BosstvKannada

Vaikuntha Ekadashi:ಕಾಲ್ತುಳಿತಕ್ಕೆ 7 ಭಕ್ತರು ಬಲಿ.. ಟಿಟಿಡಿಯಲ್ಲಿ ನಿಜಕ್ಕೂ ಏನಾಯ್ತು..?

ಆಂಧ್ರಪ್ರದೇಶದ ತಿರುಪತಿಯಲ್ಲಿ(Tirupati, Andhra Pradesh) ದೊಡ್ಡ ದುರಂತವೇ ನಡೆದು ಹೋಗಿದೆ.. ತಿರುಮಲದ ವೈಕುಂಠ ದ್ವಾರ ಟೋಕನ್‌ ಪಡೆಯಲು ಯಾತ್ರಾರ್ಥಿಗಳು ಮುಗಿಬಿದ್ದಿದ್ದು, ಕಾಲ್ತುಳಿತ ಉಂಟಾಗಿ 7 ಜನರು ಮೃತಪಟ್ಟಿದ್ದಾರೆ.. ಐವರು ಮಹಿಳೆಯರು ಸೇರಿ ಒಟ್ಟು 7 ಜನರು ಕಾಲ್ತುಳಿತಕ್ಕೆ ಪ್ರಾಣ ಬಿಟ್ಟಿದ್ದಾರೆ.. ದುರಂತದಲ್ಲಿ ಬಳ್ಳಾರಿ ಮೂಲದ ಮಹಿಳೆ 50 ವರ್ಷದ ನಿರ್ಮಲ ಅನ್ನೋರು ಸಾವನ್ನಪ್ಪಿದ್ದಾರೆ.. ಇವರ ಜೊತೆಗೆ ವೈಜಾಗ್‌ನ ರಜನಿ, ವೈಜಾಗ್‌ನ ಲಾವಣ್ಯ, ವೈಜಾಗ್‌ನ ಶಾಂತಿ, ಸೇಲಂನ ಮಲ್ಲೀಕಾ ಹಾಗೂ ನರಸಿಪಟ್ಟಣದ ನಾಯ್ಡು ಬಾಬು ಅಂತಾ ಗುರುತಿಸಲಾಗಿದೆ. ಇನ್ನು, ಗಾಯಾಳುಗಳಿಗೆ ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ತಿಮ್ಮಪ್ಪನ ಸನ್ನಿಧಿಯಲ್ಲಿ ನಿಜಕ್ಕೂ ನಡೆದಿದ್ದೇನು..?

ಇಂದು ಬೆಳಗ್ಗೆ 5 ಗಂಟೆಯಿಂದ ಅಲಿಪಿರಿ, ಶ್ರೀನಿವಾಸಂ, ಸತ್ಯನಾರಾಯಣಪುರಂ, ಪದ್ಮಾವತಿಪುರಂ(Srinivasa, Satyanarayanapuram, Padmavati) ಸೇರಿ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್‌ಗಳ ಮೂಲಕ ವೈಕುಂಠ ದ್ವಾರ ದರ್ಶನ ಟೋಕನ್‌ಗಳನ್ನು ವಿತರಿಸಲು ಟಿಟಿಡಿ ಯೋಜಿಸಿತ್ತು. ಆದರೆ, ಟೋಕನ್‌ಗಳಿಗಾಗಿ ನಿನ್ನೆ ಸಂಜೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಟೋಕನ್‌ ಪಡೆಯಲು ಬಂದವರನ್ನು ರಸ್ತೆಗಳಲ್ಲಿ ತಿರುಗಾಡದಂತೆ ತಡೆಯಲು ಬೈರಾಗಿಪಟ್ಟೆಡ ಬಳಿ ಇರುವ ಪದ್ಮಾವತಿ ಪಾರ್ಕ್‌ನಲ್ಲಿ ಇರಿಸಲಾಗಿತ್ತು. ಈ ಮಧ್ಯೆ, ಟಿಕೆಟ್‌ ಕೌಂಟರ್‌ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಗೇಟ್‌ ತೆರೆಯಲಾಗಿತ್ತು.. ಇಷ್ಟೇ.. ಟೋಕನ್‌ ಕೊಡಲು ಗೇಟ್‌ ತೆರೆಯಲಾಗಿದೆ ಅಂತಾ ಭಾವಿಸಿದ ಭಕ್ತರು, ಒಮ್ಮೆಲೆ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿ ಕೆಲವರು ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ, ಚಿಕಿತ್ಸೆ ಫಲಿಸದೆ 7 ಮಂದಿ ಮೃತಪಟ್ಟಿದ್ದಾರೆ.

ವೈಕುಂಠ ಏಕಾದಶಿ(Vaikuntha Ekadashi).. 1.20 ಲಕ್ಷ ಟೋಕನ್‌.. ನೂಕುನುಗ್ಗಲು!

ಜನವರಿ 10 ರಂದು ವೈಕುಂಠ ಏಕಾದಶಿ ಇದೆ.. ಜನವರಿ 10, 11, 12ರಂದು ವೈಕುಂಠ ದ್ವಾರ ದರ್ಶನಕ್ಕೆ ಟಿಟಿಡಿ ವ್ಯವಸ್ಥೆ ಮಾಡಿದೆ. 3 ದಿನಗಳಿಗಾಗಿ ಒಟ್ಟು 1.20 ಲಕ್ಷ ಟೋಕನ್‌ಗಳನ್ನು ಇಂದಿನಿಂದ ವಿತರಿಸಲು ಟಿಟಿಡಿ ಯೋಜಿಸಿತ್ತು. ಈ 3 ದಿನದ ಬಳಿಕ ಸಾಮಾನ್ಯ ಟಿಕೆಟ್ ವಿತರಣಾ ಕೌಂಟರ್ ಆಗಿರುವ ಶ್ರೀನಿವಾಸಂ, ವಿಷ್ಣು ನಿವಾಸಂ, ಭೂದೇವಿ ಕಾಂಪ್ಲೆಕ್ಸ್‌ನಲ್ಲಿ ಮುಂದಿನ 7 ದಿನಕ್ಕೆ ಟೋಕನ್ ಕೊಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿನ್ನೆ ಮಧ್ಯಾಹ್ನದಿಂದಲೇ ಭಕ್ತರು ಭಾರೀ ಸಂಖ್ಯೆಯಲ್ಲಿ ಜಮಾವಣೆಯಾದ್ದರಿಂದ ದುರಂತ ಸಂಭವಿಸಿದೆ.

ಮೃತರ ಕುಟುಂಬಸ್ಥರಿಗೆ ಪರಿಹಾರ ಘೋಷಣೆ

ಇನ್ನು, ಘಟನೆಯಲ್ಲಿ ಮೃತಪಟ್ಟ ಭಕ್ತರ ಕುಟುಂಬಸ್ಥರಿಗೆ ಪರಿಹಾರ ಘೋಷಣೆ ಮಾಡಲಾಗಿದೆ… ಆಂಧ್ರ ಸರ್ಕಾರದ ಮುಜರಾಯಿ ಇಲಾಖೆ ಮೃತಪಟ್ಟ 7 ಜನರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ… ಮತ್ತೊಂದೆಡೆ, ಘಟನೆಯಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಇದ್ರ ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ..

ಇನ್ನು, ಭಕ್ತರನ್ನು ನಿರ್ವಹಣೆ ಮಾಡುವಲ್ಲಿ ಟಿಟಿಡಿ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದೆ ಅನ್ನೋ ಆರೋಪವೂ ಇದೆ.. ಆದ್ರೆ, ದೇವರ ಸನ್ನಿಧಿಯಲ್ಲೇ ಹೀಗೆ ಭಕ್ತರು ವಿಲ ವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದು ನಿಜಕ್ಕೂ ಘೋರ ದುರಂತವೇ ಸರಿ..

ಬ್ಯೂರೋ ರಿಪೋರ್ಟ್‌ ಬಾಸ್‌ ಟಿವಿ ಕನ್ನಡ.

Exit mobile version