ಬೆಂಗಳೂರು, ಫೆ.14:
ವಿಪಕ್ಷಗಳಿಗೂ ಕಾಂಗ್ರೆಸ್ ಆಡಳಿತ ಮಾದರಿ :
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 1 ಸಾವಿರ ದಿನ ಪೂರೈಸುವ ಮೂಲಕ ಹೊಸ ಸಾಧನೆಗೆ ಪಾತ್ರವಾಗಿದೆ. ನುಡಿದಂತೆ ನಡೆದ ರಾಜ್ಯ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಗೆ ಜನರು ಬಹುಪರಾಕ್ ಎಂದಿದ್ದಾರೆ. ಹೌದು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲರ ಹುಬ್ಬೇರುವಂತೆ ಮಾಡಿತ್ತು.. ಆಡಳಿತ ಪಕ್ಷದ ಅಲೆಯ ನಡುವೆಯೂ ಬರೋಬ್ಬರಿ 135 ಸ್ಥಾನಗಳನ್ನು ಗೆದ್ದು ತನ್ನ ಪರಾಕ್ರಮವನ್ನು ಸಾಬೀತು ಮಾಡಿತ್ತು.. ಇದು ಹಿಂದೆಂದೂ ಕಾಣದ ಅತಿದೊಡ್ಡ ಗೆಲುವಾಗಿತ್ತು.. ನುಡಿದಂತೆ ನಡೆಯಲೇಬೇಕೆಂಬ ಛಲದಿಂದ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿತ್ತು.. ಸಿಎಂ ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪಣ ತೊಟ್ಟರು. ಸರ್ಕಾರ ಆಡಳಿತಕ್ಕೆ ಬಂದ ಕೇವಲ 6 ತಿಂಗಳಲ್ಲೇ ಐದು ಗ್ಯಾರಂಟಿಗಳನ್ನೂ ಅನುಷ್ಠಾನಗೊಳಿಸಿ ಜನ ಮನ್ನಣೆ ಗಳಿಸುವಲ್ಲಿ ಯಶಸ್ವಿಯಾಯಿತು.

ಗ್ಯಾರಂಟಿಗಳ ಹಿಂದೆ ಹೋದ್ರೆ ಸರ್ಕಾರ ದಿವಾಳಿ ಆಗೋದು ಪಕ್ಕಾ ಅನ್ನುತ್ತಿದ್ದ ವಿರೋಧಿಗಳಿಗೆ ತನ್ನ ಆಡಳಿತದಿಂದಲೇ ಉತ್ತರ ಕೊಟ್ಟಿದ್ದು ಅಂದ್ರೆ ಅದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಈ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬೇರೆ ರಾಜ್ಯಗಳು ಪ್ರೇರಣೆಗೊಂಡಿದ್ದು ಸುಳ್ಳಲ್ಲ. ಹಿಮಾಚಲಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು, ಕರ್ನಾಟಕ ಸರ್ಕಾರದ ಗ್ಯಾರಂಟಿ ಮಾದರಿಗಳನ್ನು ಅನುಕರಣೆ ಮಾಡಿದ್ದುಂಟು. ಕರ್ನಾಟಕ ಸರ್ಕಾರ ಮಾತ್ರ ಯಾವುದಕ್ಕೂ ಕುಗ್ಗದೇ, ಗ್ಯಾರಂಟಿ ಹೊರೆಯನ್ನು ಯಶಸ್ವಿಯಾಗಿ ನಿಭಾಯಿಸಿ, ಅಭಿವೃದ್ಧಿ ಯೋಜನೆಗಳ ಕಡೆ ಗಮನ ಹರಿಸಿ ರಾಜ್ಯದಲ್ಲಿ ಅಚ್ಚುಕಟ್ಟಾಗಿ ಆಡಳಿತ ನಡೆಸಿದೆ.
ಗ್ಯಾರಂಟಿಗಳಿಂದ 1 ಲಕ್ಷ ಕೋಟಿಗೂ ಅಧಿಕ ಪ್ರಯೋಜನ :
ಕಾಂಗ್ರೆಸ್ನ ಗ್ಯಾರಂಟಿಗಳನ್ನು ಟೀಕಿಸಿದ್ದ ವಿಪಕ್ಷಗಳೇ ಚುನಾವಣೆ ಹತ್ತಿರ ಬಂದಾಗ ಅದೇ ಗ್ಯಾರಂಟಿ ಯೋಜನೆಗಳನ್ನು ತಮ್ಮ ಪ್ರಚಾರದಲ್ಲಿ ಅಳವಡಿಸಿದ್ದೂ ಇದೆ. ಆದ್ರೆ ಕಾಂಗ್ರೆಸ್ನಷ್ಟು ಸುಲಭವಾಗಿ ಅದನ್ನ ನಿಭಾಯಿಸಲು ಸಾಧ್ಯವಾಗಲಿಲ್ಲ. 5 ಗ್ಯಾರಂಟಿಗಳ ಮೂಲಕ ಈವರೆಗೆ 1.16 ಲಕ್ಷ ಕೋಟಿ ರೂ. ಪ್ರಯೋಜನವನ್ನು ನೇರವಾಗಿ ರಾಜ್ಯದ ಜನತೆಗೆ ತಲುಪಿಸಲಾಗಿದೆ. 1.37 ಕೋಟಿ ಕುಟುಂಬಗಳು ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದಿವೆ.
ಜನರು ಬದುಕು ಬೆಳಗಿದ ಗ್ಯಾರಂಟಿ ಯೋಜನೆಗಳು!:
ಗೃಹಲಕ್ಷ್ಮೀ ಯೋಜನೆಯಡಿ 1 ಕೋಟಿ 24 ಲಕ್ಷ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಜಮೆ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 5 ಕೋಟಿಗೂ ಅಧಿಕ ಫಲಾನುಭವಿಗಳಿಗೆ ವಾರ್ಷಿಕ 25 ಲಕ್ಷ ಮೆಟ್ರಿಕ್ ಟನ್ಗೂ ಹೆಚ್ಚು ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಗೃಹಜ್ಯೋತಿ ಸ್ಕೀನಡಿ 1 ಕೋಟಿ 65 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರ ಸಬಲೀಕರಣದ ಸದುದ್ದೇಶದಿಂದ 668 ಕೋಟಿಗೂ ಹೆಚ್ಚು ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ.. ಯುವನಿಧಿ ಯೋಜನೆಯಡಿ 3 ಲಕ್ಷದ 8 ಸಾವಿರಕ್ಕೂ ಹೆಚ್ಚು ಯುವ ಜನರಿಗೆ ಪ್ರೋತ್ಸಾಹ ಧನ ಒದಗಿಸಲಾಗಿದೆ.
5 ಗ್ಯಾರಂಟಿ ಪೂರ್ಣ : 6ನೇ ಗ್ಯಾರಂಟಿಯೂ ಜಾರಿ
ದೇಶದಲ್ಲೇ ಹಲವು ರಾಜ್ಯಗಳಿಗೆ ಮಾದರಿಯಾಗಿರುವ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ 1000 ದಿನಗಳನ್ನ ಪೂರ್ಣಗೊಳಿಸಿದೆ. ಈ ಮೈಲಿಗಲ್ಲಿನ ಸವಿನೆನಪಿಗಾಗಿ 1001ನೇ ದಿನವಾದ ಶನಿವಾರ ಭೂ ಗ್ಯಾರಂಟಿ ಎಂಬ ಹೊಸ ಗ್ಯಾರಂಟಿಯನ್ನು ಸರ್ಕಾರ ಘೋಷಣೆ ಮಾಡಿದೆ. ಹಾವೇರಿಯಲ್ಲಿ ರಾಜ್ಯ ಮಟ್ಟದ ಬೃಹತ್ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸುತ್ತಮುತ್ತಲಿನ 9 ಜಿಲ್ಲೆಗಳ ಒಟ್ಟು 1.10 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಮೂಲಕ ಭೂ ಗ್ಯಾರಂಟಿ ಯೋಜನೆಯನ್ನ ಜಾರಿ ಮಾಡಲಾಗಿದೆ. ಈ ಮೂಲಕ ಸರ್ಕಾರದ ಯಶಸ್ವಿ ಗ್ಯಾರಂಟಿ ಯೋಜನೆಗಳ ಪಟ್ಟಿಗೆ ಭೂ ಗ್ಯಾರಂಟಿ ಸೇರ್ಪಡೆಯಾಗಿದ್ದು, ರಾಜ್ಯದ ಜನರ ಹರ್ಷಕ್ಕೆ ಕಾರಣವಾಗಿದೆ.