ಹುಬ್ಬಳ್ಳಿ, ಡಿ.14 : ಬಸವರಾಜ್ ಹೊರಟ್ಟಿ ಹಾಗೂ ನನ್ನ ನಡುವೆ ನಾಲ್ಕು ದಶಕಗಳ ಸ್ನೇಹವಿದೆ. ಆಡಂಬರವಿಲ್ಲದ ಸ್ನೇಹಜೀವಿಯಾಗಿರುವ ಅವರು ಶಿಕ್ಷಕರ ಕ್ಷೇತ್ರದಿಂದ ಎಂಟು ಬಾರಿ ಶಾಸಕರಾಗಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸದಸ್ಯರಾಗಿ 45 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶನಿವಾರ ಶ್ರೀ ಬಸವರಾಜ ಹೊರಟ್ಟಿ ಅಭಿನಂದನಾ ಸಮಿತಿ ವತಿಯಿಂದ ಹುಬ್ಬಳ್ಳಿ ನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಪಕ್ಷದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹೊರಟ್ಟಿಯವರು ಅಜಾತಶತ್ರು. ನೇರ ನುಡಿಯ ದಿಟ್ಟ ವ್ಯಕ್ತಿತ್ವದ ರಾಜಕಾರಣಿಯಾಗಿದ್ದಾರೆ. 1980 ರಲ್ಲಿ ವಿಧಾನಪರಿಷತ್ತಿನ ಶಾಸಕರಾಗಿದ್ದ ಇವರೊಂದಿನ ನನ್ನ ಸ್ನೇಹ ನಾಲ್ಕು ದಶಕಗಳದ್ದು. 1983ರಲ್ಲಿ ಶಾಸಕರಾದ ನಂತರ ಹೊರಟ್ಟಿಯವರೊಂದಿಗೆ ಸ್ನೇಹ ಬೆಳೆಯಿತು. ಹಳ್ಳಿಗಾಡಿನ ನಂಟಿರುವ ಇಬ್ಬರೂ ಸಾಮಾನ್ಯ ಕುಟುಂಬದಿಂದ ಬಂದವರು. ಅಧಿಕಾರ ಮತ್ತು ಹುದ್ದೆಯೊಂದಿಗೆ ವ್ಯಕ್ತಿತ್ವದ ನಂಟು ಹೊಂದುವ ವರ್ಗ ಒಂದಾದರೆ, ಅಧಿಕಾರದ ಹಿರಿಮೆಯನ್ನು ಕಾಯ್ದುಕೊಳ್ಳುವ ವರ್ಗವಿದ್ದು, ಹೊರಟ್ಟಿಯವರದು ಎರಡನೇ ವರ್ಗವಾಗಿದೆ. 45 ವರ್ಷಗಳ ರಾಜಕೀಯ ಬದುಕಿನಲ್ಲಿ ಅವರೆಂದಿಗೂ ಅಹಂಕಾರ ತೋರಿದವರಲ್ಲ. ನಾವು ಒಂದೇ ಪಕ್ಷದಲ್ಲಿದ್ದಾಗ ಜೆಡಿಯು ಮತ್ತು ಜೆಡಿಎಸ್ ಪಕ್ಷಗಳನ್ನು ಒಂದುಗೂಡಿಸಲು ಬಹುವಾಗಿ ಪ್ರಯತ್ನಿಸಿದರು, ಆದರೆ ಹಿರಿಯ ನಾಯಕರು ಒಪ್ಪದಿದ್ದ ಕಾರಣ, ಅವರ ಈ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ ಎಂದರು.
ಸಭಾಪತಿಗಳ ಕುರ್ಚಿಗೆ ಹೊರಟ್ಟಿ ನ್ಯಾಯ ಒದಗಿಸುತ್ತಾರೆ :
ನನಗೂ ಅವರಿಗೂ ಆತ್ಮೀಯತೆ ಇದ್ದರೂ ಸಭಾಪತಿ ಕುರ್ಚಿಯಲ್ಲಿ ಕುಳಿತಾಗ ಅದಕ್ಕೆ ನ್ಯಾಯ ಒದಗಿಸುತ್ತಾರೆ. ನನಗೆ ಸ್ನೇಹವಿದೆ ಎಂದು ಹೆಚ್ಚು ಉತ್ತೇಜನ ನೀಡುವುದಾಗಲಿ, ನನ್ನ ಪರವಾಗಿ ಮಾತನಾಡುವುದಾಗಲಿ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ, ನಮಗೆ ಬಹುಮತ ಕಡಿಮೆಯಿದ್ದು ಮುಂದಿನ ಚುನಾವಣೆಯಲ್ಲಿ ಬಹುಮತ ಬರಬಹುದು. ಅಲ್ಲಿಯವರೆಗೆ ಇವರೇ ಮುಂದುವರೆಯುತ್ತಾರೆ. ಸದನ ಉತ್ತಮವಾಗಿ ನಡೆಯುತ್ತಿದೆ. ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುವ ಕೆಲಸವನ್ನು ಅವರು ಯಾವತ್ತೂ ಮಾಡಿಲ್ಲ.
ಕಾಂಗ್ರೆಸ್ ಹೊರತುಪಡಿಸಿ, ಬೇರೆ ಯಾವುದೇ ಪಕ್ಷವನ್ನು ಪ್ರತಿನಿಧಿಸಿದರೆ, ಅವರ ವಿರುದ್ಧವೇ ಪ್ರಚಾರ ನಡೆಸುವುದು ಗ್ಯಾರಂಟಿ ಎಂದ ಅವರು, ಆದಾಗ್ಯೂ ಹೊರಟ್ಟಿಯವರು ಗೆಲ್ಲಲಿ ಎಂದು ವೈಯಕ್ತಿಕವಾಗಿ ಆಶೀಸುತ್ತೇನೆ. ಸರ್ಕಾರಕ್ಕೆ ವಿಧಾನಮಂಡಲಕ್ಕೆ ಅವರ ಮಾರ್ಗದರ್ಶನ ಮತ್ತಷ್ಟು ದೊರೆಯಲಿ. ಸತತ ಎಂಟು ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವುದು ವಿಶ್ವದಾಖಲೆಯಾಗಿದೆ. ಅವರ ವಿಜಯಪಥ ಸದಾ ಮುಂದುವರೆಯಲಿ ಎಂದು ಸಿಎಂ ಸಿದ್ದರಾಮಯ್ಯ ಹಾರೈಸಿದರು.
ಪ್ರತಿಯೊಬ್ಬರೂ ಅವರು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಬೇಕು :
ಅವರ ಹಳ್ಳಿಯಲ್ಲಿ ಒಂದು ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿದ್ದಾರೆ. ಯಾವುದೇ ಖಾಸಗಿ ಶಾಲೆಗಿಂತಲೂ ಅದು ಕಡಿಮೆ ಇಲ್ಲ. ಅವರು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರತಿಯೊಬ್ಬರೂ ಅವರು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಿದರೆ ಅದರಿಂದ ಹೆಚ್ಚು ಅನುಕೂಲವಾಗಲಿದೆ ಎಂದರು.
ನಿಷ್ಪಕ್ಷಪಾತವಾಗಿ ಸದನ ನಡೆಸುತ್ತಾರೆ :
ಬಸವರಾಜ ಹೊರಟ್ಟಿ ಅವರನ್ನು ಹೋರಾಟದ ಹೊರಟ್ಟಿ ಎಂದು ಕರೆಯುತ್ತಾರೆ. ಈಗಾಗಲೇ ದಾಖಲೆ ನಿರ್ಮಾಣ ಮಾಡಿದ್ದು ಮತ್ತೊಬ್ಬರು ಶಿಕ್ಷಕರ ಕ್ಷೇತ್ರದಿಂದ ಈ ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯ ಪರ ಪ್ರಚಾರಕ್ಕಾಗಿ ಒಮ್ಮೆ ಹೋಗಿದ್ದರೂ ನಮ್ಮ ಅಭ್ಯರ್ಥಿ ಗೆಲ್ಲಲಿಲ್ಲ. ನಮ್ಮ ಮಧ್ಯೆ ಸ್ನೇಹವಿದ್ದರೂ ಅವರನ್ನು ಸೋಲಿಸಲು ಹೋಗಿದ್ದೆ, ರಾಜಕಾರಣ ಬೇರೆ ಸ್ನೇಹ ಬೇರೆ. ಬಸವರಾಜ್ ಬೊಮ್ಮಾಯಿ ಹಾಗೂ ಅವರ ತಂದೆ ನನಗೆ ಬಹಳ ಆತ್ಮೀಯರು. ಆದರೆ ಅವರ ಮಗನನ್ನು ಚುನಾವಣೆಯಲ್ಲಿ ಸೋಲಿಸಬೇಕಾಯಿತು. ಸಭಾಪತಿಯಾಗಿ ನಿಷ್ಪಕ್ಷಪಾತವಾಗಿ ಹೊರಟ್ಟಿ ಸದನ ನಡೆಸುತ್ತಾರೆ. ಅಲ್ಲಿ ಕುಳಿತಾಗ ಕಾನೂನಿನ ಪ್ರಕಾರ ಸಭೆ ನಡೆಸುವ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಪರಿಷತ್ತಿನಲ್ಲಿರುವ ಮೂರೂ ಪಕ್ಷದವರೂ ಅವರನ್ನು ಗೌರವದಿಂದ ಕಾಣುತ್ತಾರೆ. ಕೆಲವೊಮ್ಮೆ ಏಕವಚನ ಬಳಸಿದರು ಯಾರೂ ಕೋಪಿಸಿಕೊಳ್ಳುವುದಿಲ್ಲ. ಅಷ್ಟರಮಟ್ಟಿನ ವ್ಯಕ್ತಿತ್ವ ಅವರದ್ದು. ಅವರ ಅನುಭವದ ಆಧಾರದ ಮೇಲೆ ಸದನಕ್ಕೆ ಮಾರ್ಗದರ್ಶನ ಮಾಡುತ್ತಾರೆ. ಸಂಸದೀಯಪಟು ಆಗಿರುವುದರಿಂದ ಯಾವುದಕ್ಕೆ ಎಷ್ಟು ಒತ್ತು ಕೊಡಬೇಕು, ಯಾವುದೇ ಪಕ್ಷದವರಾಗಲಿ ಬೆದರಿಸಿ ಸುಮ್ಮನೆ ಕೂಡಿಸುತ್ತಾರೆ. ಇವರಲ್ಲದೇ ಬೇರೆ ಯಾರೇ ಆಗಿದ್ದರೂ ಅದನ್ನು ಒಪ್ಪುತ್ತಿದ್ದುದ್ದು ಕಷ್ಟ ಎಂದರು.