ರಾಮನಗರ ಜಿಲ್ಲೆ ಬೆನ್ನಲ್ಲೇ ಈಗ ರಾಜ್ಯ ಸರ್ಕಾರದ ಕಣ್ಣು ಕಲ್ಪತರ ನಾಡು ತುಮಕೂರು ಕಡೆ ಹಾಯ್ದಿದೆ. ಸದ್ಯ ತುಮಕೂರು ಜಿಲ್ಲೆಯ ಬಗ್ಗೆ ಪರಮೇಶ್ವರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಮಾರ್ಪಡಿಸುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಬೆಂಗಳೂರು ನಗರ ಶರವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಅಕ್ಕಪಕ್ಕದ ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರದವರೆಗೂ ವಿಸ್ತರಿಸಿಕೊಳ್ಳಬಹುದು ಅಂತಾ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಪರಮೇಶ್ವರ್ ಸ್ಫೋಟಕ ಹೇಳಿಕೆ
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ತುಮಕೂರು ಜಿಲ್ಲೆಯನ್ನು ಮುಂದಿನ ದಿನಗಳಲ್ಲಿ ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಮಾರ್ಪಡಿಸುವ ಸಿದ್ಧತೆಗಳು ನಡೆದಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಿದ ಬೆನ್ನಲ್ಲೇ, ತುಮಕೂರು ಬಗ್ಗೆ ಪರಮೇಶ್ವರ್ ನೀಡಿರುವ ಹೇಳಿಕೆಗೆ ಈಗ ವಿಪಕ್ಷಗಳು ಹರಿಹಾಯ್ದಿದ್ದಾರೆ.
ತುಮಕೂರು ಜಿಲ್ಲೆ ಎನ್ನುವುದಕ್ಕೂ ಬೆಂಗಳೂರು ಉತ್ತರ ಜಿಲ್ಲೆ ಎನ್ನುವುದಕ್ಕೂ ವ್ಯತ್ಯಾಸವಿದೆ. ನ್ಯೂಯಾರ್ಕ್ನಲ್ಲಿ ಇರುವವರಿಗೆ ಬೆಂಗಳೂರು ಉತ್ತರ ಎಂದರೆ ಸುಲಭವಾಗಿ ಅರ್ಥವಾಗುತ್ತದೆ. ತುಮಕೂರು ಜಿಲ್ಲೆ ಎಂದರೆ ಎಲ್ಲೋ ಇದೆ ಎಂಬ ಭಾವನೆ ಮೂಡುತ್ತದೆ. ಬೆಂಗಳೂರು ನಗರ ಈಗಾಗಲೇ ನೆಲಮಂಗಲದಿಂದ ಹೊರಕ್ಕೆ ಬೆಳವಣಿಗೆ ಕಂಡಿದೆ. ಅಲ್ಲಿಂದ 30 ಕಿಲೋಮೀಟರ್ ಬಂದರೆ ತುಮಕೂರು ತಲುಪಬಹುದು. ಹಾಗಾಗಿ ನಗರ ವ್ಯಾಪ್ತಿ ವಿಸ್ತಾರ ಮಾಡಿದರೆ ಅನುಕೂಲವಾಗುತ್ತದೆ. ಈಗಾಗಲೇ 14 ಗ್ರಾಮ ಪಂಚಾಯಿತಿಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಲು ಪ್ರಸ್ತಾವ ಸಿದ್ಧಪಡಿಸಲಾಗಿದೆ.
ತುಮಕೂರು ಬೆಂಗಳೂರು ಉತ್ತರ ಜಿಲ್ಲೆಯಾಗುತ್ತಾ?
ಮುಂದಿನ ದಿನಗಳಲ್ಲಿ ತುಮಕೂರು ನಗರವೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಳ್ಳೆಯ ಯೋಜನೆ ರೂಪಿಸಿದ್ದಾರೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಈ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿ, ಆದೇಶ ಹೊರಡಿಸಿದೆ. ಬೆಂಗಳೂರು ದಕ್ಷಿಣ ಎಂದ ತಕ್ಷಣ ಅದರ ಸ್ವರೂಪ ಬದಲಾಗುತ್ತದೆ. ಅದೇ ರೀತಿ ತುಮಕೂರು ಜಿಲ್ಲೆಯನ್ನು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ ಎಂದಿದ್ದಾರೆ.

