ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ (Winter Session) ಮತ್ತೊಮ್ಮೆ ಕುರ್ಚಿ ಫೈಟ್ ರಾರಾಜಿಸಿದೆ.
ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ (Congress) ಕುರ್ಚಿ ಕದನದ ಚರ್ಚೆ ಕೂಡ ನಡೆಯಿತು. ಈ ವೇಳೆ ಸಿಎಂ ಕಾಲೆಳೆದ ವಿಪಕ್ಷ ನಾಯಕ ಆರ್.ಅಶೋಕ್ (R Ashok), ನೀವು 4 ದಿನಗಳಿಂದ ಬಳಲಿದ್ರಿ, ನಾವು ರಾಜಕೀಯ ನಿಶ್ಯಕ್ತಿ ಅನ್ಕೊಂಡಿದ್ವಿ. ನಿಮಗೆ ರಾಜಕೀಯ ಶಕ್ತಿ ಬಂದಿದೆಯಾ? ಎಂದರು. ಇದಕ್ಕೆ ಉತ್ತರ ನೀಡಿದ ಸಿಎಂ, ನನಗೆ ರಾಜಕೀಯ ನಿಶ್ಯಕ್ತಿ ಇಲ್ವೇ ಇಲ್ಲ, ಅಂತಹ ಅವಕಾಶ ಸೃಷ್ಟಿಯಾಗೋದಿಲ್ಲ. ರಾಜಕೀಯವನ್ನು ಅಷ್ಟೊಂದು ತಲೆ ಕೆಡಿಸಿಕೊಂಡು ಮಾಡೋ ಅಗತ್ಯವೂ ಇಲ್ಲ ಎಂದು ಹೇಳಿದರು. ಈ ವೇಳೆ ಎರಡೂವರೆ ವರ್ಷ ಸಿಎಂ ಅಂತ ತೀರ್ಮಾನ ಆಗಿಲ್ಲ. ಶಾಸಕರು 5 ವರ್ಷಕ್ಕೆ ಸಿಎಂ ಆಯ್ಕೆ ಮಾಡಿದ್ದಾರೆ. ನಾನು ಐದು ವರ್ಷಕ್ಕೆ ಸಿಎಂ ಆಗಿ ಆಯ್ಕೆ ಆಗಿದ್ದೇನೆ ಎಂದು ಆರ್. ಅಶೋಕ್ ಮಾತಿಗೆ ತಿರುಗೇಟು ಕೊಟ್ಟು, ನೀನು ಬೇಕಾದರೆ ನಾನೇ 5 ವರ್ಷ ಸಿಎಂ ಅಂತಾ ಹೇಳು ಅಶೋಕ್ ಅಂತಾ ಟಾಂಗ್ ಕೊಟ್ಟರು.
ಎರಡೂವರೆ ವರ್ಷಕ್ಕೆ ಅಂತ ಹೇಳೇ ಇಲ್ಲ, ಆ ತೀರ್ಮಾನ ಆಗಿಲ್ಲ. ಈಗ ನಾನೇ ಮುಖ್ಯಮಂತ್ರಿ, ಮುಂದೆಯೂ ನಾನೇ ಇರುತ್ತೇನೆ. ಬಹುಶಃ ಹೈಕಮಾಂಡ್ ನನ್ನ ಪರವೇ ಇದೆ. ಈಗಲೂ ನಾನೇ ಮುಖ್ಯಮಂತ್ರಿ, ಹೈಕಮಾಂಡ್ ಹೇಳೋವರೆಗೂ ನಾನೇ ಮುಖ್ಯಮಂತ್ರಿ. ನನಗೆ ದೈಹಿಕ ನಿಶ್ಯಕ್ತಿ ಇರಬಹುದು, ರಾಜಕೀಯ ನಿಶ್ಯಕ್ತಿ ಇಲ್ಲ, ಈಗಲೂ ಇಲ್ಲ, ಮುಂದೆಯೂ ಇಲ್ಲ, ಹಿಂದೆಯೂ ಇರಲಿಲ್ಲ. ಜನರ ಆಶೀರ್ವಾದ ಇದ್ದರೆ ಮಾತ್ರ ಅಧಿಕಾರ, ನಾನು ಹಣೆಬರಹದಲ್ಲಿ ನಂಬಿಕೆ ಇಟ್ಟಿಲ್ಲ ಎಂದು ಹೇಳಿದರು. ಈ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಸಿಎಂ ಫೈಟ್ ಶುರುವಾದಂತಾಗಿದೆ.

