ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಪ್ರತಿಷ್ಠಿತ ರೋಲ್ಸ್-ರಾಯ್ಸ್ ಕಂಪನಿ ಸ್ಥಾಪಿಸಿರುವ ಅತ್ಯಾಧುನಿಕ ಜಾಗತಿಕ ಸಾಮರ್ಥ್ಯ ಮತ್ತು ನಾವೀನ್ಯತಾ ಕೇಂದ್ರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಉದ್ಯಮ ವಲಯದ ಕಾರ್ಯ ಪರಿಸರವನ್ನು ಸೃಷ್ಟಿಸುವಲ್ಲಿ ರೋಲ್ಸ್ ರಾಯ್ಸ್ ಕಂಪನಿಯು ಮೊದಲಿನಿಂದಲೂ ಜೊತೆಯಾಗಿದೆ. ನೂತನ ಜಿಸಿಸಿ ಕೇಂದ್ರವು ಕಂಪನಿಯ ಪಾಲಿಗೆ ಅತ್ಯಂತ ದೊಡ್ಡ ಮತ್ತು ಅತ್ಯಾಧುನಿಕ ಕೇಂದ್ರವಾಗಿದೆ. ಇಂತಹ ಉಪಕ್ರಮಗಳಿಂದಾಗಿ ಬೆಂಗಳೂರು ನಗರವು ವೈಮಾಂತರಿಕ್ಷ ವಲಯದ ಹೂಡಿಕೆಯಲ್ಲಿ ಜಗತ್ತಿನ ಮೊದಲ 3 ನಗರಗಳಲ್ಲಿ ಒಂದಾಗಿ ಬೆಳೆದಿದೆ ಎಂದು ಹೇಳಿದರು.

ರೋಲ್ಸ್ ರಾಯ್ಸ್ ಕಂಪನಿಯು ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಇಂಜಿನಿಯರ್ಗಳನ್ನು ಹೊಂದಿದೆ. ಈ ಪೈಕಿ ಹೆಚ್ಚಿನವರು ಕರ್ನಾಟಕದಿಂದ ಕೆಲಸ ಮಾಡುತ್ತಿದ್ದಾರೆ. ಈ ಕಂಪನಿಯ ಜೊತೆಗೆ ಏಕಸ್, ಕಾಲಿನ್ಸ್ ಏರೋಸ್ಪೇಸ್, ವಿಪ್ರೋ, ಮಹೀಂದ್ರ, ಬೋಯಿಂಗ್, ಏರ್ಬಸ್ ಮತ್ತು ಪಿಕ್ಸೆಲ್ ಕಂಪನಿಗಳೂ ರಾಜ್ಯದಲ್ಲಿ ನೆಲೆಯೂರಿವೆ. ಇವು ಕ್ರಮವಾಗಿ ಪವರ್ ಸಿಸ್ಟಂ ಮತ್ತು ಪ್ರೊಪಲ್ಶನ್, ಸ್ಟ್ರಕ್ಚರಲ್ ಮತ್ತು ಮೆಕ್ಯಾನಿಕಲ್ ಬಿಡಿಭಾಗಗಳು, ವಿಶೇಷ ಪರಿಣತಿಯ ತಂತ್ರಜ್ಞಾನಗಳಲ್ಲಿ ಮಹತ್ತರ ಸಾಧನೆ ಮಾಡಿವೆ. ವಸ್ತುಗಳ ತಯಾರಿಕಾ ಚಟುವಟಿಕೆಗಳನ್ನು ಆಧರಿಸಿದ ಆರ್ಥಿಕತೆಯಲ್ಲಿ ವೈಮಾಂತರಿಕ್ಷ ವಲಯವು ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯದ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿಯು ಆಕರ್ಷಕವಾಗಿದ್ದು, ಹೂಡಿಕೆದಾರರಿಗೆ ಒಳ್ಳೆಯ ಪ್ರೋತ್ಸಾಹ ಭತ್ಯೆಗಳನ್ನು ನೀಡಲಾಗುತ್ತದೆ. ಇದರ ಜತೆಗೆ ನಮ್ಮಲ್ಲಿರುವ ಸಂಶೋಧನಾ ಸಂಸ್ಕೃತಿಯು ಈ ಕಾರ್ಯಕ್ಕೆ ಪೂರಕವಾಗಿ, ಬಲ ತುಂಬುತ್ತಿದೆ ಎಂದು ಅವರು ಸಚಿವ ಎಂ.ಬಿ. ಪಾಟೀಲ್ ಹೇಳಿದರು. ಹೊಸದಾಗಿ ತೆರೆದಿರುವ ಜಿಸಿಸಿ ಕೇಂದ್ರದಲ್ಲಿ 700 ಮಂದಿ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ರೋಲ್ಸ್ ರಾಯ್ಸ್ ಸಿಎಫ್ಒ ಹೆಲೆನ್ ಮ್ಯಾಕಬೆ, ಬ್ರಿಟಿಷ್ ಹೈಕಮಿಷನರ್ ಲಿಂಡಿ ಕೆಮರಾನ್ ಉಪಸ್ಥಿತರಿದ್ದರು. ರೋಲ್ಸ್-ರಾಯ್ಸ್ ಕಂಪನಿಯು ಸ್ಥಾಪಿಸಿರುವ ಜಿಸಿಸಿ ಕೇಂದ್ರದಿಂದ ಕೈಗಾರಿಕಾ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಬಹುದು.
Read Also : ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ : ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಭಾಷಣ