ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಸಿನಿಮಾ ತಂಡಕ್ಕೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಮೊನ್ನೆಯಷ್ಟೇ ಮಿಮಿಕ್ರಿ ಕಲಾವಿದ ವಿಜು ವಿ.ಕೆ ಅವರು ಹೋಂ ಸ್ಟೇಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಈ ಘಟನೆ ಮಾಸುವ ಮುನ್ನವೆ ಕಾಂತಾರ ಚಾಪ್ಟರ್ 1 ಚಿತ್ರೀಕರಣದ ವೇಳೆ ಮತ್ತೊಂದು ಅವಘಡ ಸಂಭವಿಸಿದೆ.
ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಈ ಸಿನಿಮಾದ ಶೂಟಿಂಗ್ ವೇಳೆ ಬೋಟ್ ಮಗುಚಿ ಬಿದ್ದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿರುವ ಮಾಸ್ತಿಕಟ್ಟೆ ಮಾಣಿ ಜಲಾಶಯದಲ್ಲಿ ಕಾಂತಾರ ಚಾಪ್ಟರ್ 1 ಶೂಟಿಂಗ್ ನಡೆಯುತ್ತಿತ್ತು. ಇದೇ ವೇಳೆ ಏಕಾಏಕಿ ದೋಣಿ ಮಗುಚಿ ಬಿದ್ದಿದೆ.
ಮಗುಚಿ ಬಿದ್ದ ದೋಣಿಯಲ್ಲಿ ನಟ ರಿಷಬ್ ಶೆಟ್ಟಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಕಲಾವಿದರು ಇದ್ದರು. ಆದ್ರೆ ದಿಢೀರ್ ಅಂತ ಬೋಟು ಮಗುಚಿದ್ದರಿಂದ ಕಲಾವಿದರು ಹಾಗೂ ತಂತ್ರಜ್ಞರು ಈಜುತ್ತಲೇ ದಡ ಸೇರಿದ್ದಾರೆ. ಆದ್ರೆ ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಜೀವ ಹಾನಿ ಆಗಿಲ್ಲ.
ಕಾಂತಾರ ಸಿನಿಮಾ ತಂಡ 15 ದಿನ ಶೂಟಿಂಗ್ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಕ್ಯಾಮೆರಾ ಸೇರಿದಂತೆ ಬೋಟ್ನಲ್ಲಿದ್ದ ಎಲ್ಲಾ ಪ್ರಾಪರ್ಟಿಗಳು ನೀರು ಪಾಲಾಗಿವೆ. ಸಿನಿಮಾ ರಿಲೀಸ್ ಆಗುವ ಮುನ್ನವೇ ಒಂದರ ಮೇಲೊಂದು ಅವಘಡಗಳು ಸಂಭವಿಸುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಸಿನಿಮಾನಲ್ಲಿ ನಟಿಸಿದ್ದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಮತ್ತೊಂದು ದೊಡ್ಡ ಅವಘಡ ಸಂಭವಿಸಿದ್ದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.

