ಬೀದರ್, ನವೆಂಬರ್ 30: ಮರಾಠಾ ಸಮಾಜದ ಬಂಧುಗಳು ಕಷ್ಟದಲ್ಲಿದ್ದಾರೆ. ನಾವೆಲ್ಲ ಒಂದಾಗಿ ಒಗ್ಗಟ್ಟಾಗಿ ಸಾಗೋಣ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಕರೆ ನೀಡಿದರು. ಬೀದರ್ನ ಗಣೇಶ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸ್ವಾಭಿಮಾನಿ ಮರಾಠಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮ ವಿಶೇಷವಾಗಿದೆ. ಬೀದರ್ಗೆ ಹಲವಾರು ಬಾರಿ ಬಂದಿದ್ದೆ. ಆಗ ನಮ್ಮ ಸಮಾಜದ ಮುಖಂಡರು ಸಂಘಟನೆ ಮಾಡಬೇಕು, ಸಮಾಜವನ್ನು ಒಂದು ಗೂಡಿಸಬೇಕು ಎಂದು ಮಾತನಾಡಿದ್ದೇವೆ ಈಗ ಕಾಲ ಕೂಡಿ ಬಂದಿದೆ. ಸಮಾಜದ ಎಲ್ಲಾ ಮುಖಂಡರು ಶ್ರದ್ಧೆಯಿಂದ ಕಷ್ಟ ಬಿದ್ದು ಸಮಾಜದ ಬಂಧುಗಳನ್ನು ಸೇರಿಸಿದ್ದೀರಾ. ಇದಕ್ಕಾಗಿ ನಿಮಗೆ ಧನ್ಯವಾದಗಳು ಎಂದರು.

ಛತ್ರಪತಿ ಶಿವಾಜಿ ಮಹಾರಾಜರು ಇಡೀ ವಿಶ್ವದಲ್ಲೇ ಜಾತ್ಯತೀತ ನಾಯಕರಾಗಿದ್ದರು. ಅವರು ಮೊಘಲರ ವಿರುದ್ಧವಿದ್ದರು. ಮುಸ್ಲಿಮರ ವಿರುದ್ಧ ಅಲ್ಲ. ಇದನ್ನು ನಾವು ತಿಳಿಯಬೇಕು ಎಂದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಹಾಯ ಮಾಡಿ ಲಂಡನ್ಗೆ ಹೋಗಿ ಉನ್ನತ ಅಧ್ಯಯನ ಮಾಡಲು ಸಹಾಯ ಮಾಡಿದವರು ನಮ್ಮ ಸಮಾಜದ ರಾಜರಾದ ಗಾಯಕ್ವಾಡ್ ಹಾಗೂ ಶಾಹು ಮಹಾರಾಜರು. ಅಂಬೇಡ್ಕರ್ ತಮಗೆ ದೊರೆತ ಸಹಾಯದಿಂದ ಹೊರ ದೇಶದಲ್ಲಿ ಓದಿ ಬಂದರು. ಪ್ರಪಂಚ ಕಂಡ ಬಹುದೊಡ್ಡ ಸುಧಾರಕರು ಅಂಬೇಡ್ಕರ್ ಅವರು ಎಂದರು.
ನಾನು ರಾಜ್ಯದಲ್ಲಿ ಎಲ್ಲೆಲ್ಲಿ ಹೋಗುತ್ತೀನೋ ಅಲ್ಲೆಲ್ಲ ಮರಾಠಾ ಸಮಾಜದ ಬಂಧುಗಳು ಕಷ್ಟದಲ್ಲಿ ಇದ್ದಾರೆ. ನಾನು ಪುಣ್ಯ ಮಾಡಿದ್ದೇನೆ. ಮರಾಠಾ ಸಮಾಜದಲ್ಲಿ ಹುಟ್ಟಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದರು. ಪ್ರತಿ ತಿಂಗಳು ನಾನು ಬರಲು ಸಿದ್ಧನಿದ್ದೇನೆ. ನಿಮಗೆ ಬೆಂಬಲ ನೀಡುತ್ತೇನೆ. ಆದರೆ ನಾವೆಲ್ಲ ಒಂದಾಗಬೇಕು. ಒಗ್ಗಟ್ಟಾಗಬೇಕು. ಇಲ್ಲಿ ರಾಜಕೀಯ ಬೇಕಿಲ್ಲ. ಜೀಜಾಬಾಯಿ ಟ್ರಸ್ಟ್ ಆರಂಭಿಸಿ ನಡೆಸಿ. ಎಲ್ಲ ಸಹಾಯ ಮಾಡುತ್ತೇನೆ ಎಂದರು.
ಶೈಕ್ಷಣಿಕವಾಗಿ, ಆರ್ಥಿಕವಾಗಿ ಶಕ್ತಿಯುತವಾದಾಗ ರಾಜಕೀಯ ತನ್ನಿಂತಾನೆ ಬರುತ್ತೆ. ಅದಕ್ಕೆ ನಾವು ನಿರ್ಧಾರ ಮಾಡೋಣ. ಪ್ರಮಾಣ ಮಾಡೋಣ. ಸಮಾಜಕ್ಕಾಗಿ ಕೆಲಸ ಮಾಡುತ್ತೇನೆ ಎಂದು. ಆಗ ಮಾತ್ರ ನಮ್ಮ ಸಮಾಜ ಸಾಕಷ್ಟು ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.
ಇಡೀ ಬೀದರ್ ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಮರಾಠ ಸಮಾಜದವರು ಇದ್ದಾರೆ. ನಾವು ಎಲ್ಲಾ ಸಮಾಜದ ಬಂಧುಗಳ ಜೊತೆಗೆ ಸಾಮರಸ್ಯದಿಂದ, ಅಣ್ಣ ತಮ್ಮಂದಿರಂತೆ ಬಾಳೋಣ. ಛತ್ರಪತಿ ಶಿವಾಜಿ ಮಹಾರಾಜರು, ಶಾಹು ಹಾಗೂ ಗಾಯಕ್ವಾಡ್ ಮಹಾರಾಜರು ಹೇಳಿದ ಮಾರ್ಗವನ್ನು ಅನುಸರಿಸೋಣ. ಮುಂದಿನ ದಿನಗಳಲ್ಲಿ ಟ್ರಸ್ಟ್ ಮೂಲಕ ಅಂಬೇಡ್ಕರ್ ಹಾಗೂ ಬಸವಣ್ಣವರ ವಿಚಾರವನ್ನು ತಿಳಿಸೋಣ ಎಂದು ವಿವರಿಸಿದರು.
ನಾವೆಲ್ಲ ಇಲ್ಲಿ ಸೇರಿರುವ ಉದ್ದೇಶವೇ ಸಮಾಜವನ್ನು ಕಟ್ಟಬೇಕು. ಬಡ ಸಮಾಜ ಬಂಧುಗಳನ್ನು ಹುಡುಕಬೇಕು, ಅವರನ್ನು ಓದಿಸಬೇಕು. ಅವರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ನಾವೆಲ್ಲ ಈಗ ಒಂದಾಗಿದ್ದೇವೆ. ನಾನು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದೇನೆ. ನಾಲ್ಕು ಬಾರಿ ಶಾಸಕನಾಗಿ ಸಚಿವನಾಗಿದ್ದೇನೆ. ನನಗೆ ದೇವರು ಒಂದು ಅವಕಾಶ ನೀಡಿದ್ದಾನೆ. ನಮ್ಮ ಸಮಾಜದ ಜೊತೆಗೆ ರಾಜ್ಯದಲ್ಲಿನ ಎಲ್ಲಾ ಶೋಷಿತ ಸಮಾಜದ ಬಂಧುಗಳಿಗೂ ಒಳ್ಳೆಯದಾಗಬೇಕು ಎಂಬುದೇ ನನ್ನ ಅಭಿಲಾಷೆ ಎಂದರು.
ದೇವರು ಎಲ್ಲಿಯವರೆ ಶಕ್ತಿ ಕೊಟ್ಟಿರುತ್ತಾನೆ ಅಲ್ಲಿಯವರೆಗೆ ಶೋಷಿತರ ಪರವಾಗಿ ಕೆಲಸ ಮಾಡುತ್ತೇನೆ. ಬಡವರ ಕಣ್ಣೀರು ಒರೆಸಲು ರಾಜಕಾರಣದಲ್ಲಿ ಇದ್ದೇನೆ. ನೀವೆಲ್ಲ ನನಗೆ ದೊಡ್ಡ ಜವಾಬ್ದಾರಿ ಇದೆ. ಅದಕ್ಕಾಗಿ ನೀವೆಲ್ಲ ಸಹಕಾರ ನೀಡಬೇಕು. ನಿಮ್ಮೆಲ್ಲ ಬೆಂಬಲದಿಂದ ನಾನು ಇಂದು ನಿಂತಿದ್ದೇನೆ ಎಂದು ಹೇಳಿದರು.
ಈ ಸಮಾವೇಶದ ಮೂಲಕ ಮೊದಲ ಬಾರಿಗೆ ಒಂದು ಪ್ರಯತ್ನ ಮಾಡಿದ್ದೇವೆ. ಇಷ್ಟು ಯಶಸ್ಸು ಸಾಧಿಸುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಈ ಕಾರ್ಯಕ್ರಮ ನನಗೆ ಸಾಕಷ್ಟು ಶಕ್ತಿ ನೀಡಿದೆ. ನಿಮ್ಮ ಆಶೀರ್ವಾದ ಇರಲಿ. ಮುಂದಿನ ದಿನಗಳಲ್ಲಿ ಜೀಜಾಬಾಯಿ ಟ್ರಸ್ಟ್ ಉತ್ತರ ಕರ್ನಾಟಕದಲ್ಲಿ ನಂಬರ್ ಒನ್ ಟ್ರಸ್ಟ್ ಆಗಲು ಸಹಾಯ ಮಾಡುತ್ತೇನೆ. ಹಂತ ಹಂತವಾಗಿ ಕಾರ್ಯಕ್ರಮ ಮಾಡೋಣ ಎಂದು ಕರೆ ನೀಡಿದರು.
ಕೇವಲ ಮೇಳ ಮಾಡಿ ಜನರನ್ನು ಸೇರಿಸಿದರೆ ಪ್ರಯೋಜನವಿಲ್ಲ. ನಾವು ಸೇರುವ ಉದ್ದೇಶ ನಮ್ಮ ಸಮಾಜದ ಬಡವರಿಗೆ ಅನುಕೂಲವಾಗಬೇಕು. ಇದು ರಾಜಕೀಯ ಸಮಾವೇಶ ಅಲ್ಲ. ಶಕ್ತಿ ಪ್ರದರ್ಶನ ಅಲ್ಲ. ಇದು ಸಮಾಜದ ಒಗ್ಗಟ್ಟಿನ ಪ್ರದರ್ಶನ. ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದಾಗಬೇಕು ಎಂದರು.
ನಮ್ಮ ಸಮಾಜದ ಯುವಕರು ಛತ್ರಪತಿ ಶಿವಾಜಿ ಮಹಾರಾಜರ ವಿಚಾರಗಳನ್ನು ಓದಬೇಕು. ಆಲೋಚನೆ ಮಾಡಿ. ಸಮಾಜದ ಮುಖಂಡರು ಎಲ್ಲಾ ಪಕ್ಷಗಳನ್ನು ಬದಿಗೊತ್ತಿ ನಾನು ಮರಾಠ ಎಂಬ ಭಾವನೆ ಎಂದುಕೊಂಡು ಬಂದಿದ್ದಾರೆ ಎಂದರು.
ಸಮಾವೇಶಕ್ಕೂ ಮುನ್ನ ಬೀದರ್ನ ಶಿವಾಜಿ ವೃತ್ತದ ಬಳಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಮಾಜ ಬಾಂಧವರು ಸಚಿವ ಲಾಡ್ ಅವರನ್ನು ಅದ್ಧೂರಿಯಾಗಿ ಸ್ವಾಗತ ಕೋರಿದರು. ಛತ್ರಪತಿ ಶಿವಾಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಲಾಡ್ ಅವರು ನಂತರ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.