Site icon BosstvKannada

Bengaluru Rains : ಸಿಲಿಕಾನ್‌ ಸಿಟಿಯಲ್ಲಿ ವರುಣಾರ್ಭಟ ; ಜನರ ಪರದಾಟ

ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಸಿಲಿಕಾನ್ ಸಿಟಿಗೆ ಮಳೆರಾಯ ತಂಪೆರೆದಿದ್ದಾನೆ. ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಧಾರಾಕಾರ ಮಳೆ(Bengaluru Rains)ಯಾಗ್ತಿದೆ. ನಗರದ ಹಲವು ಕಡೆ ಗುಡುಗು ಸಹಿತ ಭಾರೀ ಮಳೆ ಯಾಗ್ತಿದ್ದು, ಜನ ಮಳೆಗೆ ಸಿಲುಕಿ ಪರದಾಡ್ತಿದ್ದಾರೆ. ಮಳೆಯಿಂದ ಟ್ರಾಫಿಕ್‌ ಜಾಮ್‌(Traffic Jam) ಉಂಟಾಗಿ ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನೂ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗ್ತಿದೆ. ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆ ನದಿಯಂತಾಗಿದ್ದು, ಅಂಡರ್‌ಪಾಸ್‌ಗೆ ನೀರು ನುಗ್ಗಿದೆ.

ಇನ್ನು ಬೆಂಗಳೂರು ಸೇರಿದಂತೆ ರಾಜ್ಯದ 21 ಕಡೆಗಳಲ್ಲಿ ಭಾರೀ ಮಳೆಯಾಗ್ತಿದೆ.  ರಾಜ್ಯದ ಹಲವೆಡೆ ಇನ್ನೂ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ಕೊಟ್ಟಿದೆ. ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಹಲವೆಡೆ ವರುಣನ ಆರ್ಭಟ ಜೋರಾಗಿದೆ. ಟೌನ್ ಹಾಲ್, ಮೈಸೂರು ಬ್ಯಾಂಕ್‌ ಸರ್ಕಲ್, ಮೆಜೆಸ್ಟಿಕ್‌, ಕೆ.ಆರ್‌. ಮಾರ್ಕೆಟ್, ಲಾಲ್ ಬಾಗ್ ಸುತ್ತಾಮುತ್ತ ಭರ್ಜರಿ ಮಳೆ ಆಗಿದೆ.

ವಸಂತನಗರ, ಕಬ್ಬನ್ ಪಾರ್ಕ್ ರಸ್ತೆ, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಮಳೆಗೆ ವಾಹನ ಸವಾರರ ಪರದಾಡುವ ದೃಶ್ಯ ಕಂಡು ಬಂದಿದೆ.

ಹವಮಾನ ಇಲಾಖೆಯಿಂದ ಈ ಜಿಲ್ಲೆಗಳಲ್ಲಿ ಮುನ್ಸೂಚನೆ

ಮೇ 13 ರಿಂದ 19ರವರೆಗೆ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು ಮೇ 15ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮೇ 14ರಂದು ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಹಾಗೂ ಮೇ 15ರಂದು ವಿಜಯಪುರ, ಬೆಳಗಾವಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮೇ 13ರಿಂದ 19ರವರೆಗೆ ಮಳೆಯಾಗಲಿದ್ದು, ಮೊದಲ 2 ದಿನ ಹೊರತು ಪಡಿಸಿ ಉಳಿದ ಎಲ್ಲಾ ದಿನ ವ್ಯಾಪಕ ಮಳೆಯಾಗಲಿದೆ. ಮೇ 13ರಂದು ಚಿತ್ರದುರ್ಗ, ಹಾಸನ, ಕೊಡಗು. ಮೈಸೂರು ಹಾಗೂ ಮೇ 14ರಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ.

Exit mobile version