Site icon BosstvKannada

ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ : ಸಿ.ಟಿ ರವಿ ವಿರುದ್ಧ ಕೇಸ್ ದಾಖಲು

ಮದ್ದೂರಿನಲ್ಲ ಗಣೇಶ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟದ ಬಳಿಕ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆಯಲ್ಲಿ ಸಿ.ಟಿ.ರವಿ ಭಾಷಣ ಮಾಡಿದ್ದರು. ಭಾಷಣದ ವೇಳೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮದ್ದೂರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಮಂಜುನಾಥ್ ಅವರ ದೂರಿನನ್ವಯ ಪ್ರಕರಣ ದಾಖಲಾಗಿದೆ. ಈ ಆರೋಪದ ಮೇಲೆ ಸಿ.ಟಿ ರವಿ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಾಗಿದೆ.

ಈ ಕುರಿತು ಚಿಕ್ಕಮಗಳೂರಿನಲ್ಲಿ ಸುದ್ದಿಗಾಗರೊಂದಿಗೆ ಮಾತನಾಡಿದ ಅವರು, ನನ್ನ ರಕ್ತ ಪ್ಯೂರ್ ಹಿಂದುತ್ವ ಬೆರಕೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ. ಮಿಸ್ಟರ್ ಮಂಜುನಾಥ್, ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಧ್ವನಿವರ್ಧಕ ಬಳಸುವಂತಿಲ್ಲ, ಸುಪ್ರೀಂ ಕೋರ್ಟ್ ಆದೇಶವಿದೆ. ನನ್ನ ಮೇಲೆ ಕೇಸ್ ಹಾಕಿ ನಿಯತ್ ತೋರ್ಸೋದಲ್ಲ. ನಾಳೆ ನೀನು ಮದ್ದೂರು ವ್ಯಾಪ್ತಿಯಲ್ಲಿ ಸುಮೋಟೋ ಕೇಸ್ ಹಾಕಬೇಕು. ಯಾರ‍್ಯಾರು ಬೆಳಗ್ಗೆ 5ಕ್ಕೆ ಕೂಗ್ತಾರೆ, ಅವರ ಮೇಲೆ ಕೇಸ್ ಹಾಕಿ ಖಾಕಿ ಬಟ್ಟೆಗೆ ನಿಯತ್ ಇದೆ ಅಂತ ತೋರ್ಸು ಅಂತ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಕೇಸ್ ನನಗೆ ಹೊಸದಲ್ಲ, ಕೇಸಿಗೆ ಹೆದರುವ ಜಾಯಮಾನದವನೂ ನಾನಲ್ಲ. ನೀವು ಕಲ್ಲು ಹೊಡೆದು, ತೊಡೆ ತಟ್ಟಿ, ಪೆಟ್ರೋಲ್ ಬಾಂಬ್ ಹಾಕಿದ್ರೆ, ಸಹಿಸುವ ಕಾಲ ಮುಗಿದಿದೆ ಎಂದಿದ್ದೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಹೇಳಿದ್ದೆ, ಪ್ರೀತಿಗೆ ಪ್ರೀತಿ-ಕಲ್ಲಿಗೆ ಕಲ್ಲು ಎಂದಿದ್ದೆ. ನನ್ನ ಹೇಳಿಕೆಗೆ ಇಂದಿಗೂ ನಾನು ಬದ್ಧ. ಶಿವನ ನೆಲದಲ್ಲಿ ಅಲ್ಲಾ ಒಬ್ಬನೇ ಅಂತ ಅಂದ್ರೆ ಉಳಿದ ದೇವರ ಅಸ್ತಿತ್ವ ಏನು? ಅಂತ ಪ್ರಶ್ನೆ ಮಾಡಿದ್ದಾರೆ. ಕೆಲವರು ನಾನು ಹಿಂದೂ ಅಂತಾರೆ, ನಾಮ ಹಾಕ್ಕೊಂಡ್, ನಾಮ ಅಳಿಸಿ ಟೋಪಿ ಹಾಕಿ ನಮಾಜ್ ಮಾಡೋದು. ಇಂತಹ ತಾರಾತಕಡಿ, ನಾಟಕದ ಜಾಯಮಾನದವನು ನಾನಲ್ಲ. ನನ್ನ ರಕ್ತ ಪ್ಯೂರ್ ಹಿಂದುತ್ವ, ಬೆರಕೆ ಅಲ್ಲ ಅಂತ ʻಕೈʼ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Read Also : 100 FIR ದಾಖಲಿಸಿದರೂ ನಾನು ಹೆದರಲ್ಲ, ನನ್ನ ರಕ್ತ ಪ್ಯೂರ್ ಹಿಂದುತ್ವ ಬೆರಕೆ ಅಲ್ಲ : ಸಿ.ಟಿ ರವಿ

Exit mobile version