Site icon BosstvKannada

ಡಿಕೆಶಿ ಡಿನ್ನರ್ ಪಾಲಿಟಿಕ್ಸ್ ನಲ್ಲಿ ಏನೇನು ಚರ್ಚೆ?

ಬೆಳಗಾವಿ: ಕಾಂಗ್ರೆಸ್ ನಲ್ಲಿ ಮತ್ತೆ ಬಣ ರಾಜಕಾರಣ ಜೋರಾಗಿದ್ದು, ಸಿಎಂ ಫೈಟ್ ಶುರುವಾದಂತಿದೆ. ಚಳಿಗಾಲದ ಅಧಿವೇಶನ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದು, ಈ ಮಧ್ಯೆ ಆಡಳಿತ ಪಕ್ಷದ(Karnataka Congress) ಬಣ ರಾಜಕಾರಣ ಜೋರಾಗಿ ನಡೆಯುತ್ತಿದೆ.

ಬುಧವಾರ ರಾತ್ರಿ ಸಿಎಂ ಸಿದ್ದರಾಮಯ್ಯ (CM Siddaramaiah) ಅಹಿಂದ ನಾಯಕರ ಜೊತೆ ಸಭೆ ನಡೆಸಿದ್ದರು. ಬುಧವಾರ ರಾತ್ರಿ ಮಾಜಿ ಶಾಸಕ ಫಿರೋಜ್ ಸೇಠ್ ನಿವಾಸದಲ್ಲಿ ನಡೆದ ಭೋಜನಕೂಟದಲ್ಲಿ ಸಿಎಂ ಭಾಗವಹಿಸಿದ್ದರು. ಇದರ ಬೆನ್ನಲ್ಲೇ ಗುರುವಾರ ರಾತ್ರಿ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಆಪ್ತರ ಸಭೆ ನಡೆಸಿದ್ದಾರೆ. ಆಪ್ತ ಗಣಿ ಉದ್ಯಮಿ ದೊಡ್ಡಣ್ಣವರ್ ಅವರ ಫಾರ್ಮ್‌ ಹೌಸ್‌ನಲ್ಲಿ ಆಪ್ತ ಸಚಿವರು, ಶಾಸಕರ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಸಭೆ ನಡೆಸಿದ್ದಾರೆ.

ಈ ಪಾರ್ಟಿಯನ್ನು ಡಿಕೆಶಿ ಸಹೋದರ ಡಿಕೆ ಸುರೇಶ್‌ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ. ಸಭೆಯಲ್ಲಿ 5ಕ್ಕೂ ಹೆಚ್ಚು ಸಚಿವರು, 40ಕ್ಕೂ ಅಧಿಕ ಶಾಸಕರು ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ, ಸಿಎಂ ಆಪ್ತ ವಲಯದ ಯಾವೊಬ್ಬ ಶಾಸಕ, ಸಚಿವರು ಭಾಗಿಯಾಗಿರಲಿಲ್ಲ ಎನ್ನಲಾಗಿದೆ.

ಎಂ.ಸಿ ಸುಧಾಕರ್, ಮಂಕಾಳ ವೈದ್ಯ, ಕೆ.ಎಚ್. ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್, ಡಿ.ಕೆ.ಸುರೇಶ್, ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ, ಶಾಸಕ ಬಾಬಾಸಾಹೇಬ್ ಪಾಟೀಲ್, ಶಿವರಾಂ ಹೆಬ್ಬಾರ್, ಸಿ.ಪಿ ಯೋಗೇಶ್ವರ್, ಶ್ರೀನಿವಾಸ್ ಮಾನೆ, ಎನ್‌ಎ ಹ್ಯಾರೀಸ್, ಇಕ್ಬಾಲ್ ಹುಸೇನ್, ಗಣೇಶ್ ಹುಕ್ಕೇರಿ, ಎಸ್ ಟಿ ಸೋಮಶೇಖರ್ ಸೇರಿದಂತೆ 40ಕ್ಕೂ ಅಧಿಕ ನಾಯಕರು ಭಾಗಿಯಾಗಿದ್ದರು.
ಸಿಎಂ ಸ್ಥಾನದ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಪದೇ ಪದೆ ಹೇಳಿಕೆ ನೀಡುತ್ತಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ, ಮುಂದಿನ ವಾರ ಡಿಕೆ ದೆಹಲಿಗೆ ಹೋಗುವ ಕುರಿತು ಕೂಡ ಚರ್ಚಿಸಲಾಗಿದೆ.

Exit mobile version