ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯಾನಕ ಬಾಂಬ್ ಬ್ಲಾಸ್ಟ್ ಸಂಭವಿಸಿದ್ದು, 9 ಜನರು ಬಲಿಯಾಗಿದ್ದಾರೆ. ಐತಿಹಾಸಿಕ ಕೆಂಪುಕೋಟೆ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಉಗ್ರರ ಕೈವಾಡ ಇರೋ ಶಂಕೆ ವ್ಯಕ್ತವಾಗಿದೆ. ಈ ಸ್ಫೋಟದ ಹಿಂದೆ ವೈದ್ಯನೊಬ್ಬನ ಪಾತ್ರ ಇದೆ ಅಂತಾ ಹೇಳಲಾಗ್ತಿದೆ. ಶಂಕಿತ ಡಾ. ಉಮರ್ ಮೊಹಮ್ಮದ್ ಎಂಬಾತನೇ ಕಾರು ಡ್ರೈವ್ ಮಾಡಿಕೊಂಡು ಬಂದು ಸ್ಫೋಟಿಸಿದ್ದಾನೆ ಅನ್ನೋ ಮಾಹಿತಿ ಹೊರಬಿದ್ದಿದೆ. ಹರಿಯಾಣ ನೋಂದಣಿ ಹೊಂದಿದ್ದ HR 26 CE7674 ಹುಂಡೈ i20 ಕಾರನ್ನು ಈ ಉಮರ್ ಮಾಸ್ಕ್ ಧರಿಸಿ ಚಲಾಯಿಸುತ್ತಿದ್ದ. ಕಾರು ಸಾಗಿದ ಎಲ್ಲಾ ಮಾರ್ಗಗಳ ಸಿಸಿಟಿವಿ ಪರಿಶೀಲನೆ ನಡೆಸಲಾಗಿದೆ. ಸ್ಫೋಟಗೊಂಡಿದ್ದ ಕಾರು 3 ಗಂಟೆಗಳ ಕಾಲ ಆ ಸ್ಥಳದಲ್ಲಿದ್ದರೂ ಒಮ್ಮೆಯೂ ಚಾಲಕ ಕಾರಿನಿಂದ ಕೆಳಗಿಳಿದಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕಾರು ಮಧ್ಯಾಹ್ನ 3.19 ಕ್ಕೆ ಕೆಂಪು ಕೋಟೆ ಪಾರ್ಕಿಂಗ್ ಸ್ಥಳಕ್ಕೆ ಬಂದು ನಿಂತಿದ್ದು, ಸಂಜೆ 6.30ರವರೆಗೆ ಅಲ್ಲಿಯೇ ನಿಂತಿತ್ತು ಅಂತಾ ಹೇಳಲಾಗ್ತಿದೆ.

ಇನ್ನು, ಬಾಂಬ್ ಸ್ಫೋಟಿಸಿದ ಉಮರ್ ಚರಿತ್ರೆಯೇ ಭಯಾನಕವಾಗಿದೆ. ಮೂಲಗಳ ಪ್ರಕಾರ ನಬಿ ಭಟ್ ಅವರ ಮಗ ಡಾ. ಉಮರ್ ಯು ನಬಿ ಫರಿದಾಬಾದ್ನ ಅಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದ. ಉಮರ್ ತಂದೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. 10-15 ವರ್ಷಗಳ ಹಿಂದೆ ಕೆಲಸ ತೊರೆದಿದ್ದರು. ಉಮರ್ಗೆ ಇಬ್ಬರು ಸಹೋದರರು ಮತ್ತು ಒಬ್ಬಳು ಹಿರಿಯ ಸಹೋದರಿ ಇದ್ದಾರೆ. ಈ ಪೈಕಿ ಸಹೋದರ ಮತ್ತು ಅಕ್ಕನಿಗೆ ಮದುವೆಯಾಗಿದ್ದರೆ ಓರ್ವ ಸಹೋದರ ಅವಿವಾಹಿತ. ಈ ಘಟನೆಯ ಬೆನ್ನಲ್ಲೇ ಪೊಲೀಸರು ಉಮರ್ ಮನೆಯ ಸದಸ್ಯರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಡಾ. ಉಮರ್ ಎನ್ಕ್ರಿಪ್ಟ್ ಮಾಡಿದ ಟೆಲಿಗ್ರಾಮ್ ಚಾನೆಲ್ಗಳ ಮೂಲಕ ಮೂಲಭೂತವಾದಿಗಳಾಗಿದ್ದ ವೈದ್ಯಕೀಯ ವೃತ್ತಿಪರರ ಗುಂಪಿನ ಭಾಗವಾಗಿದ್ದ. ಫರಿದಾಬಾದ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನ್ನ ತಂಡವನ್ನು ಬಂಧಿಸಿದ್ದಕ್ಕೆ ನಾಪತ್ತೆಯಾಗಿದ್ದ ಉಮರ್ ಸಿಟ್ಟಾಗಿದ್ದ. ಹೀಗಾಗಿ, ತನ್ನ ಬಳಿಯಿದ್ದ ಸ್ಫೋಟಕಗಳನ್ನು ಬಳಸಲು ನಿರ್ಧರಿಸಿರಬಹುದು. ಮುಂದೆ ತಾನು ಅರೆಸ್ಟ್ ಆಗೋದು ನಿಶ್ಚಿತ ಅಂತಾ ಕಾರಿನಲ್ಲಿ ಬಂದು ಆತ್ಮಾಹುತಿ ಬಾಂಬ್ ದಾಳಿ ನಡೆಸಿರುವ ಸಾಧ್ಯತೆ ದಟ್ಟವಾಗಿದೆ ಅಂತಾ ಹೇಳಲಾಗ್ತಿದೆ.
ಇನ್ನು, ಇತ್ತೀಚೆಗಷ್ಟೇ ಹರಿಯಾಣದ ಫರಿದಾಬಾದ್ನಲ್ಲಿ 2,900 ಕೆಜಿ ಸ್ಫೋಟಕ ಪತ್ತೆಯಾಗಿತ್ತು. ಇದನ್ನು ಪತ್ತೆ ಹಚ್ಚಿದ ಭದ್ರತಾ ಸಿಬ್ಬಂದಿ ಕೊನೆಗೂ ವಶಕ್ಕೆ ಪಡೆಯುವಲ್ಲಿ ಸಕ್ಸಸ್ ಆಗಿದ್ದರು. ಇದನ್ನು ಸಾಗಾಟ ಮಾಡುತ್ತಿದ್ದ ಶಂಕಿತ ಉಗ್ರರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಇದರಿಂದ ಉರಿದು ಬಿದ್ದಿದ್ದ ಉಮರ್, ಕಾರಿನಲ್ಲಿ ಬಂದು ಸೂಸೈಡ್ ಬಾಂಬ್ ಅಟ್ಯಾಕ್ ಮಾಡಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗುತ್ತಿದೆ.
ಸದ್ಯ ಈ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸೋದ ಸಾಧ್ಯತೆ ಇದೆ. ಈ ದಾಳಿಗೂ ಪುಲ್ವಾಮಾ ದಾಳಿಗೂ ಲಿಂಕ್ ಇದೆ ಎನ್ನಲಾಗುತ್ತಿದ್ದು, ದೆಹಲಿ ಪೊಲೀಸರು ಉಮರ್ ಡಿಎನ್ಎ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನಷ್ಟು ಉಗ್ರರ ಹೆಡೆಮುರಿ ಕಟ್ಟಲು ಭದ್ರತಾ ಪಡೆಗಳು ಸಜ್ಜಾಗಿ ನಿಂತಿವೆ.