ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಕದನ ತಾರಕ್ಕೇರಿದೆ. ಸಿಎಂ ಕುರ್ಚಿ ಖಾಲಿ ಇಲ್ಲದೇ ಇದ್ರೂ, ಸ್ವಪಕ್ಷದವರೇ ಸಿಎಂ ಬದಲಾವಣೆ ಆಗಬೇಕು ಅನ್ನೋ ಹೇಳಿಕೆ ಪದೆ ಪದೇ ನೀಡ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದೊಡ್ಡಿದೆ. ಡಿಕೆಶಿ ಬಣದಿಂದ ಒಬ್ಬೊಬ್ಬರಾಗಿಯೇ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಅನ್ನೋ ಹೇಳಿಕೆಗಳು ನೀಡ್ತಿದ್ದಾರೆ.
ಕೆಲದಿನಗಳ ಹಿಂದೆಯಷ್ಟೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಡಿಕೆಶಿ ಸಿಎಂ ಆಗಬೇಕು ಅಂತಾ ಹೇಳಿದ್ರು, ಇವರ ಹೇಳಿಕೆ ಭಾರೀ ಚರ್ಚೆ ಹುಟ್ಟುಹಾಕಿತ್ತು. ಪ್ರತಿಪಕ್ಷಗಳಿಗೆ ಇಕ್ಬಾಲ್ ಹೇಳಿಕೆ ಅಸ್ತ್ರವಾಗಿತ್ತು. ಇದೀಗ ಮತ್ತೊರ್ವ ಕಾಂಗ್ರೆಸ್ ಶಾಸಕ ಸಿಎಂ ಬದಲಾವಣೆ ಹೇಳಿಕೆ ನೀಡಿದ್ದಾರೆ. ಡಿಕೆಶಿ ಸಿಎಂ ಆಗಬೇಕು ಅಂತಾ ಸಿಪಿ ಯೋಗೇಶ್ವರ್ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.
ರಾಮನಗರ ಜಿಲ್ಲೆಯ ಎಲ್ಲ ಶಾಸಕರಿಗೆ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗೋದು ಬೇಕು, ಆದರೆ ಅವರು ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಅನ್ನುತ್ತಾರೆ ಅಂತಾ ಸಿಪಿ ಯೋಗೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಚನ್ನಪಟ್ಟಣ ಶಾಸಕ ಸಿಪಿ ಯೋಗೇಶ್ವರ್, ಜನಾಭಿಪ್ರಾಯ ಅದೇ ಆಗಿದೆ. ಜಿಲ್ಲೆಯ ಶಾಸಕರು ಸಹ ಅದನ್ನು ಬಯಸುತ್ತೇವೆ, ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು, ಆದರೆ ತಮ್ಮ ಪಕ್ಷದ ಹೈಕಮಾಂಡ್ ಅದನ್ನೆಲ್ಲ ತೀರ್ಮಾನಿಸುತ್ತದೆ, ತಾನೇನಿದ್ದರೂ ಅಭಿಪ್ರಾಯ ತಿಳಿಸಬಹುದಷ್ಟೇ ಎಂದು ಯೋಗೇಶ್ವರ್ ಹೇಳಿದ್ದಾರೆ.
