ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪೇತೇನಹಳ್ಳಿ ಎಂಬಲ್ಲಿ ನಡೆದಿದೆ. ಬೊಲೆರೋ ಹಾಗೂ ಬಲ್ಕರ್ ವಾಹನಗಳ ಮಧ್ಯೆ ಈ ಅಪಘಾತ ಸಂಭವಿಸಿದೆ. ಬೊಲೆರೋ ಹಾಗೂ ಬಲ್ಕರ್ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಜಕ್ಕೇನೆಹಳ್ಳಿ ಮೂಲದ 25 ವರ್ಷದ ಅಶೋಕ್ ಸಾವನ್ನಪ್ಪಿದ್ದಾರೆ. ಅಲ್ಲದೇ, ಆಂಧ್ರದ ಸಂಜೀವರಾಯನಪಲ್ಲಿ ನಿವಾಸಿ ನಾಗರಾಜಪ್ಪ ಸಾವನ್ನಪ್ಪಿದ್ದಾರೆ.
ಬಲ್ಕರ್ ಲಾರಿಯು ಗೌರಿಬಿದನೂರು ಹಿಂದೂಪುರ ಕಡೆಯಿಂದ ಬೆಂಗಳೂರಿಗೆ ಬರುತಿತ್ತು ಎನ್ನಲಾಗಿದ್ದು, ಬೆಂಗಳೂರಿನಿಂದ ಗೌರಿಬಿದನೂರು ಕಡೆಗೆ ಬರುತಿದ್ದ ಬುಲೆರೊ ವಾಹನಕ್ಕೆ ಡಿಕ್ಕಿಯಾಗಿದೆ. ಸ್ಥಳಕ್ಕೆ ಮಂಚೆನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

