BosstvKannada

Kantara: Chapter 1 : ಕಾಂತಾರ ಚಿತ್ರಕ್ಕೆ ಮತ್ತೆ ಸಂಕಷ್ಟ, ಇದೆಂಥಾ ವಿಘ್ನ? ಮತ್ತೊಬ್ಬ ಕಲಾವಿದ ಬಲಿ..!

ಕಾಂತಾರ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಸಿನಿಮಾ.. ದಕ್ಷಿಣ ಕನ್ನಡ ಭಾಗದ ದೈವಕೋಲದ ಕಥೆ ಹೊಂದಿರುವ ಈ ಸಿನಿಮಾ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಹವಾ ಮಾಡಿತ್ತು.. ಕಲೆಕ್ಷನ್‌ನಲ್ಲೂ ಕಿಂಗ್‌ ಎನ್ನಿಸಿಕೊಂಡಿತ್ತು.. ಇದೇ ಜೋಶ್‌ನಲ್ಲಿ ಕಾಂತಾರ ಪ್ರೀಕ್ವೆಲ್‌ ಮಾಡಲು ಸಜ್ಜಾಗಿರುವ ಟೀಂಗೆ ಒಂದಾದ ಮೇಲೊಂದರಂತೆ ಆಘಾತಗಳು ಎದುರಾಗಿವೆ.. ಅದೂ ಕಲಾವಿದರು ಒಬ್ಬರಾದ ಮೇಲೆ ಒಬ್ಬರಂತೆ ಸಾವಿನ ಮನೆ ಸೇರುತ್ತಿದ್ದಾರೆ..

ಕಾಂತಾರ ಪ್ರೀಕ್ವೆಲ್‌ ಸಿನಿಮಾಗೆ ಪದೇಪದೇ ವಿಘ್ನಗಳು ಎದುರಾಗುತ್ತಿವೆ.. ಕಾಮಿಡಿ ನಟ ರಾಕೇಶ್‌ ಪೂಜಾರಿ ಸಾವು ಮಾಸುವ ಮುನ್ನವೇ ಮತ್ತೊಬ್ಬ ಕಲಾವಿದನ ಜೀವ ಹೋಗಿದೆ.. ಕಾಂತಾರ ಚಿತ್ರದಲ್ಲಿ ನಟಿಸಲು ಬಂದಿದ್ದ ಮಿಮಿಕ್ರಿ ಕಲಾವಿದ ನಿಜು ವಿ.ಕೆ.ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಂತಾರ ಚಾಪ್ಟರ್ 1 ಸಿನಿಮಾದ ಚಿತ್ರೀಕರಣಕ್ಕಾಗಿ ಕೇರಳದಿಂದ ಬಂದಿದ್ದ ವಿಜು ವಿ.ಕೆ., ಆಗುಂಬೆ ಹೋಮ್ ಸ್ಟೇ ಒಂದರಲ್ಲಿ ತಂಗಿದ್ದರು. ಬುಧವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನ ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು. ಅಷ್ಟರಲ್ಲೇ ಮಾರ್ಗಮಧ್ಯೆಯೇ ನಿಜು ವಿ.ಕೆ. ಪ್ರಾಣ ಪಕ್ಷಿ ಹಾರಿ ಹೋಗಿದೆ.

ಈ ಹಿಂದೆಯೂ ಕಾಂತಾರ ಚಿತ್ರ ತಂಡಕ್ಕೆ ವಿಘ್ನಗಳು ಎದುರಾಗಿವೆ.. ಬಸ್‌ ಅಪಘಾತ, ಸಿನಿಮಾ ಸೆಟ್‌ಗೆ ಬೆಂಕಿ, ಜೂನಿಯರ್‌ ಕಲಾವಿದ ನದಿಯಲ್ಲಿ ಈಜಲು ಹೋಗಿ ಸಾವು, ರಾಕೇಶ್‌ ಪೂಜಾರಿ ಸಾವು ಹೀಗೆ ಹಲವು ಕಂಟಕಗಳು ಚಿತ್ರತಂಡಕ್ಕೆ ಆತಂಕ ಹುಟ್ಟಿಸಿವೆ.. ಹಾಗಾದ್ರೆ, ಕಾಂತಾರ ಸೆಟ್‌ನಲ್ಲಿ ಯಾವೆಲ್ಲಾ ಆಘಾತಕಾರಿ ಘಟನೆಗಳು ನಡೆದಿವೆ ಅನ್ನೋದಾದ್ರೆ,

ಕಾಂತಾರ ವಿಘ್ನ -1 : ನದಿಯಲ್ಲಿ ಮೃತಪಟ್ಟಿದ್ದ ಜೂನಿಯರ್‌ ಆರ್ಟಿಸ್ಟ್‌..!

ಕೆಲ ತಿಂಗಳ ಹಿಂದೆ ಕಾಂತಾರ ಸಿನಿಮಾದ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್‌ ಮೃತಪಟ್ಟಿದ್ರು… ಉಡುಪಿ ಜಿಲ್ಲೆಯ ಕೊಲ್ಲೂರು ಬಳಿಯ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದರು. ಆಗ ಈ ಸಾವು ನೋಡಿ ಇಡೀ ಕಾಂತಾರ ಚಿತ್ರತಂಡ ಮಮ್ಮಲ ಮರುಗಿತ್ತು.. ನಟ ರಿಷಬ್‌ ಶೆಟ್ಟಿ ಸೇರಿ ಎಲ್ಲಾ ಕಲಾವಿದರು ಕಂಬನಿ ಮಿಡಿದಿದ್ರು..

ಕಾಂತಾರ ವಿಘ್ನ -2 : ಹೃದಯಾಘಾತಕ್ಕೆ ಬಲಿಯಾಗಿದ್ದ ರಾಕೇಶ್‌ ಪೂಜಾರಿ

ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಸೀಸನ್ 3 ಶೋ ಮೂಲಕ ಮನೆ ಮಾತಾಗಿದ್ದ ನಟ ರಾಕೇಶ್ ಪೂಜಾರಿ, ಕಾಂತಾರ ಸಿನಿಮಾದಲ್ಲಿ ನಟಿಸುವಾಗ್ಲೇ ಜೀವ ಬಿಟ್ಟಿದ್ರು.. ಈ ಸಿನಿಮಾದ ಶೂಟಿಂಗ್‌ಗಾಗಿ ಊರಿನಲ್ಲಿಯೇ ಇದ್ದರು. ಮೇ 11ರಂದು ಶೂಟಿಂಗ್ ಮುಗಿಸಿದ ಬಳಿಕ ಗೆಳೆಯನ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಮೆಹೆಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವಾಗ ಹಠಾತ್ ಆಗಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರನ್ನು ಕಾರ್ಕಳದ ಗ್ರಾಜಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅಷ್ಟೊತ್ತಿಗಾಗಲೇ ರಾಕೇಶ್ ಪೂಜಾರಿ ನಿಧನರಾಗಿದ್ದರು. ಕಾಂತಾರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ರಾಕೇಶ್‌ ಪೂಜಾರಿ ನಟಿಸುತ್ತಿದ್ದರು..

ಕಾಂತಾರ ವಿಘ್ನ -3 : ಚಿತ್ರತಂಡದ ಬಸ್‌ ಅಪಘಾತ, ಸೆಟ್‌ಗೆ ಬೆಂಕಿ..!

ರಾಕೇಶ್‌ ಪೂಜಾರಿ ಸಾವು, ಜೂನಿಯರ್‌ ಆರ್ಟಿಸ್ಟ್‌ ದಾರುಣ ಅಂತ್ಯ ಹಾಗೂ ನಿಜು ವಿ.ಕೆ. ಸಾವಿಗೂ ಮೊದಲು ಇನ್ನೂ ಎರಡು ಘಟನೆಗಳು ನಡೆದಿದ್ವು.

ಈ ಹಿಂದೆ ಕಾಂತಾರ ಸಿನಿಮಾ ತಂಡ ಸಾಗುತ್ತಿದ್ದ ಬಸ್ ಕೊಲ್ಲೂರಿನಲ್ಲಿ ಅಪಘಾತಕ್ಕೀಡಾಗಿತ್ತು. ಬಸ್‌ನಲ್ಲಿದ್ದ ಜ್ಯೂನಿಯರ್ ಆರ್ಟಿಸ್ಟ್‌ಗಳು ಗಾಯಗೊಂಡಿದ್ದರು.. ಇನ್ನೊಂದು ಶಾಕಿಂಗ್‌ ವಿಚಾರ ಅಂದ್ರೆ ಕಾಂತಾರ ಸಿನಿಮಾ ಶೂಟಿಂಗ್‌ ಸೆಟ್‌ಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಒಟ್ನಲ್ಲಿ, ಕಾಂತಾರ ಪ್ರೀಕ್ವೆಲ್‌ ಸಿನಿಮಾಗೆ ಒಂದಾದ ಮೇಲೊಂದರಂತೆ ವಿಘ್ನಗಳು ಕಾಡುತ್ತಿದ್ದು, ಇಡೀ ಚಿತ್ರ ತಂಡ ಆತಂಕದಲ್ಲಿ ಮುಳುಗಿದೆ.. ಇನ್ನೂ ಏನೇನಾಗುತ್ತೋ ಅಂತಾ ನಟ ರಿಷಬ್‌ ಶೆಟ್ಟಿ ಸೇರಿದಂತೆ ಎಲ್ಲಾ ಕಲಾವಿದರನ್ನೂ ಭಯ ಹುಟ್ಟಿದ್ದಂತೂ ಸುಳ್ಳಲ್ಲ.

Exit mobile version