ಬೆಂಗಳೂರು, ಡಿ.06 : ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಸುಸಜ್ಜಿತ Electric Rapid Transit (E-RT) ಯೋಜನೆ ಕುರಿತು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಭೆಯಲ್ಲಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಭಾಗವಹಿಸಿದ್ದರು.

ಸಭೆಯಲ್ಲಿ ಯೋಜನೆಯ ಕುರಿತಾದ ತಾಂತ್ರಿಕ ಅಂಶಗಳು, ಕಾರಿಡಾರ್‌ಗಳು, ಹಣಕಾಸು ವ್ಯವಸ್ಥೆ ಸೇರಿದಂತೆ ಮತ್ತಿತರ ಅಂಶಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮುಖ್ಯಮಂತ್ರಿಗಳಿಗೆ ಸಚಿವರು ವಿವರಿಸಿದರು. ಪ್ರಾತ್ಯಕ್ಷಿಕೆ ವೀಕ್ಷಿಸಿದ ಮುಖ್ಯಮಂತ್ರಿಗಳು, ಇನ್ನೂ ಹೆಚ್ಚಿನ ಮೌಲ್ಯಮಾಪನಕ್ಕಾಗಿ ಸಾರಿಗೆ ಮತ್ತು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುವಂತೆ HESS ಇಂಡಿಯಾ ಮತ್ತು ಎಸ್‌ಎಸ್‌ಬಿಗೆ ಸೂಚಿಸಿ ಈ ಪ್ರಸ್ತಾವನೆಯನ್ನು ಹೆಚ್ಚಿನ ಚರ್ಚೆ ಮತ್ತು ಅಗತ್ಯ ತೀರ್ಮಾನ ಕೈಗೊಳ್ಳಲು ಮುಂದಿನ ಸಂಪುಟ ಸಭೆಯ ಗಮನಕ್ಕೆ ತರುವುದಾಗಿ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇ-ಆರ್‌ಟಿಯು ಇತರ ಸಾಂಪ್ರದಾಯಿಕ ಮೆಟ್ರೋಗೆ ಹೋಲಿಸಿದರೆ ಹೆಚ್ಚು ಆರ್ಥಿಕ ಪರಿಣಾಮಕಾರಿ ಹೇಗೆ ಎಂಬುದನ್ನು ವಿವರಿಸಿ ಹುಬ್ಬಳ್ಳಿ-ಧಾರವಾಡದಂತಹ ಹೆಚ್ಚಿನ ಪ್ರಯಾಣಿಕರನ್ನು ಹೊಂದಿರುವ ನಗರಕ್ಕೆ ಈ ವ್ಯವಸ್ಥೆ ಸೂಕ್ತವಾಗಿದೆ. ಭವಿಷ್ಯ ದಿನಗಳಿಗೆ ಬೇಕಾದ ಸಂಪರ್ಕವನ್ನು ನೀಡುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ರಣದೀಪ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ದೀಪಾ ಚೋಳನ್ ಉಪಸ್ಥಿತರಿದ್ದರು.

ಸಚಿವ ಸಂತೋಷ್‌ ಲಾಡ್‌ ಪರಿಶ್ರಮ :
ಹುಬ್ಬಳ್ಳಿ-ಧಾರವಾಡ ನಡುವಿನ ಬಿಆರ್‌ಟಿಎಸ್‌ನ ಸಮಸ್ಯೆಗಳನ್ನು ಅರಿಯಲು ಸಚಿವ ಸಂತೋಷ್ ಲಾಡ್‌ ಕೆಲವು ತಿಂಗಳ ಹಿಂದೆ ಬಿಆರ್‌ಟಿಎಸ್‌ ಮಾರ್ಗದಲ್ಲಿ ಸ್ವತಃ ಪ್ರಯಾಣಿಸಿ ಪ್ರಯಾಣಿಕರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ತಿಳಿದುಕೊಂಡಿದ್ದರು.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಇಆರ್‌ಟಿ ಪರಿಕಲ್ಪನೆಯ ಹಿಂದೆ ಸಚಿವ ಸಂತೋಷ್‌ ಲಾಡ್‌ ಅವರ ಪರಿಶ್ರಮ ಸಾಕಷ್ಟು ಇದೆ. ಈ ಯೋಜನೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ವಿಶ್ವ ದರ್ಜೆಯ ಸಾರಿಗೆ ವ್ಯವಸ್ಥೆಯನ್ನು ಮಹಾನಗರದಲ್ಲಿ ಜಾರಿ ಮಾಡಬೇಕು ಎಂದು ಸ್ವತಃ ಮುತುವರ್ಜಿ ವಹಿಸಿದ್ದಾರೆ.

ಇಆರ್‌ಟಿ ಜಾರಿ ಕುರಿತು ಸಚಿವ ಸಂತೋಷ್ ಲಾಡ್‌ ಧಾರವಾಡದಲ್ಲಿ ಅಧಿಕಾರಿಗಳು ಹಾಗೂ ಪಾಲುದಾರರೊಂದಿಗೆ ಸಭೆ ನಡೆಸಿದ್ದರು. ಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೂ ಸಹ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು.

Share.
Leave A Reply