Site icon BosstvKannada

ಧರ್ಮಸ್ಥಳ ಪ್ರಕರಣಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌.. ಬುರುಡೆ ಕಥೆಗೆ ವಿದೇಶದಿಂದ ಫಂಡಿಂಗ್?

ಧರ್ಮಸ್ಥಳ ಕೇಸ್‌ ದಿನಕ್ಕೊಂದು ತಿರುವು ಪಡೆಯುತ್ತಿದೆ. ಊರು ತುಂಬ ಧರ್ಮಸ್ಥಳದ ಬಗ್ಗೆ ಬುರುಡೆ ಗ್ಯಾಂಗ್‌ ಕಥೆ ಮೇಲೆ ಕಥೆ ಕಟ್ಟಿತು. ಈಗ ಕಥೆಗಳ ಹಿಂದಿನ ಸೂತ್ರಧಾರಿಗಳ ನಿಜ ಸ್ವರೂಪ ರಾಜ್ಯದ ಮುಂದೆ ಸತ್ಯ ದರ್ಶನ ಆಗುತ್ತಿವೆ. ಹೌದು.. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಿಂದ ಹಣಕಾಸು ವ್ಯವಹಾರ ನಡೆದಿರುವ ಆರೋಪ ಇದೆ. ಸದ್ಯ ಈ ಸಂಬಂಧ ಫೆಮಾ ಮತ್ತು ಫೆರಾ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಇಡಿ ತನಿಖೆಗೆ ಎಂಟ್ರಿಯಾಗಿದೆ.

ಧರ್ಮಸ್ಥಳ ಕುರಿತು ಸಾಕಷ್ಟು ಅಪಪ್ರಚಾರ ಮಾಡಲಾಗಿದೆ. ಶವಗಳನ್ನು ಹೂತಿಡಲಾಗಿದೆ ಎನ್ನುವ ಸುದ್ದಿಗಳು ಕೂಡ ಹರಿದಾಡಿದ್ದವು. ಎಸ್​ಐಟಿ ಪರಿಶೀಲನೆ ಮಾಡಿದಾಗ ಒಂದೋ, ಎರಡೋ ಬುರುಡೆ, ಮೂಳೆಗಳು ಪತ್ತೆ ಆಗಿದ್ದವು. ಮಾಸ್ಕ್​ಮ್ಯಾನ್ ತೋರಿಸಿದ ಎಲ್ಲ ಕಡೆಯೂ ಮೂಳೆಗಳು ಏನು ಸಿಕ್ಕಿರಲಿಲ್ಲ. ಇದಾದ ಮೇಲೆ ತನಿಖೆ ಚುರುಕು ಪಡೆಯುತ್ತಿದ್ದಂತೆ ವಿದೇಶಗಳಿಂದ ಫಂಡಿಂಗ್ ಆಗಿರುವ ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ಫೆಮಾ ಮತ್ತು ಫೆರಾ ಆಕ್ಟ್ ಅಡಿಯಲ್ಲಿ ಇಡಿ ಕೇಸ್ ದಾಖಲಿಸಿಕೊಂಡಿದೆ.

ತೇಜಸ್ ಎ ಗೌಡ ಹಾಗೂ ಇನ್ನೊಬ್ಬರ ದೂರು ಆಧರಿಸಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಸಲ್ಲಿಕೆ ಆಗಿರುವ 2 ದೂರು ಆಧರಿಸಿ ಫೆಮಾ, ಫೆರಾ ಕಾಯ್ದೆಯಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಧರ್ಮಸ್ಥಳ ಪ್ರಕರಣವನ್ನ ಎಸ್​ಐಟಿ ತನಿಖೆ ಮಾಡುತ್ತಿದೆ. ಇದರ ನಡುವೆಯೇ ಈಗ ಧರ್ಮಸ್ಥಳ ಪ್ರಕರಣಕ್ಕೆ ಇಡಿ ಕೂಡ ಎಂಟ್ರಿಯಾಗಿದೆ.‌ ವಿದೇಶದ ಕುರುಡು ಕಾಂಚಾಣದ ಸದ್ದು ಕೇಳಿ ಬಂದಿದ್ದು ಹಣದ ವ್ಯವಹಾರದ ದಾಖಲೆಗಳ ಸಂಗ್ರಹಕ್ಕೆ ಮುಂದಾಗಿದೆ.

ಷಡ್ಯಂತ್ರಕ್ಕೆ ಕೆಲ ಎನ್​ಜಿಒಗಳಿಂದ ಫಂಡಿಂಗ್ ಆಗಿದೆಯಾ ಎಂದು ಒಡನಾಡಿ ಹಾಗೂ ಸಂವಾದ ಅಕೌಂಟ್​ಗಳನ್ನು ಇಡಿ ಜಾಲಾಡುತ್ತಿದೆ. ಈ ಬಗ್ಗೆ ಮಾಹಿತಿ ಕೋರಿ ಎಸ್​​ಬಿಐ ಸೇರಿ ಇತರೆ ಬ್ಯಾಂಕ್​ಗಳಿಗೆ ಪ್ಯಾನ್ ಹಾಗೂ ಅಕೌಂಟ್​ಗಳ ಕುರಿತು ಪತ್ರ ಬರೆಯಲಾಗಿದೆ. ಕಳೆದ 5 ವರ್ಷಗಳ ಟ್ರಾನ್ಸಾಕ್ಷನ್ ನೀಡುವಂತೆ ಮನವಿ ಮಾಡಲಾಗಿದೆ. ವಿದೇಶದಿಂದ ಹಣ ಬಂದಿರುವ ಕುರಿತು ಮಾಹಿತಿ ಹಾಗೂ ಅದಕ್ಕೆ ಸಂಬಂಧಿಸಿದ ಪ್ರತಿಗಳು, ವಿದೇಶದಿಂದ ಹಣ ಬಂದರೆ ಅದಕ್ಕೆ ಕಾರಣವೇನು ಎಂಬುದನ್ನು ತಿಳಿಸುವಂತೆ ಬ್ಯಾಂಕ್​ಗಳಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ.

ಈಗಾಗಲೇ ಹಲವು ಬ್ಯಾಂಕ್​​ಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಆದರೆ ಇನ್ನಷ್ಟು ಬ್ಯಾಂಕ್​ಗಳ ಉತ್ತರಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಎಲ್ಲ ಮಾಹಿತಿ ಸಂಗ್ರಹವಾದ ಮೇಲೆ ಮುಂದಿನ ಕ್ರಮವನ್ನು ಇಡಿ ಅಧಿಕಾರಿಗಳು ಕೈಗೊಳ್ಳಲಿದ್ದಾರೆ.

Read Also : ಧರ್ಮಸ್ಥಳ ವಿರುದ್ಧ ಅಪಪ್ರಚಾರ : ಯೂಟ್ಯೂಬರ್‌ ಸಮೀರ್‌ ನಾಪತ್ತೆ, ಪೊಲೀಸರ ಹುಡುಕಾಟ

Exit mobile version