ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈಗ ಭಾರತದ ಭರವಸೆ ಮಾತ್ರವಲ್ಲ, ಶ್ರೀಲಂಕಾದ ಭರವಸೆ ಕೂಡ ಆಗಿದ್ದಾರೆ. ಶ್ರೀಲಂಕಾ ರಾಷ್ಟ್ರವು ದಿತ್ವಾ ಚಂಡಮಾರುತದಿಂದಾಗಿ ತತ್ತರಿಸಿ ಹೋಗಿದೆ. ಸಾಕಷ್ಟು ಸಾವು- ನೋವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರಿಗೆ ಕರೆ ಮಾಡಿ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.
ದಿತ್ವಾ ಚಂಡಮಾರುತದಿಂದಾಗಿ ಸಾಕಷ್ಟು ಸಾವು- ನೋವು ಸಂಭವಿಸಿದ್ದು,ಇದರಿಂದ ಉಂಟಾದ ಜೀವ ಹಾನಿಗೆ ಸಂತಾಪ ಸೂಚಿಸುವುದಾಗಿ ಹೇಳಿದ್ದಾರೆ. ಅಲ್ಲದೇ, ಭಾರತವು ನಿಮ್ಮೊಂದಿಗೆ ಯಾವಾಗಲೂ ಇರುತ್ತದೆ. ನಿಮ್ಮೊಂದಿಗೆ ಭಾರತ ದೃಢವಾಗಿ ನಿಲ್ಲುತ್ತದೆ. ಅಗತ್ಯವಿರುವ ಎಲ್ಲ ಸಹಾಯವನ್ನು ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ.
ದಿತ್ವಾ ಚಂಡಮಾರುತದಿಂದಾಗಿ ಈಗಾಗಲೇ ಶ್ರೀಲಂಕಾದಲ್ಲಿ 300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಹಲವರು ಕಾಣೆಯಾಗಿದ್ದಾರೆ. ಹೀಗಾಗಿ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸುಮಾರು 1.5 ಲಕ್ಷ ಜನರನ್ನು ತಾತ್ಕಾಲಿಕ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ.

