ಬೆಂಗಳೂರು: ಬಿಇ ವಿದ್ಯಾರ್ಥಿಯೋರ್ವನ ನಿರ್ಲಕ್ಷ್ಯಕ್ಕೆ ವೃದ್ಧನ ಬಲಿಯಾಗಿರುವ ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯ (Bengaluru City) ಆರ್ಎಂವಿ ಎಕ್ಸ್ಟೆನ್ಷನ್ ಹತ್ತಿರ ಈ ಘಟನೆ ನಡೆದಿದೆ. ಚಂದ್ರಶೇಖರ ರೆಡ್ಡಿ (64) ಸ್ಥಳದಲ್ಲೇ ಸಾವನ್ನಪ್ಪಿರುವ ವ್ಯಕ್ತಿ. ಶಿಶಿರ್ ಸುಧೀರ್ ಪಾಟೀಲ್(19) ಎಂಬ ಯುವಕ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಪರಿಣಾಮ ವೃದ್ಧ ವ್ಯಕ್ತಿಗೆ ಡಿಕ್ಕಿ ಹೊಡೆಸಿದ್ದಾನೆ. ವೃದ್ಧಗೆ ಗುದ್ದಿದ ನಂತರ ಸಿಯಾಜ್ ಕಾರು ಅಲ್ಲೇ ನಿಂತಿದ್ದ ಎರ್ಟಿಗಾ ಕಾರಿಗೂ ಮತ್ತೆ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ವೃದ್ಧ ಹಾರಿ ಬಿದ್ದಿದ್ದಾರೆ.
ಚಂದ್ರಶೇಖರ್ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ, ಶಿಶಿರ್, ಬಿಇ ಪ್ರಥಮ ಸೆಮಿಸ್ಟರ್ ಓದುತ್ತಿದ್ದಾನೆ ಎನ್ನಲಾಗಿದೆ. ಅಲ್ಲದೇ, ಘಟನೆಯಲ್ಲಿ ಯುವತಿ ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡ ಯುವಕ ಹಾಗೂ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

