊಟಕ್ಕೆ ಕುಳಿತ ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆ ಲ್ಯಾಂಡ್ ಆದ ವಿಮಾನ ಬೆಂಕಿಯುಂಡೆಯಾಗಿ ಸಿಡಿದಿದೆ. ಘನಘೋರ ದುರಂತಕ್ಕೆ ಹಾಸ್ಟೆಲ್ ವಿದ್ಯಾರ್ಥಿಗಳು ಸಹ ದಾರುಣ ಸಾವನ್ನಪ್ಪಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.







ಇನ್ನು ಏರ್ ಇಂಡಿಯಾ ವಿಮಾನ ದುರಂತದಲ್ಲಿ (Air India Plane Crash) ನಾನು ನನ್ನ ಪ್ರೀತಿಯನ್ನು ಕಳೆದುಕೊಂಡೆ ಎಂದು ಯುವಕನೊಬ್ಬ ಅಹಮದಾಬಾದ್ ಆಸ್ಪತ್ರೆಯ ಮುಂದೆ ಕಣ್ಣೀರಿಟ್ಟಿದ್ದಾನೆ. ಆಸ್ಪತ್ರೆಯ ವೇಯ್ಟಿಂಗ್ ರೂಮ್ನಲ್ಲಿ ಯುವಕ ಒಬ್ಬನೇ ಕುಳಿತು ಕಣ್ಣೀರು ಹಾಕುತ್ತಿದ್ದು, ತನ್ನ ಪ್ರೀತಿಯ ಜೊತೆ ಕಳೆದ ನೆನಪುಗಳನ್ನು ಮೆಲುಕು ಹಾಕ್ತಾ, ಬಿಕ್ಕಿ ಅಳುತ್ತಿದ್ದ. ಅಲ್ಲೇ ಇದ್ದ ಕೆಲವರು, ಆತನಿಗೆ ಯಾರಿಗಾಗಿ ಕಾಯುತ್ತಿರುವೆ? ಯಾರು ಮೃತಪಟ್ಟಿದ್ದಾರೆ ಎಂದು ಕೇಳಿದ್ದಾರೆ. ಈ ವೇಳೆ ಯುವಕ ಉತ್ತರಿಸಿದ್ದು ಒಂದೇ ಒಂದು ಪದ `ನನ್ನ ಪ್ರೀತಿ’ ಎಂದು ಮತ್ತೆ ಬಿಕ್ಕಳಿಸಿ ಅತ್ತಿದ್ದಾನೆ.

ವಿಮಾನ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಮುಂಬೈನಿಂದ ಯುವಕ ಬಂದಿದ್ದ. ಆತ ಆಸ್ಪತ್ರೆಯ ಮುಂದೆ ಕಣ್ಣೀರು ಹಾಕುತ್ತ ಪ್ರೇಯಸಿಯ ಮೃತದೇಹಕ್ಕಾಗಿ ಕಾಯುತ್ತಿದ್ದಾನೆ. ಲಂಡನ್ಗೆ ಹೋಗಲು ಏರ್ ಇಂಡಿಯಾದಿಂದ ತೆರಳಿದ್ದ ಆಕೆ ಈಗ ಬಾರದ ಲೋಕಕ್ಕೆ ಅದೇ ವಿಮಾನದಲ್ಲಿ ಸುಟ್ಟ ಭಸ್ಮಳಾಗಿದ್ದಾಳೆ. ಬೆಂಕಿಯ ಉಂಡೆಯಲ್ಲಿ ಯುವಕನ ಪ್ರೇಯಸಿ ಬೆಂದು ಹೋಗಿದ್ದಾಳೆ. ಆದ್ರೆ ಅವಳಿಗಾಗಿ ವೇಯ್ಟಿಂಗ್ ರೂಂನಲ್ಲಿ ಯುವಕ ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ.
Read also : ಹೆಂಡತಿ-ಮುದ್ದಾದ ಮೂವರು ಮಕ್ಕಳೊಂದಿಗೆ ದುರಂತ ಅಂತ್ಯ ಕಂಡ ಸಾಫ್ಟ್ ವೇರ್ ಕುಟುಂಬ!
ಅಹಮದಾಬಾದ್ನಲ್ಲಿ ಅಪಘಾತಗೊಂಡ ಏರ್ ಇಂಡಿಯಾ ವಿಮಾನದಲ್ಲಿ 10 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಒಟ್ಟಾರೆ ಈ ವಿಮಾನ ದುರಂತದಲ್ಲಿ 265 ಮಂದಿ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ..