Site icon BosstvKannada

ಹಳ್ಳಿಯಲ್ಲಿ ಇರೋಕೆ ಆಗಲ್ಲ, ನಾನು ಸಿಟಿಯಲ್ಲಿರಬೇಕು ಅಂತಾ ಜಗಳ..ಮುಂದೇನಾಯ್ತು?

ಕಲಬುರಗಿ: ನವವಿವಾಹಿತೆಯೊಬ್ಬರು ಮದುವೆಯಾದ ಎರಡೇ ತಿಂಗಳಲ್ಲಿ ನಾನು ಹಳ್ಳಿಯಲ್ಲಿ ಇರಲ್ಲ, ಸಿಟಿಯಲ್ಲಿ ಇರಬೇಕು ಅಂತಾ ಜಗಳ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಕಲಬುರಗಿ (Kalaburagi) ನಗರದ ಆಜಾದಪುರ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಅನಸೂಯಾ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಅನಸೂಯಾ ತಮ್ಮ ಅತ್ತೆ ಮಗ ಅವಿನಾಶ್ ನನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಅನಸೂಯಾ ಮೂವರು ಸಹೋದರಿಯರು ಬೆಂಗಳೂರು ಹಾಗೂ ಮುಂಬೈನಲ್ಲಿ ವಾಸಿಸುತ್ತಿದ್ದರು. ಹೀಗಾಗಿ ನಾನು ಸಿಟಿಯಲ್ಲಿರಬೇಕು ಎಂದು ಮನೆಯಲ್ಲಿ ಜಗಳವಾಡುತ್ತಿದ್ದರು ಎನ್ನಲಾಗಿದೆ.

ಸಹೋದರಿಯರು ಸಿಟಿಯಲ್ಲಿ ವಾಸಿಸಬೇಕು. ನಾನು ಮಾತ್ರ ಹಳ್ಳಿಯಲ್ಲಿ ಇರಬೇಕಾ ಎಂದು ಆಗಾಗ ತವರು ಮನೆಗೆ ಹೋಗಿ ಕೂಡ ನೋವು ತೋಡಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಪೋಷಕರು ಬುದ್ದಿಮಾತು ಹೇಳಿ ಕಳುಹಿಸಿದ್ದಾರೆ. ಆದರೆ, ಇದೇ ನೋವಿನಲ್ಲಿ ಅನಸೂಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮದುವೆಗೂ ಮುನ್ನ ಅನಸೂಯಾ ಸಹ ಬೆಂಗಳೂರಿನಲ್ಲಿ ಒಂದು ವರ್ಷ ಕೆಲಸ ಮಾಡಿಕೊಂಡು ಇಲ್ಲೇ ವಾಸವಿದ್ದರು. ಮದುವೆ ನಂತರ ಮತ್ತೆ ಕ್ಯಾಪಿಟಲ್ ಸಿಟಿಯಲ್ಲಿ ವಾಸ ಮಾಡಬೇಕು ಎಂಬ ಆಸೆ ಹೆಚ್ಚಾಗಿ ಅದೇ ಕೊರಗಿನಲ್ಲಿ ಕಾಲ ಕಳೆಯುತ್ತಿದ್ದರು. ಒಂದೆಡೆ ಲೈಫ್‌ಸ್ಟೈಲ್, ಇನ್ನೊಂದೆಡೆ ಈಕೆ ಹಲವು ವರ್ಷಗಳಿಂದ ಪ್ರೀತಿಸಿದ ಅವಿನಾಶ್‌ನನ್ನು ಸಹ ಬಿಟ್ಟು ಇರಲು ಆಗುತ್ತಿರಲಿಲ್ಲ.

ಹೀಗಾಗಿ, ಬೆಂಗಳೂರು ಬಿಟ್ಟು ಅವಿನಾಶ್ ಜೊತೆ ಮದುವೆಯಾಗಿದ್ದರು. ಆಜಾದಪುರದಲ್ಲಿರುವ ಗಂಡನ ಮನೆಯಲ್ಲಿ ಜೀವನ ಕಳೆಯುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

Exit mobile version