ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಇಂದು ದೆಹಲಿಯ ಗಂಗಾ ರಾಮ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 81 ವರ್ಷದವರಾಗಿದ್ದ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ರು. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಸ್ಥಾಪಕರಾಗಿದ್ದ ಸೊರೇನ್, ಮೂರು ಬಾರಿ ಸಿಎಂ ಆಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಸದ್ಯ ಪುತ್ರ ಹೇಮಂತ್ ಸೊರೇನ್ ಪ್ರಸ್ತುತ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದು, ತಮ್ಮ ತಂದೆಯ ನಿಧನ ಸುದ್ದಿಯನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ, “ಗೌರವಾನ್ವಿತ ಗುರು ದಿಶೋಮ್ ಅವರು ನಮ್ಮೆಲ್ಲರನ್ನೂ ಅಗಲಿದ್ದಾರೆ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಶಿಬು ಸೊರೇನ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಶಿಬು ಸೊರೇನ್ ಜನಸಾಮಾನ್ಯರ ನಾಯಕ. ಬುಡಕಟ್ಟು ಸಮುದಾಯದ ಸಬಲೀಕರಣ, ಬಡವರ ಮತ್ತು ಹಿಂದುಳಿದವರ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ನಿಧನ ವಾರ್ತೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಪುತ್ರ ಸಿಎಂ ಹೇಮಂತ್ ಸೊರೇನ್ ಅವರೊಂದಿಗೆ ಮಾತನಾಡಿ ದುಃಖ ವ್ಯಕ್ತಪಡಿಸಿದ್ದೇನೆ” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

